ಕರ್ನಾಟಕ

karnataka

'ಅಮ್ಮಾ ಎಂದರೆ ಏನೋ ಹರುಷವು..' ವಿಶ್ವ ತಾಯಂದಿರ ದಿನದ ಶುಭಾಶಯಗಳು

By

Published : May 10, 2020, 12:03 AM IST

ಆಕೆ ಯಾವುದೇ ಕ್ಷೇತ್ರದಲ್ಲಿದ್ದರೂ ತನ್ನ ಮಾತೃ ಗುಣವನ್ನು ಮರೆಯುವುದಿಲ್ಲ. ಪ್ರತಿದಿನ ಆಕೆ ಮಾಡುವ ತ್ಯಾಗವು ನಮಗೆ ಕಾಣದೇ ಇರಬಹುದು. ಆದ್ರೆ ಅವಳಿಗೆ ಅವಳೇ ಸಾಟಿ. ಜಗತ್ತಿನಲ್ಲಿ ಆಕೆಯ ಪಾತ್ರವನ್ನು ವಿವರಿಸಲು ಖಂಡಿತವಾಗಿಯೂ ಸಾಧ್ಯವಿಲ್ಲ.

International Mother's Day
ವಿಶ್ವ ತಾಯಂದಿರ ದಿನ

ಹೈದರಾಬಾದ್:ಅಮ್ಮ... ಜೀವನದಲ್ಲಿ ಈ ಹೆಸರು ನಾವು ಮೊದಲು ಕೇಳಿರೋದು, ಹೇಳಿರೋದು. ನಾವು ಅತ್ತರೆ ಕಣ್ಣೀರು ಹಾಕೋಳು ಅಮ್ಮ. ನಮಗೆ ನೋವಾದರೆ ನೋವು ಅನುಭವಿಸುವವಳು ಆಕೆ. ಜೀವನದಲ್ಲಿ ನಮಗೆ ಒಲಿಯುವ ಅದ್ಭುತವಾದ ಸಂಬಂಧ ಅವಳೊಂದಿಗಿನದು. ನಿಷ್ಕಲ್ಮಶ ಪ್ರೀತಿಗೆ ಇನ್ನೊಂದು ರೂಪವೇ ಅಮ್ಮ. ನಿನಗೆ ಈ ದಿನ, ತಾಯಂದಿರ ದಿನದ ಶುಭಾಶಯಗಳು.

ಜಾಗತಿಕವಾಗಿ 2 ಲಕ್ಷ ಜೀವಗಳನ್ನು ಬಲಿ ಪಡೆದಿರುವ ಮಾರಣಾಂತಿಕ ಕೊರೊನಾ ವೈರಸ್​ ಸಾಂಕ್ರಾಮಿಕ ರೋಗ ಜಗತ್ತಿನಲ್ಲಿ ಮುಂದುವರಿಯುತ್ತಿದೆ. ಈ ಸಂದರ್ಭ ಅನೇಕ ತಾಯಂದಿರು ತಮ್ಮ ಕುಟುಂಬ ಮಾತ್ರವಲ್ಲದೇ ಸಮಾಜದ ಬಗೆಗೂ ತೋರಿದ ಪ್ರೀತಿ, ಆದರ್ಶ, ಧೈರ್ಯ, ದೃಢ ನಿಶ್ಚಯಗಳು ಮಾತೃ ಹೃದಯ ಏನೆಂಬುವುದನ್ನು ಮತ್ತೆ ಜಗತ್ತಿಗೆ ಸಾರಿದೆ.

ಅಮ್ಮನ ಪ್ರೀತಿಯ ಆಳವನ್ನು ತೋರಿರುವ ಕೆಲ ಘಟನೆಗಳು ನಿಮಗಾಗಿ:

  • ಅಮ್ಮ ಬೇಕೆಂದು ಅಳುತ್ತಿರುವ ಮಗು ಕಂಡು ಮರುಗಿದ ಕರ್ನಾಟಕದ ನರ್ಸ್​

ಬೆಳಗಾವಿಯ ಆಸ್ಪತ್ರೆಯೊಂದರಲ್ಲಿ ನಿಂತಿರುವ ತನ್ನ ತಾಯಿಯನ್ನು ನೋಡಿ ತನ್ನ ತಂದೆಯ ಮೋಟಾರ್​ ಸೈಕಲ್​ನಲ್ಲಿ ಮುಂದೆ ಕುಳಿತಿದ್ದ ಪುಟ್ಟ ಹುಡುಗಿ ಕೈ ಬೀಸುತ್ತಾ ಅಳುತ್ತಿರುವ ದೃಶ್ಯವನ್ನು ಮೊನ್ನೆ ತಾನೆ ನಾವೆಲ್ಲರೂ ನೋಡಿದ್ದೇವೆ. ಆ ತಾಯಿ ದಾದಿಯಾಗಿದ್ದು, ಅವರು ಕೊರೊನಾ ವಿರುದ್ಧದ ಯುದ್ಧದಲ್ಲಿ ಹೋರಾಟಗಾರ್ತಿಯಾಗಿದ್ದರು. ಆ ಹೋರಾಟ ಗೆಲ್ಲುವ ಪಣ ತೊಟ್ಟಿದ್ದ ಆಕೆ ಮನೆಗೂ ಹೋಗದೆ 15 ದಿನಗಳಿಂದ ಕುಟುಂಬವನ್ನು ತೊರೆದು ಅಜ್ಞಾತಳಾಗಿದ್ದಳು. ಅಸಹಾಯಕ ಆ ತಾಯಿ ಕಣ್ಣೀರನ್ನು ನಿಯಂತ್ರಿಸಲು ಸಾಧ್ಯವಾಗದೆ ಒಳಗೇ ಕುಸಿದಿದ್ದಳು. ಆದರೂ ಆಕೆ ತನ್ನ ಮಗುವನ್ನು ದೂರದಿಂದಲೇ ಕಂಡು ಸಂತೋಷಪಡುವುದು ಕಣ್ಣಂಚನ್ನು ನೀರಾಗಿಸಿತ್ತು.

ಈ ವಿಡಿಯೋವನ್ನು ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್.ಯಡಿಯುರಪ್ಪ ಟ್ವೀಟ್ ಮಾಡಿದ್ದರು.

  • ಮಗನಿಗಾಗಿ 1,400 ಕಿ.ಮೀ. ಸ್ಕೂಟರ್‌ನಲ್ಲಿ ಪಯಣಿಸಿದಳು ತಾಯಿ

ತೆಲಂಗಾಣದ ನಿಜಾಮಾಬಾದ್ ಪ್ರದೇಶದಲ್ಲಿ ವಾಸಿಸುತ್ತಿರುವ ಶಿಕ್ಷಕಿ ರಜಿಯಾ ಬೇಗಂ, ಕಠಿಣವಾದ ಲಾಕ್‌ಡೌನ್ ಮಧ್ಯೆಯೇ ಲಾಕ್​ಡೌನ್​ ಮಾನದಂಡಗಳನ್ನು ಪಾಲಿಸಿ, ಧೈರ್ಯ ಮಾಡಿ, ತನ್ನ ಮಗನನ್ನು ಮನೆಗೆ ಕರೆತರಲು 1,400 ಕಿ.ಮೀ. ತನ್ನ ದ್ವಿಚಕ್ರ ವಾಹನದಲ್ಲಿ ಕ್ರಮಿಸಿ ದೂರದ ನೆರೆಯ ಆಂಧ್ರಪ್ರದೇಶದಿಂದ ಕರೆತಂದಿದ್ದಳು.

  • 1 ತಿಂಗಳ ಮಗುವಿನೊಂದಿಗೆ ಕೆಲಸಕ್ಕೆ ಹಾಜರಾದ ಐಎಎಸ್​ ಅಧಿಕಾರಿ

ಗ್ರೇಟರ್ ವಿಶಾಖಪಟ್ಟಣಂ ಮಹಾನಗರ ಪಾಲಿಕೆ ಆಯುಕ್ತೆ ಜಿ.ಸೃಜನಾ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದರು. ಹೆರಿಗೆಗೆ ಸ್ವಲ್ಪ ಮುಂಚೆ ತನ್ನ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಈ ಐಎಎಸ್ ಅಧಿಕಾರಿ ತಮ್ಮ ಹೆರಿಗೆಯ ಬಳಿಕ 22 ದಿನಗಳಲ್ಲಿ ಕೋವಿಡ್​ ವಿರುದ್ಧದ ಹೋರಾಟಕ್ಕಾಗಿ ಕೆಲಸಕ್ಕೆ ಮರಳಿ ಸೈ ಎನಿಸಿಕೊಂಡಿದ್ದರು.

ಆಕೆ ಯಾವುದೇ ಕ್ಷೇತ್ರದಲ್ಲಿದ್ದರೂ ತನ್ನ ಮಾತೃ ಗುಣವನ್ನು ಮರೆಯುವುದಿಲ್ಲ. ನಿತ್ಯ ಆಕೆ ಮಾಡುವ ತ್ಯಾಗವು ನಮಗೆ ಕಾಣದೇ ಇರಬಹುದು, ಆದ್ರೆ ಅವಳಿಗೆ ಅವಳೇ ಸಾಟಿ. ಜಗತ್ತಿನಲ್ಲಿ ಆಕೆಯ ಪಾತ್ರವನ್ನು ಪದಗಳಲ್ಲಿ ಕಟ್ಟಿ ಕೊಡಲು ಖಂಡಿತವಾಗಿಯೂ ಸಾಧ್ಯವಿಲ್ಲ.

ABOUT THE AUTHOR

...view details