ಮುಂಬೈ:ಮೈತ್ರಿ ಸರ್ಕಾರದ ವಿರುದ್ಧ ಸಿಡಿದೆದ್ದು ರಾಜೀನಾಮೆ ಸಲ್ಲಿಸಿದ ಕಾಂಗ್ರೆಸ್-ಜೆಡಿಎಸ್ನ ಶಾಸಕರಿಗೆ ಮುಂಬೈನಲ್ಲಿ ಪ್ರತಿಭಟನೆಯ ಬಿಸಿ ತಟ್ಟಿದೆ.
ಮೈತ್ರಿ ಸರ್ಕಾರದಲ್ಲಿ ನಮ್ಮನ್ನು ಕಡೆಗಣಿಸಲಾಗುತ್ತಿದೆ ಎಂದು ಆರೋಪಿಸಿದ 10ಕ್ಕೂ ಅಧಿಕ ಶಾಸಕರು ಸಿಎಂ ವಿರುದ್ಧ ಅಸಮಾಧಾನಗೊಂಡು ರಾಜೀನಾಮೆಯ ಬಳಿಕ ಮುಂಬೈನ ಸೋಫಿಟಲ್ ಹೋಟೆಲ್ನಲ್ಲಿ ತಂಗಿದ್ದಾರೆ. ಶಾಸಕರ ನಡೆಯನ್ನು ಖಂಡಿಸಿ ಹೋಟೆಲ್ ಮುಂಭಾಗದಲ್ಲಿ ಮಹಾರಾಷ್ಟ್ರ ಯುವ ಕಾಂಗ್ರೆಸ್ ಘಟಕದ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.
ಶಾಸಕರ ರಾಜೀನಾಮೆಯ ನಡೆ ಖಂಡನಾರ್ಹವಾದದ್ದು. ಕೂಡಲೇ ತಮ್ಮ ರಾಜೀನಾಮೆಯನ್ನು ವಾಪಸ್ ಪಡೆದು ಮೈತ್ರಿ ಸರ್ಕಾರದ ಪರ ನಿಲ್ಲುವಂತೆ ಪಟ್ಟು ಹಿಡಿದರು. ಈ ವೇಳೆ ಯುವ ಕಾಂಗ್ರೆಸ್ ಘಟಕದ ಉಪಾಧ್ಯಕ್ಷ ಸುರಜ್ ಸಿಂಗ್ ಠಾಕೂರ್ ಸೇರಿದಂತೆ ಇತರರನ್ನು ಪೊಲೀಸರು ವಶಕ್ಕೆ ಪಡೆದು ಬಳಿಕ ಬಿಡುಗಡೆ ಮಾಡಿದ್ದಾರೆ.
ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ ಹಿನ್ನೆಲೆ ಸೋಫಿಟಲ್ ಹೋಟೆಲ್ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ. ಮುನ್ನೆಚ್ಚರಿಕೆಯ ಕ್ರಮವಾಗಿ 3ಕ್ಕೂ ಹೆಚ್ಚು ತುಕುಡಿಗಳನ್ನು ನೇಮಕ ಮಾಡಲಾಗಿದೆ.