ಕರ್ನಾಟಕ

karnataka

By

Published : Oct 9, 2020, 7:48 PM IST

ETV Bharat / bharat

ಭ್ರಷ್ಟಾಚಾರ ಪ್ರಕರಣಗಳಲ್ಲಿ ಶಿಕ್ಷೆಗೊಳಗಾದ ಪ್ರಮುಖ ರಾಜಕೀಯ ನೇತಾರರಿವರು

ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್​ ಯಾದವ್​ ರಾಜಕೀಯ ಬಲ್ಲ ಎಲ್ಲ ಭಾರತೀಯರಿಗೂ ಚಿರಪರಿಚಿತ. ಮೇವು ಹಗರಣದಲ್ಲಿ ಅಪರಾಧಿಯಾಗಿ ಸೆಪ್ಟೆಂಬರ್ 2013 ರಲ್ಲಿ ಇವರಿಗೆ ನ್ಯಾಯಾಲಯ 5 ವರ್ಷ ಜೈಲುವಾಸ ಶಿಕ್ಷೆ ವಿಧಿಸಿತ್ತು. ಬಿಹಾರ ರಾಜ್ಯದ ಜೆಹಾನಾಬಾದ್​ ಕ್ಷೇತ್ರದ ಮಾಜಿ ಸಂಸದ ಜಗದೀಶ್​ ಶರ್ಮಾ ಅವರು ಸಹ ಮೇವು ಹಗರಣದಲ್ಲಿ ಅಪರಾಧಿಯಾಗಿ ಘೋಷಿಸಲ್ಪಟ್ಟಿದ್ದರು. ಸೆಪ್ಟೆಂಬರ್​ 2013 ರಲ್ಲಿ ಇವರಿಗೆ ನ್ಯಾಯಾಲಯ 4 ವರ್ಷದ ಜೈಲು ಶಿಕ್ಷೆ ನೀಡಿತ್ತು.

List of Convicted Politicians  in Corruption cases
List of Convicted Politicians in Corruption cases

ನವದೆಹಲಿ: ಭಾರತದಲ್ಲಿ ರಾಜಕೀಯಕ್ಕೂ ಭ್ರಷ್ಟಾಚಾರಕ್ಕೂ ಬಹು ಹಿಂದಿನ ಕಾಲದಿಂದಲೂ ಅವಿನಾಭಾವ ನಂಟು ಬೆಳೆದು ಬಂದಿದೆ. ರಾಜಕೀಯ ಅಧಿಕಾರ ನಡೆಸಿದವರಲ್ಲಿ ಪ್ರಾಮಾಣಿಕರೂ ಇದ್ದಾರೆ, ಹಾಗೆಯೇ ಭ್ರಷ್ಟರೂ ಇದ್ದಾರೆ. ಆದರೆ ಭ್ರಷ್ಟಾಚಾರ ಆರೋಪ ಎದುರಾದ ತಕ್ಷಣ ಅವರೆಲ್ಲ ಭ್ರಷ್ಟರು ಎಂದರ್ಥವಲ್ಲ. ಭಾರತದ ಕಾನೂನಿನ ಪ್ರಕಾರ ವಿಚಾರಣೆ ನಡೆದು ನ್ಯಾಯಾಲಯದಲ್ಲಿ ಅಂಥವರಿಗೆ ಶಿಕ್ಷೆಯಾದರೆ ಮಾತ್ರ ಅವರು ಅಪರಾಧಿಗಳೆನಿಸಿಕೊಳ್ಳುತ್ತಾರೆ. ಹಾಗೆ ಭ್ರಷ್ಟಾಚಾರ ನಡೆಸಿ ಕೊನೆಗೆ ನ್ಯಾಯಾಲಯದಲ್ಲಿ ಅಪರಾಧಿಗಳೆಂದು ಸಾಬೀತಾಗಿ ಜೈಲು ಪಾಲಾದವರು ಅದೆಷ್ಟೋ ಜನ ರಾಜಕಾರಣಿಗಳು ಭಾರತದಲ್ಲಿ ಆಗಿ ಹೋಗಿದ್ದಾರೆ, ಈಗಲೂ ಇದ್ದಾರೆ. ಹೀಗೆ ಭ್ರಷ್ಟಾಚಾರ ಪ್ರಕರಣಗಳಲ್ಲಿ ಅಪರಾಧಿಗಳಾಗಿ ಇತ್ತೀಚಿನ ವರ್ಷಗಳಲ್ಲಿ ಜೈಲಿಗೆ ಹೋದ ಕೆಲವು ಪ್ರಮುಖ ರಾಜಕಾರಣಿಗಳ ವೃತ್ತಾಂತವನ್ನು ನೋಡೋಣ.

ರಶೀದ್​ ಮಸೂದ್, ಕಾಂಗ್ರೆಸ್​: ರಶೀದ್​ ಮಸೂದ್ ಕಾಂಗ್ರೆಸ್​ ರಾಜಕಾರಣಿಯಾಗಿದ್ದು, ಕೇಂದ್ರ ಸಚಿವರಾಗಿದ್ದರು. ಎಂಬಿಬಿಎಸ್​ ಸೀಟ್​ ಹಗರಣದಲ್ಲಿ ಅಪರಾಧಿ ಎಂದು ಸಾಬೀತಾಗಿ ಸೆಪ್ಟೆಂಬರ್​ 2013 ರಲ್ಲಿ ಇವರಿಗೆ 4 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿತ್ತು. ಭ್ರಷ್ಟಾಚಾರ ಪ್ರಕರಣದಲ್ಲಿ ಅಪರಾಧಿ ಎಂದು ಸಾಬೀತಾಗಿ ಸಂಸದ ಸ್ಥಾನದಿಂದ ವಜಾಗೊಂಡ ಭಾರತದ ಪ್ರಥಮ ಜನಪ್ರತಿನಿಧಿ ಎಂಬ ಕುಖ್ಯಾತಿಗೆ ಇವರು ಪಾತ್ರರಾಗಿದ್ದಾರೆ.

ಲಾಲು ಪ್ರಸಾದ್ ಯಾದವ್​, ಆರ್​ಜೆಡಿ: ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್​ ಯಾದವ್​ ರಾಜಕೀಯ ಬಲ್ಲ ಎಲ್ಲ ಭಾರತೀಯರಿಗೂ ಚಿರಪರಿಚಿತ. ಮೇವು ಹಗರಣದಲ್ಲಿ ಅಪರಾಧಿಯಾಗಿ ಸೆಪ್ಟೆಂಬರ್ 2013 ರಲ್ಲಿ ಇವರಿಗೆ ನ್ಯಾಯಾಲಯ 5 ವರ್ಷ ಜೈಲುವಾಸ ಶಿಕ್ಷೆ ವಿಧಿಸಿತ್ತು.

ಜಗದೀಶ್​ ಶರ್ಮಾ: ಬಿಹಾರ ರಾಜ್ಯದ ಜೆಹಾನಾಬಾದ್​ ಕ್ಷೇತ್ರದ ಮಾಜಿ ಸಂಸದ ಜಗದೀಶ್​ ಶರ್ಮಾ ಅವರು ಸಹ ಮೇವು ಹಗರಣದಲ್ಲಿ ಅಪರಾಧಿಯಾಗಿ ಘೋಷಿಸಲ್ಪಟ್ಟಿದ್ದರು. ಸೆಪ್ಟೆಂಬರ್​ 2013 ರಲ್ಲಿ ಇವರಿಗೆ ನ್ಯಾಯಾಲಯ 4 ವರ್ಷದ ಜೈಲು ಶಿಕ್ಷೆ ನೀಡಿತ್ತು.

ಜಗನ್ನಾಥ ಮಿಶ್ರಾ, ಕಾಂಗ್ರೆಸ್​:ಬಿಹಾರದ ಮಾಜಿ ಮುಖ್ಯಮಂತ್ರಿಯಾದ ಜಗನ್ನಾಥ ಮಿಶ್ರಾ ಅವರೂ ಸಹ ಮೇವು ಹಗರಣದಲ್ಲಿ ತಪ್ಪಿತಸ್ಥರು ಎಂದು ನ್ಯಾಯಾಲಯದಿಂದ ಘೋಷಿಸಲ್ಪಟ್ಟಿದ್ದರು. 2013 ರಲ್ಲಿ ಇವರು ಸಹ ಜೈಲು ಪಾಲಾದರು.

ಸುಖರಾಮ್​ (ಕಾಂಗ್ರೆಸ್​): ಹಿಮಾಚಲ ಪ್ರದೇಶ ಮೂಲದ ಸುಖರಾಮ್​ ಕೇಂದ್ರ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಆದಾಯ ಮೀರಿದ ಆಸ್ತಿ ಗಳಿಕೆ ಆರೋಪಕ್ಕೆ ಸಿಲುಕಿದ್ದ ಇವರು ನ್ಯಾಯಾಲಯದಿಂದ ಅಪರಾಧಿಯಾಗಿ ಘೋಷಿಸಲ್ಪಟ್ಟಿದ್ದರು. ನವೆಂಬರ್​ 2011 ರಲ್ಲಿ ಇವರ ವಿರುದ್ಧ ನ್ಯಾಯಾಲಯದಲ್ಲಿ ತೀರ್ಪು ಪ್ರಕಟವಾಗಿತ್ತು.

ಬಬನ್​ರಾವ್​ ಘೋಲಪ್​, ಶಿವಸೇನಾ: ಮಹಾರಾಷ್ಟ್ರ ಸರ್ಕಾರದಲ್ಲಿ ಸಚಿವರಾಗಿದ್ದ ಇವರು ಆದಾಯ ಮೀರಿದ ಆಸ್ತಿ ಹೊಂದಿದ್ದು ಸಾಬೀತಾಗಿ ನ್ಯಾಯಾಲಯದಿಂದ ಶಿಕ್ಷೆಗೊಳಗಾದರು. ಮಾರ್ಚ್​ 2014 ರಲ್ಲಿ ಇವರಿಗೆ 3 ವರ್ಷದ ಜೈಲು ಶಿಕ್ಷೆ ವಿಧಿಸಲಾಯಿತು.

ಸುರೇಶ್​ ಹಲವಣ್ಕರ್​, ಬಿಜೆಪಿ: ಇಚಲಕರಂಜಿ ಕ್ಷೇತ್ರದಿಂದ ಎರಡು ಬಾರಿ ಶಾಸಕರಾಗಿದ್ದ ಸುರೇಶ್ ಹಲ್ವಣ್ಕರ್​, ವಿದ್ಯುತ್​ ಕಳವು ಮಾಡಿದ ಆರೋಪಕ್ಕಾಗಿ ಜೈಲುಪಾಲಾಗಿದ್ದರು. ಮೇ 2014 ರಲ್ಲಿ ನ್ಯಾಯಾಲಯ ಇವರನ್ನು ಅಪರಾಧಿ ಎಂದು ಆದೇಶ ನೀಡಿತ್ತು.

ಜೆ. ಜಯಲಲಿತಾ, ಎಐಎಡಿಎಂಕೆ: ತಮಿಳು ನಾಡಿನ ಮುಖ್ಯಮಂತ್ರಿಯಾಗಿದ್ದ ಜಯಲಲಿತಾ ಆದಾಯ ಮೀರಿ ಆಸ್ತಿ ಗಳಿಸಿದ ಆರೋಪದಲ್ಲಿ ತಪ್ಪಿತಸ್ಥರೆಂದು ಸಾಬೀತಾಗಿತ್ತು. ಸೆಪ್ಟೆಂಬರ್​ 2014 ರಲ್ಲಿ ನ್ಯಾಯಾಲಯವು ಇವರನ್ನು ಅಪರಾಧಿ ಎಂದು ತೀರ್ಮಾನಿಸಿ ತೀರ್ಪು ನೀಡಿತ್ತು. ಆದರೆ ಮೇ 2015 ರಲ್ಲಿ ಕರ್ನಾಟಕ ಹೈಕೋರ್ಟ್​ ಇವರನ್ನು ನಿರ್ದೋಷಿ ಎಂದು ತೀರ್ಪು ನೀಡಿತ್ತು. ನಂತರ ಈ ಪ್ರಕರಣ ಸುಪ್ರೀಂ ಕೋರ್ಟಿನಲ್ಲಿ ವಿಚಾರಣೆಯ ಹಂತದಲ್ಲಿರುವಾಗಲೇ ಜಯಲಲಿತಾ ಅವರು ನಿಧನರಾಗಿದ್ದರಿಂದ 2017 ರಲ್ಲಿ ನ್ಯಾಯಾಲಯವು ಇವರ ವಿರುದ್ಧದ ಎಲ್ಲ ವಿಚಾರಣೆಗಳನ್ನು ರದ್ದುಗೊಳಿಸಿತ್ತು.

ವಿಕೆ ಶಶಿಕಲಾ, ಎಐಎಡಿಎಂಕೆ: ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಶಶಿಕಲಾ ಅವರು ಭ್ರಷ್ಟಾಚಾರ ಪ್ರಕರಣದಲ್ಲಿ ತಪ್ಪಿತಸ್ಥರೆಂದು ನ್ಯಾಯಾಲಯ ತೀರ್ಪು ನೀಡಿತ್ತು. ಫೆಬ್ರವರಿ 2017 ರಲ್ಲಿ ಇವರಿಗೆ ನ್ಯಾಯಾಲಯ 4 ವರ್ಷಗಳ ಸೆರೆವಾಸ ವಿಧಿಸಿತ್ತು.

ಓಂ ಪ್ರಕಾಶ ಚೌತಾಲಾ ಮತ್ತು ಮಗ ಅಜಯ್​ ಚೌತಾಲಾ, ಇಂಡಿಯನ್​ ನ್ಯಾಷನಲ್​ ಲೋಕ ದಳ: ಓಂ ಪ್ರಕಾಶ ಚೌತಾಲಾ ಹರಿಯಾಣದ ಮಾಜಿ ಮುಖ್ಯಮಂತ್ರಿ. ಶಿಕ್ಷಕರ ನೇಮಕಾತಿಯಲ್ಲಿ ಭಾರಿ ಅವ್ಯವಹಾರ ನಡೆಸಿದ್ದಕ್ಕಾಗಿ ಅಪ್ಪ, ಮಗ ಇಬ್ಬರನ್ನೂ ಕೆಳ ಹಂತದ ನ್ಯಾಯಾಲಯ ಅಪರಾಧಿಗಳೆಂದು 2013 ರಲ್ಲಿ ತೀರ್ಪು ನೀಡಿ 10 ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. ನಂತರ 2017 ರಲ್ಲಿ ಸುಪ್ರೀಂ ಕೋರ್ಟ್​ನಲ್ಲಿ ಸಹ ಕೆಳ ಹಂತದ ನ್ಯಾಯಾಲಯದ ತೀರ್ಪನ್ನು ಎತ್ತಿ ಹಿಡಿದಿತ್ತು.

ಮಧು ಕೋಡಾ, ಸ್ವತಂತ್ರ: ಜಾರ್ಖಂಡ್​ ರಾಜ್ಯದ ಮಾಜಿ ಮುಖ್ಯಮಂತ್ರಿ ಮಧು ಕೋಡಾ ಕಲ್ಲಿದ್ದಲು ಗಣಿ ಗುತ್ತಿಗೆ ನೀಡುವಲ್ಲಿ ಭ್ರಷ್ಟಾಚಾರ ಎಸಗಿದ್ದು ಸಾಬೀತಾಗಿತ್ತು. 2017 ರ ಡಿಸೆಂಬರ್​ನಲ್ಲಿ ನ್ಯಾಯಾಲಯವು ಇವರಿಗೆ ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು.

ದಿಲೀಪ್​ ರೇ:ಜಾರ್ಖಂಡ್​ ರಾಜ್ಯದ ಬಹುದೊಡ್ಡ ಹೊಟೇಲ್​ ಉದ್ಯಮಿ 66 ವರ್ಷದ ದಿಲೀಪ್​ ರೇ 1990ರಲ್ಲಿ ಬಿಜು ಜನತಾ ದಳದ ಸಂಸ್ಥಾಪಕ ಸದಸ್ಯರಾಗಿ ರಾಜಕೀಯಕ್ಕೆ ಬಂದರು. ನಂತರ ಬಿಜೆಡಿ ತೊರೆದು ಸ್ವತಂತ್ರ ಅಭ್ಯರ್ಥಿಯಾಗಿ ಬಿಜೆಪಿ ಸಹಾಯದಿಂದ ರಾಜ್ಯಸಭಾ ಸಂಸದರಾಗಿ ಆಯ್ಕೆಯಾಗಿದ್ದರು. ನಂತರ 2009 ರಲ್ಲಿ ಅಧಿಕೃತವಾಗಿ ಬಿಜೆಪಿ ಸೇರಿಕೊಂಡು 2014 ರಲ್ಲಿ ರೂರ್ಕೇಲಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾದರು. ಆದರೆ ಬ್ರಹ್ಮದಿಹಾ ಕಲ್ಲಿದ್ದಲು ಹಗರಣದಲ್ಲಿ ಸಿಲುಕಿದ ಇವರ ವಿರುದ್ಧ ಸಿಬಿಐ ತನಿಖೆ ಆರಂಭಿಸಿದ ನಂತರ 2018 ರಲ್ಲಿ ಬಿಜೆಪಿ ತೊರೆದರು. ಸದ್ಯ ಕಲ್ಲಿದ್ದಲು ಹಗರಣದಲ್ಲಿ ಅಪರಾಧಿ ಎಂದು ನ್ಯಾಯಾಲಯ ತೀರ್ಪು ನೀಡಿದ್ದು, ಬರುವ ಅಕ್ಟೋಬರ್​ 14 ರಂದು ಶಿಕ್ಷೆಯ ಪ್ರಮಾಣದ ಕುರಿತು ನ್ಯಾಯಾಲಯ ತೀರ್ಪು ನೀಡಲಿದೆ.

ABOUT THE AUTHOR

...view details