ಸರ್ಕಾರದ ಯಾವುದೇ ಮಾಹಿತಿಯನ್ನು ನಿರ್ದಿಷ್ಟ ಕಾಲಮಿತಿಯಲ್ಲಿ ಪಡೆದುಕೊಳ್ಳುವ ಹಕ್ಕನ್ನು ಸಾರ್ವಜನಿಕರಿಗೆ ನೀಡಿದ ಮಾಹಿತಿ ಹಕ್ಕು ಕಾಯ್ದೆ-2005 ಜಾರಿಯಾಗಿ ಇಂದು ಅಕ್ಟೋಬರ್ 12 ಕ್ಕೆ 15 ವರ್ಷಗಳು ಭರ್ತಿ. ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ ಹಾಗೂ ಪಿಂಚಣಿ ಖಾತೆಯ ಸಿಬ್ಬಂದಿ ಮತ್ತು ತರಬೇತಿ ವಿಭಾಗದ ವತಿಯಿಂದ ಈ ಕಾಯ್ದೆಯನ್ನು ಜಾರಿಗೊಳಿಸಲಾಗಿತ್ತು. ಭಾರತ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳ ಅಧೀನದಲ್ಲಿರುವ ಇಲಾಖೆಗಳ ಕುರಿತಾದ ಮಾಹಿತಿಯನ್ನು ಸಾರ್ವಜನಿಕರಿಗೆ ಸುಲಭ ಹಾಗೂ ಶೀಘ್ರವಾಗಿ ತಲುಪಿಸಲು ಸರ್ಕಾರ ಈ ಕಾಯ್ದೆಯನ್ನು ಜಾರಿಗೆ ತಂದಿತ್ತು.
ಮಾಹಿತಿ ಹಕ್ಕು ಕಾಯ್ದೆಯ ಮೂಲ ಉದ್ದೇಶ
ಸರ್ಕಾರದ ಕಾರ್ಯಪಾಲನೆಯಲ್ಲಿ ಪಾರದರ್ಶಕತೆ ಹಾಗೂ ಹೊಣೆಗಾರಿಕೆಯನ್ನು ಹೆಚ್ಚಿಸುವ ಮೂಲಕ ಸರ್ಕಾರಿ ಕಚೇರಿಗಳಲ್ಲಿನ ಭ್ರಷ್ಟಾಚಾರವನ್ನು ತಡೆಗಟ್ಟಿ, ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯು ನಿಜವಾದ ಅರ್ಥದಲ್ಲಿ ಜನರಿಗಾಗಿ ಕೆಲಸ ಮಾಡುವ ಉದ್ದೇಶದಿಂದ ಮಾಹಿತಿ ಹಕ್ಕು ಕಾಯ್ದೆಯನ್ನು ರೂಪಿಸಲಾಗಿದೆ. ಮಾಹಿತಿಯುಳ್ಳ ನಾಗರಿಕರು ಸಹಜವಾಗಿಯೇ ಸರ್ಕಾರದ ಕಾರ್ಯವೈಖರಿಯನ್ನು ಗಮನಿಸುತ್ತ, ಸರ್ಕಾರ ತಪ್ಪು ಹೆಜ್ಜೆ ಇಟ್ಟಾಗಲೆಲ್ಲ ಎಚ್ಚರಿಸುವ ಕೆಲಸ ಮಾಡುತ್ತಾರೆ. ಹೀಗಾಗಿ ಸರ್ಕಾರದ ಕಾರ್ಯವೈಖರಿಯ ಮಾಹಿತಿಯನ್ನು ಜನರಿಗೆ ತಲುಪಿಸುವಲ್ಲಿ ಮಾಹಿತಿ ಹಕ್ಕು ಕಾಯ್ದೆ ಬಹುದೊಡ್ಡ ಹೆಜ್ಜೆಯಾಗಿದೆ.
ಮಾಹಿತಿ ಹಕ್ಕು ಕಾಯ್ದೆಯ ಹಿನ್ನೆಲೆ
ಮೊದಲ ಹಂತ- 1975 ರಿಂದ 1996: ಈ ಅವಧಿಯಲ್ಲಿ ಸರ್ಕಾರದ ಮಾಹಿತಿಯನ್ನು ನೀಡಬೇಕೆಂದು ಕೆಲ ಸಾಮಾಜಿಕ ಸಂಘಟನೆಗಳು ಒತ್ತಾಯಿಸುತ್ತಿದ್ದವಾದರೂ ಆ ಕೂಗು ಸಂಘಟಿತ ಬಲ ಪಡೆದುಕೊಂಡಿರಲಿಲ್ಲ. ಆದರೂ 1980 ರಷ್ಟೊತ್ತಿಗೆ ಮಾಹಿತಿ ಹಕ್ಕಿನ ಕುರಿತಾಗಿ ಜಾಗೃತಿ ಮೂಡತೊಡಗಿತ್ತು. ಈ ಮಧ್ಯೆ 1996 ರಲ್ಲಿ ನಾಗರಿಕ ಮಾಹಿತಿ ಹಕ್ಕು ರಾಷ್ಟ್ರೀಯ ಅಭಿಯಾನ ಸಂಘಟನೆಯನ್ನು (The National Campaign for People's Right to Information -NCPRI) ಆರಂಭಿಸಲಾಯಿತು.
ಎರಡನೆಯ ಹಂತ- 1996 ರಿಂದ 2005: ಈ ಅವಧಿಯಲ್ಲಿ ಎನ್ಸಿಪಿಆರ್ಐ ಮುಂಚೂಣಿಯಲ್ಲಿ ಮಾಹಿತಿ ಹಕ್ಕು ಕಾಯ್ದೆಯ ಕರಡನ್ನು ತಯಾರಿಸಲಾಗಿದ್ದು ಮಹತ್ವದ ಬೆಳವಣಿಗೆಯಾಗಿತ್ತು. ಇದೇ ಅವಧಿಯಲ್ಲಿ ದೇಶಾದ್ಯಂತ ಹಲವಾರು ಕಡೆಗಳಲ್ಲಿ ಮಾಹಿತಿ ಹಕ್ಕು ಕುರಿತಾದ ಆಂದೋಲನಗಳು ಆರಂಭವಾದವು. ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ 2005 ರಲ್ಲಿ ರಾಷ್ಟ್ರೀಯ ಮಾಹಿತಿ ಹಕ್ಕು ಕಾಯ್ದೆ-2005 ನ್ನು ಸಂಸತ್ತಿನಲ್ಲಿ ಪಾಸು ಮಾಡಲಾಯಿತು.
ಮೂರನೆಯ ಹಂತ- 2005 ರಿಂದ ಇಲ್ಲಿಯವರೆಗೆ: 2005 ಕೊನೆಯಿಂದ ಇಲ್ಲಿಯವರೆಗೆ ಅವಲೋಕಿಸಿದಲ್ಲಿ ಮಾಹಿತಿ ಹಕ್ಕು ಕಾಯ್ದೆಯು ಕಾಲಕಾಲಕ್ಕೆ ಬಲಿಷ್ಠವಾಗುತ್ತ ಬಂದಿದೆ ಹಾಗೂ ಅದರ ಸಮರ್ಪಕ ಜಾರಿಗಾಗಿ ಪ್ರಯತ್ನಗಳು ಸಾಗುತ್ತಲೇ ಇವೆ.
ಆರ್ಟಿಐ ಕಾಯ್ದೆಯ ಬಗ್ಗೆಯೇ ಮಾಹಿತಿ ಇಲ್ಲ!
ದೇಶದ ಗ್ರಾಮೀಣ ಭಾಗದ ಶೇ 64 ರಷ್ಟು ಹಾಗೂ ನಗರ ಪ್ರದೇಶದ ಶೇ 62 ರಷ್ಟು ಜನರಿಗೆ ಆರ್ಟಿಐ ಕಾಯ್ದೆಯ ಬಗ್ಗೆ ಸೂಕ್ತ ಮಾಹಿತಿಯೇ ಇಲ್ಲ. ದೇಶದ ರಾಜಧಾನಿ ದೆಹಲಿಯ ಶೇ 61 ರಷ್ಟು ಜನ ಆರ್ಟಿಐ ಕಾಯ್ದೆಯ ಹೆಸರನ್ನು ಕೇಳಿದ್ದಾರೆಯೇ ಹೊರತು ಹಾಗೆಂದರೇನು ಎಂಬುದು ಅವರಿಗೆ ಗೊತ್ತೇ ಇಲ್ಲ ಎಂದು ಬಡಾವಣೆ ಹಾಗೂ ಗಲ್ಲಿಗಳಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಬಹಿರಂಗವಾಗಿದೆ.
ಆರ್ಟಿಐ ಕಾಯ್ದೆಯಡಿ ಪಡೆಯಬಹುದಾದ ಮಾಹಿತಿಗಳು ಹೀಗಿವೆ...