ಸ್ಥಳೀಯರಿಗೆ ಉದ್ಯೋಗ ನೀಡಿ ನಿರುದ್ಯೋಗ ಸಮಸ್ಯೆಯಿಂದ ಅವರನ್ನು ರಕ್ಷಿಸಬೇಕೆಂಬ ಸ್ಥಳೀಯತೆಯ ಕೂಗು ಭಾರತದಲ್ಲಿ ಮತ್ತೆ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುತ್ತಿದೆ. ಆರ್ಥಿಕ ಹಿಂಜರಿತದ ಹೊತ್ತಿನಲ್ಲಿ ಇಂಥ ಕೂಗು ಹೊಸತೇನಲ್ಲ. ಆದಾಗ್ಯೂ, ದೇಶದ ಪ್ರತಿ ನಗರದಲ್ಲಿಯೂ ಈ ಕೂಗು ಕಾನೂನಾಗಿ ಮಾರ್ಪಾಡಾಗುತ್ತಿದೆ. ಮಹಾರಾಷ್ಟ್ರದ ಹೊಸ ಸರ್ಕಾರವು ತನ್ನ ಶೇ.80ರಷ್ಟು ಉದ್ಯೋಗಗಳನ್ನು ಸ್ಥಳೀಯ ಕಾರ್ಮಿಕರಿಗಾಗಿ ಕಾಯ್ದಿರಿಸಿದೆ. ಪ್ರಸ್ತುತ ಆಂಧ್ರಪ್ರದೇಶ ಸರ್ಕಾರವು ಕೆಲವು ತಿಂಗಳ ಹಿಂದೆ "ಕೈಗಾರಿಕೆಗಳು / ಕಾರ್ಖಾನೆಗಳ ಮಸೂದೆ, 2019 ರಲ್ಲಿ ಸ್ಥಳೀಯ ಅಭ್ಯರ್ಥಿಗಳಿಗೆ ಆಂಧ್ರಪ್ರದೇಶದಲ್ಲಿ ಉದ್ಯೋಗ" ಎಂಬ ಕಾಯ್ದೆಯನ್ನು ಅಂಗೀಕರಿಸಿದೆ. ಈ ಕಾನೂನಿನ ಪ್ರಕಾರ, ಕೈಗಾರಿಕೆಗಳಲ್ಲಿ ಶೇ.75ರಷ್ಟು ಉದ್ಯೋಗಗಳು ಸ್ಥಳೀಯರಿಗೆ ಮೀಸಲಾಗಿವೆ. ಇದೇ ನೀತಿಯಂತೆ ರಾಜ್ಯದಲ್ಲಿನ ಎಲ್ಲ ಉದ್ಯಮವು ಮೂರು ವರ್ಷ ಸ್ಥಳೀಯರಿಗೆ ಆದ್ಯತೆ ನೀಡಬೇಕು ಮತ್ತು ಈ ಅವಧಿಯಲ್ಲಿ ಉದ್ಯೋಗ ಕ್ಷೇತ್ರಕ್ಕೆ ಅಗತ್ಯ ಸಮರ್ಪಕ ಕೌಶಲ್ಯ ಹೊಂದಿರುವ ಸಿಬ್ಬಂದಿ ಸಿಗದಿದ್ದರೆ, ಕಂಪನಿಗಳು ಸ್ಥಳೀಯರಿಗೆ ಅಗತ್ಯ ಕೌಶಲ್ಯಗಳೊಂದಿಗೆ ತರಬೇತಿ ನೀಡಬೇಕು.
ಒಂದೆಡೆ ಸರ್ಕಾರಗಳ ಈ ಹೆಜ್ಜೆ ಸ್ಥಳೀಯರಿಗೆ ಉದ್ಯೋಗದ ಭರವಸೆ ನೀಡುತ್ತವೆ. ಆದರೆ ಇನ್ನೊಂದೆಡೆ ಈ ಕ್ರಮವು ಸ್ಥಳೀಯ ಪ್ರದೇಶಗಳಲ್ಲಿ ಹೊಸ ಹೂಡಿಕೆಗೆ ಅಡ್ಡಗಾಲಾಗಬಹುದು. ಹೂಡಿಕೆ ಕೊರತೆಯಿಂದ ಕೈಗಾರಿಕೆಗಳ ಸಂಖ್ಯೆ ಕ್ಷೀಣಿಸಿ, ಮತ್ತೆ ಅದು ದೇಶದಲ್ಲಿನ ಉದ್ಯೋಗ ನಷ್ಟಕ್ಕೆ ಕಾರಣವಾಗಬಹುದು. ಇದರಿಂದಾಗಿ ರಾಷ್ಟ್ರದ ಒಟ್ಟಾರೆ ಆರ್ಥಿಕ ಬೆಳವಣಿಗೆ ಕುಂಠಿತಗೊಳ್ಳುತ್ತದೆ. ಬ್ರೆಕ್ಸಿಟ್ ಕಾರಣದಿಂದಾಗಿ ಇಂಗ್ಲೆಂಡ್ನಲ್ಲಿ ಈಗ ಆಗಿರುವ ಪರಿಸ್ಥಿತಿಯೇ ನಮಗೂ ಎದುರಾಗಬಹುದು ಎಂಬುದನ್ನು ನೆನಪಿನಲ್ಲಿಡಬೇಕು. ಆದಾಗ್ಯೂ, ಸ್ಥಳೀಯರಿಗೆ ಉದ್ಯೋಗ ಕಡ್ಡಾಯ ಎಂಬಂಥ ಈ ನಿಯಮಗಳು ಅಭಿವೃದ್ಧಿ ಹೊಂದಿದ ರಾಜ್ಯಗಳಲ್ಲಿ ಸಕಾರಾತ್ಮಕವಾಗಿ ಕೆಲಸ ಮಾಡಬಹುದು. ಆದರೆ ದೀರ್ಘಾವಧಿಯಲ್ಲಿ ಇದು ಧನಾತ್ಮಕ ಸಂಗತಿಯಾಗುಬುದು ತುಸು ಕಷ್ಟದಾಯಕ. ಬಡ ರಾಜ್ಯಗಳಲ್ಲಿ, ವಿಶೇಷವಾಗಿ ಹಿಂದಿಯನ್ನು ಹೃದಯವಾಗಿಸಿಕೊಂಡಿರುವ ಬಿಹಾರ, ಮಧ್ಯಪ್ರದೇಶ, ರಾಜಸ್ಥಾನ, ಉತ್ತರ ಪ್ರದೇಶದಂತಹ ರಾಜ್ಯಗಳಲ್ಲಿ ಆದಾಯ ಮತ್ತು ಅವಕಾಶಗಳಲ್ಲಿನ ಅಸಮಾನತೆಗೆ ಕಾರಣವಾಗಬಹುದು. ಭಾರತದ ಕಾರ್ಮಿಕ ಮಾರುಕಟ್ಟೆಯನ್ನು ಪರಿಗಣಿಸಿದರೆ ಸುಮಾರು ಶೇ.20ರಷ್ಟು ಅಥವಾ ದೇಶದಲ್ಲಿ 100 ದಶಲಕ್ಷ ಉದ್ಯೋಗಿಗಳು ವಲಸೆ ಬಂದವರು; ಹೀಗಾಗಿ ಸ್ಥಳೀಯರಲ್ಲಿ ಕೌಶಲ್ಯದ ಕೊರತೆಯು ಉದ್ಯಮದ ಲಾಭದಾಯಕತೆಯ ಮೇಲೆ ಮತ್ತಷ್ಟು ಪರಿಣಾಮ ಬೀರುತ್ತದೆ. ಲಾಭದ ಇಳಿಕೆ ಇನ್ನಷ್ಟು ಉದ್ಯೋಗ ಕಡಿತಕ್ಕೇ ಕಾರಣವಾಗಬಹುದು!
ವಾಸ್ತವವಾಗಿ, ಮಹಾರಾಷ್ಟ್ರ ಸರ್ಕಾರವು 2008ರಲ್ಲಿ ರಾಜ್ಯ ರಿಯಾಯಿತಿಗಳೊಂದಿಗೆ ಶೇ.80ರಷ್ಟು ಸ್ಥಳೀಯ ಮೀಸಲಾತಿ ನಿಯಮ ಜಾರಿಯ ಪ್ರಸ್ತಾಪ ಮುಂದಿಟ್ಟಿತ್ತು. ಆದರೆ ಕೌಶಲ್ಯ ಭರಿತ ಕಾರ್ಮಿಕರ ಕೊರತೆಯಿಂದಾಗಿ, ಈ ಪ್ರಸ್ತಾಪವನ್ನು ಅನುಷ್ಠಾನಕ್ಕೆ ತರಲು ಸಾಧ್ಯವಾಗಲಿಲ್ಲ. ಅಂತೆಯೇ, ಕರ್ನಾಟಕವು 2016ರಲ್ಲಿ ಶೇ.100ರಷ್ಟು ಸ್ಥಳೀಯ ಮೀಸಲಾತಿ ಪ್ರಸ್ತಾಪವನ್ನು ತಂದಿತು. ಆದರೆ ಇದನ್ನು ಅಸಂವಿಧಾನಿಕ ಎಂದ ಕಾನೂನು ಇಲಾಖೆ, ಪ್ರಸ್ತಾಪವನ್ನು ಜಾರಿಗೆ ತರದಂತೆ ನಿಷೇಧ ಹೇರಿತು.
ಮಧ್ಯಪ್ರದೇಶವು ಕೂಡ ಇದೇ ರೀತಿಯ ಕಾನೂನಿಗೆ ಸಜ್ಜಾಗುತ್ತಿದೆ. ಸ್ಥಳೀಯ ಉದ್ಯೋಗಿಗಳನ್ನು ಕಾಪಾಡಲು ಮುಂಚೂಣಿಯಲ್ಲಿರುವ ನಂತರದ ರಾಜ್ಯಗಳಲ್ಲಿ ಗೋವಾ ಮತ್ತು ಒಡಿಶಾ ಸ್ಥಾನ ಪಡೆದಿರಬಹುದು. ಮಹಾರಾಷ್ಟ್ರ ಮತ್ತು ಅಸ್ಸಾಂ ವಿಭಿನ್ನ ಕಾರಣಗಳಿಗಾಗಿ ಒಂದೇ ರೀತಿಯ ಸ್ಥಳೀಯತೆಯ ಆಂದೋಲನಗಳನ್ನು ಹೊಂದಿವೆ. ಅಲ್ಲಿನ ರಾಜಕಾರಣ ನಿಂತಿರುವುದೇ ಸ್ಥಳೀಯತೆ ಮೇಲೆ. ಆದಾಗ್ಯೂ ಭಾರತದ ಆರ್ಥಿಕ ವಲಸೆ ಹಾದಿಯು ಪ್ರಮುಖವಾಗಿ ದಿಕ್ಕು ಬದಲಿಸಿದ ಪರಿಣಾಮವಾಗಿ, ಉತ್ತರ ಭಾರತೀಯ ವಲಸೆ ವಿರೋಧಿ ಕೂಗುಗಳು ಈ ಭಾಗಗಳಲ್ಲಿ ನಿಧಾನವಾಗಿ ಕ್ಷೀಣಿಸಲು ಪ್ರಾರಂಭವಾಗಿವೆ.
ಇದೇ ರೀತಿ ಆಲೋಚನೆಗೆ ದೇಶದಲ್ಲಿ ಇತ್ತೀಚಿನ ಸೇರ್ಪಡೆ ಕರ್ನಾಟಕ ಸರ್ಕಾರ. ಬೆಂಗಳೂರಿನಂತ ಅಂತಾರಾಷ್ಟ್ರೀಯ ಐಟಿ ತಾಣವನ್ನು ಹೊಂದಿರುವ ರಾಜ್ಯ, ಐಟಿ ಕ್ಷೇತ್ರದಲ್ಲಿನ ಉದ್ಯೋಗಾವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಲು ಸ್ಥಳೀಯ ಪ್ರತಿಭಾವಂತರ ಸಂಖ್ಯೆಯನ್ನು ಹೆಚ್ಚಿಸಲು ಪ್ರಯತ್ನಿಸುತ್ತಿದೆ. ಸ್ವತಃ ಕರ್ನಾಟಕದ ಮುಖ್ಯಮಂತ್ರಿಗಳೇ ತಮ್ಮ ಸ್ವಾತಂತ್ರ್ಯ ದಿನಾಚರಣೆ ಭಾಷಣದಲ್ಲಿ ಈ ವಿಷಯವನ್ನು ಪ್ರಕಟಿಸಿದ್ದಾರೆ.
ಅತಿರೇಕಗೊಂಡಿರುವ ರಾಷ್ಟ್ರಪ್ರೇಮದ ರಾಜಕೀಯದಲ್ಲಿ ದೇಶದ ಇತರ ಅಂಕಿ-ಅಂಶಗಳು ನಗಣ್ಯಗೊಂಡಿರುವುದು ದುರಂತದ ಸಂಗತಿ. ಆದರೆ ಈ ವಾಸ್ತವದಲ್ಲಿ, ಭಾರತದ ವಲಸೆಯ ಬದಲಾಗುತ್ತಿರುವ ಸ್ವಭಾವದ ಬಗ್ಗೆ ಹೋರಾಡಲು ಪುರಾವೆಗಳನ್ನು ಎದುರು ನೋಡುತ್ತಿರುವವರಿಗೂ ಕಳೆದ ತಿಂಗಳ ಅಂತ್ಯದವರೆಗೆ ಇದಕ್ಕೆ ಸಂಬಂಧಪಟ್ಟ ಯಾವುದೇ ಪುರಾವೆ ಸಿಕಿಲ್ಲ. ಅತ್ಯಂತ ತಡವಾಗಿ ಪ್ರಕಟಗೊಂಡ 2011ರ ಜನಗಣತಿ ಅಂಕಿ-ಅಂಶವು 2000ರ ದಶಕದಲ್ಲಿ ಭಾರತದ ಆರ್ಥಿಕ ಬೆಳವಣಿಗೆ ಗಣನೀಯವಾಗಿ ಹೆಚ್ಚಾದಾಗಲೂ, ಕೆಲಸ ಮತ್ತು ಸಂಬಂಧಿತ ವಲಸೆ ರಾಜ್ಯಗಳ ಗಡಿಯೊಳಗೆ ಉಳಿದಿದೆ ಎಂಬುದನ್ನು ಸಾಬೀತುಪಡಿಸಿದೆ. 2001 ಮತ್ತು 2011 ರ ನಡುವೆ ಅಂತರ್ರಾಜ್ಯ ವಲಸೆ ಗಣನೀಯವಾಗಿ ಏರಿಕೆಯಾಗಲಿಲ್ಲ ಎಂಬುದನ್ನು ಜನಗಣತಿ ಮತ್ತೊಮ್ಮೆ ತೋರಿಸಿದೆ ಮತ್ತು ಭಾರತದ ಸಂವಿಧಾನದಲ್ಲಿ ಪ್ರತಿಪಾದಿಸಲ್ಪಟ್ಟ ಸ್ಥಳೀಯತೆಯ ವಿರುದ್ಧದ ಪ್ರಕರಣಗಳು ಕೂಡ ಏರಿಕೆ ಕಂಡಿಲ್ಲ ಎಂಬುದು ದತ್ತಾಂಶದಿಂದ ಸ್ಪಷ್ಟವಾಗಿದೆ.
ಭಾರತದ ವಲಸೆ ಕಥೆಯಲ್ಲಿ ನಿರ್ಣಾಯಕವಾಗಿ ದಿಕ್ಕಿನ ಬದಲಾವಣೆಯಾಗಿದೆ ಎಂಬುದನ್ನು ಜನಗಣತಿ ಹೊಸ ಒಳನೋಟವು ನೀಡುತ್ತಿದೆ-ಹಿಂದಿ ಹೃದಯಭಾಗದ ರಾಜ್ಯಗಳಲ್ಲಿನ ಜನರ ವಲಸೆಯು ಪಶ್ಚಿಮ ಕರಾವಳಿಯ ಆರ್ಥಿಕ ಕೇಂದ್ರಗಳತ್ತ ಮಾತ್ರವೇ ಹೋಗಿಲ್ಲ, ಆದರೆ ಹೊಸದಾಗಿ ಉತ್ತರದಿಂದ ದಕ್ಷಿಣಕ್ಕೆ ಕಾರಿಡಾರ್ಗೂ ವಲಸೆ ತನ್ನ ದಿಕ್ಕನ್ನು ಬದಲಿಸಿದೆ ಎಂಬುದು ಈ ಜನಗಣತಿ ಅಂಕಿ-ಅಂಶಗಳಿಂದ ಬೆಳಕಿಗೆ ಬಂದಿದೆ. ಉತ್ತಮ ಶೈಕ್ಷಣಿಕ ಅವಕಾಶಗಳ ಹುಡುಕಾಟದಲ್ಲಿ ಹೆಚ್ಚಿನ ಭಾರತೀಯರು ರಾಜ್ಯದಿಂದ ರಾಜ್ಯಕ್ಕೆ ಪ್ರಯಾಣಿಸುತ್ತಿದ್ದಾರೆ. ಆದರೆ ಹೊಸದಾಗಿ ಹೊರಹೊಮ್ಮುತ್ತಿರುವ ಈ ಹಾದಿಗಳ ಹೊರತಾಗಿಯೂ, ಭಾರತದ ಬಹುಪಾಲು ಜಿಲ್ಲೆಗಳಲ್ಲಿ, ಅದರಲ್ಲಿಯೂ ನಗರಗಳಲ್ಲಿ ಉದ್ಯೋಗದಲ್ಲಿರುವವರ ಪೈಕಿ 10ಕ್ಕಿಂತ ಕಡಿಮೆ (ಅಥವಾ 10% ಕ್ಕಿಂತ ಕಡಿಮೆ) ಅಂತರರಾಜ್ಯ ವಲಸಿಗರು. ಸ್ಥಳೀಯರಿಗೆ ಉದ್ಯೋಗ ಮೀಸಲಾತಿ ಬೇಕೆಂಬ ಕೂಗು ಪ್ರಬಲವಾಗಿರುವ ಮಧ್ಯಪ್ರದೇಶದಲ್ಲಿ, ಈ ಪಾಲು ಕೇವಲ ಶೇ.5ರಷ್ಟು ಎಂಬುದು ಗಣನೀಯ ಸಂಗತಿಯಾಗಿದೆ.
ಅಂತರರಾಜ್ಯ ವಲಸೆ :
ಭಾರತದ ಸಂವಿಧಾನವು ಚಲನೆಯ ಸ್ವಾತಂತ್ರ್ಯವನ್ನು ಖಾತರಿಪಡಿಸುತ್ತದೆ ಮತ್ತು ಇದರ ಪರಿಣಾಮವಾಗಿ ಭಾರತದೊಳಗೆ ಹಲವಾರು ನಿಬಂಧನೆಗಳ ಮೂಲಕ ಉದ್ಯೋಗವನ್ನು ನೀಡುತ್ತದೆ. ಆರ್ಟಿಕಲ್ 19 ನಾಗರಿಕರು "ಭಾರತದ ಭೂಪ್ರದೇಶದಾದ್ಯಂತ ಮುಕ್ತವಾಗಿ ಚಲಿಸಬಹುದು" ಎಂಬುದನ್ನು ಖಚಿತಪಡಿಸುತ್ತದೆ. ಸಾರ್ವಜನಿಕ ಉದ್ಯೋಗದಲ್ಲಿ ಜನ್ಮಸ್ಥಳ ಆಧಾರಿತ ತಾರತಮ್ಯಕ್ಕೆ 16ನೇ ವಿಧಿ ಅವಕಾಶ ನೀಡುವುದಿಲ್ಲ. ಜನ್ಮ ಸ್ಥಳದ ಆಧಾರದ ಮೇಲೆ ತಾರತಮ್ಯದ ವಿರುದ್ಧ 15ನೇ ವಿಧಿ ರಕ್ಷಣೆ ಒದಗಿಸುತ್ತದೆ ಮತ್ತು ಆರ್ಟಿಕಲ್ 14 ಸ್ಥಳೀಯತೆಯ ಹೊರತಾಗಿಯೂ ಕಾನೂನಿನ ಮುಂದೆ ಸಮಾನತೆಯನ್ನು ಒದಗಿಸುತ್ತದೆ. ಈ ಕೆಲವು ಕಾಯ್ದೆಗಳು ಬೃಹತ್ ಸುದ್ದಿಯಾದ 2014ರ ಚಾರು ಖುರಾನಾ ವರ್ಸಸ್ ಯೂನಿಯನ್ ಆಫ್ ಇಂಡಿಯಾದ ಪ್ರಕರಣದಲ್ಲಿ ಮಹತ್ತರ ಪಾತ್ರ ವಹಿಸಿವೆ. ಈ ಪ್ರಕರಣದಲ್ಲಿ ಒಕ್ಕೂಟದ ನಿಯಮದಂತೆ ಅರ್ಜಿದಾರರು ಐದು ವರ್ಷಗಳ ಕಾಲ ಮಹಾರಾಷ್ಟ್ರದಲ್ಲಿ ವಾಸಿಸಿಲ್ಲ ಎಂಬ ಕಾರಣ ನೀಡಿ ಟ್ರೇಡ್ ಯೂನಿಯನ್ ಮೇಕಪ್ ಕಲಾವಿದೆಗೆ ಸದಸ್ಯತ್ವವನ್ನು ನಿರಾಕರಿಸುತ್ತದೆ. ಆದರೆ ಭಾರತದ ಸಂವಿಧಾನದ ವಿಧಿಗಳ ಅನ್ವಯ ಅಂತಿಮವಾಗಿ ನ್ಯಾಯಾಲಯದಲ್ಲಿ ಟ್ರೇಡ್ ಯೂನಿಯನ್ ಈ ಪ್ರಕರಣದಲ್ಲಿ ಸೋಲು ಅನುಭವಿಸುತ್ತದೆ. ಆಂಧ್ರಪ್ರದೇಶ ಸರ್ಕಾರವು ಇತ್ತೀಚೆಗೆ ಅಂಗೀಕರಿಸಿದ ಉದ್ಯೋಗ ಸಂರಕ್ಷಣಾ ಕಾನೂನನ್ನು ಮುಖ್ಯವಾಗಿ ಸಾಂವಿಧಾನಿಕ ಆಧಾರದ ಮೇಲೆ ಪ್ರಶ್ನಿಸಬಹುದು.
ಆದರೆ ಸಾಂವಿಧಾನಿಕ ನಿಬಂಧನೆಗಳನ್ನು ಬದಿಗಿಟ್ಟು ನೋಡಿದರೆ, ಅಂತರರಾಜ್ಯ ವಲಸೆಯ ಸಂಖ್ಯೆಗಳು ಸ್ಥಳೀಯರಿಗೆ ಉದ್ಯೋಗ ರಕ್ಷಣೆಯ ಕುರಿತ ಚರ್ಚೆಯ ಮೇಲೆ ಪ್ರಭಾವ ಬೀರಬೇಕು. ಜನಗಣತಿಯ ಅಂಕಿಅಂಶಗಳು ಅಂತರರಾಜ್ಯ ವಲಸೆಯ ಸಂಪೂರ್ಣ ಪರಿಮಾಣವನ್ನು ಸೆರೆ ಹಿಡಿಯುತ್ತದೆ. ಸಾಮಾನ್ಯವಾಗಿ ವಲಸೆ ಅಲ್ಪಾವಧಿ ಮತ್ತು ಚಲನಶೀಲ. ಹೀಗಾಗಿ ಜನಗಣತಿಯ ಅಂಕಿ-ಅಂಶಗಳನ್ನು ಈ ವಿಷಯದಲ್ಲಿ ಗಂಭೀರವಾಗಿ ಪರಿಗಣಿಸಲಾಗುವುದಿಲ್ಲ, ಆದರೆ ಬೆಳವಣಿಗೆಯ ದರಗಳು ಮತ್ತು ತುಲನಾತ್ಮಕ ಶೇಕಡಾವಾರುಗಳಿಂದ ಈ ನಿರ್ಣಯಗಳನ್ನು ಇನ್ನೂ ಸ್ಪಷ್ಟವಾಗಿ ಪಡೆಯಬಹುದು.
ಉತ್ತರ-ದಕ್ಷಿಣ ಕಾರಿಡಾರ್ :
ದತ್ತಾಂಶದಲ್ಲಿ ಗಮನಿಸಿದಂತೆ ಉತ್ತರದಿಂದ ದಕ್ಷಿಣಕ್ಕೆ ಒಂದು ವಿಶಿಷ್ಟವಾದ ಕಾರಿಡಾರ್ ಕೂಡ ಇದೆ. ಉತ್ತರ ಪ್ರದೇಶ, ಬಿಹಾರ ಮತ್ತು ಪಶ್ಚಿಮ ಬಂಗಾಳವನ್ನು ಒಂದು ಬಣವೆಂದು ಪರಿಗಣಿಸಿದರೆ ಮತ್ತು ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರಪ್ರದೇಶ ಮತ್ತು ತೆಲಂಗಾಣವನ್ನು ಮತ್ತೊಂದು ಬಣವಾಗಿ ಪರಿಗಣಿಸಿದರೆ, ಎರಡು ಬಣಗಳ ನಡುವಿನ ದ್ವಿಪಕ್ಷೀಯ ವಲಸೆಯಲ್ಲಿ ಶೇ.85ರಷ್ಟು ದಕ್ಷಿಣದ ಕಡೆಗೆ ನಿರ್ದೇಶಿಸಲ್ಪಡುತ್ತವೆ. 2011 ರಿಂದ, ಈ ಕಾರಿಡಾರ್ ಗಣನೀಯವಾಗಿ ಬೆಳೆದಿದೆ ಎಂದು ಕ್ಷೇತ್ರ ವರದಿಗಳು ಸೂಚಿಸುತ್ತವೆ ಮತ್ತು ಇದನ್ನು 2021ರಲ್ಲಿನ ಮುಂದಿನ ಜನಗಣತಿಯಿಂದ ದೃಢಪಡಿಸಬೇಕು.
2001 ಮತ್ತು 2011 ರ ನಡುವೆ, ಆರ್ಥಿಕ ಕಾರಣಗಳಿಗಾಗಿ ಸ್ಥಳಾಂತರಗೊಂಡ ಒಟ್ಟು ಅಂತರರಾಜ್ಯ ವಲಸಿಗರ ಸಂಖ್ಯೆ, ನಿರ್ದಿಷ್ಟವಾಗಿ, 11.6 ದಶಲಕ್ಷದಿಂದ 13 ದಶಲಕ್ಷಕ್ಕೆ ಏರಿದೆ. ಗಣನೀಯ ಪ್ರಾದೇಶಿಕ ಬದಲಾವಣೆಯೊಂದಿಗೆ, ನಗರ ಉದ್ಯೋಗಿಗಳಲ್ಲಿ ಅವರ ಪಾಲು ಕೇವಲ ಶೇ.8ರಷ್ಟಿದೆ.
2017-18ರ ನ್ಯಾಷನಲ್ ಸ್ಯಾಂಪಲ್ ಸರ್ವೆ ಆಫೀಸ್ (ಎನ್ಎಸ್ಎಸ್ಒ) ಉದ್ಯೋಗ ಸಮೀಕ್ಷೆಯ ಕರಡು ಪ್ರತಿಯಂತೆ ಭಾರತದಲ್ಲಿ ನಿರುದ್ಯೋಗ ದರ 2017-18ರಲ್ಲಿ 6.1% ಕ್ಕೆ ಏರಿದ್ದು, ಇದು 45 ವರ್ಷಗಳ ಗರಿಷ್ಠ ಮಟ್ಟ ತಲುಪಿದೆ. ಭಾರತೀಯ ರಾಜ್ಯಗಳಲ್ಲಿ ಸುಮಾರು ಮೂರನೇ ಒಂದು ಭಾಗದಷ್ಟು (11) 2017-18ರಲ್ಲಿ ರಾಷ್ಟ್ರೀಯ ಸರಾಸರಿಗಿಂತ ಹೆಚ್ಚು ನಿರುದ್ಯೋಗ ಸಮಸ್ಯೆ ಹೊಂದಿವೆ ಎಂದು ಇನ್ನೂ ಬಿಡುಗಡೆಯಾಗದ ಈ ವರದಿಯಲ್ಲಿ ತಿಳಿಸಲಾಗಿದೆ.
2011-16ರ ಅವಧಿಯಲ್ಲಿ ರಾಜ್ಯಗಳ ನಡುವೆ ವಾರ್ಷಿಕ ಸರಾಸರಿ ಕಾರ್ಮಿಕ ವಲಸೆ 9 ಮಿಲಿಯನ್ಗೆ ಹತ್ತಿರವಾಗಿದೆ ಎಂದು 2017ರ ಆರ್ಥಿಕ ಸಮೀಕ್ಷೆ ಬಹಿರಂಗಪಡಿಸಿದೆ. ದೆಹಲಿ, ಮಹಾರಾಷ್ಟ್ರ, ತಮಿಳುನಾಡು, ಮತ್ತು ಗುಜರಾತ್ನಂತಹ ರಾಜ್ಯಗಳು ಹಿಂದಿ ಮಾತನಾಡುವ ರಾಜ್ಯಗಳಾದ ಉತ್ತರ ಪ್ರದೇಶ, ಬಿಹಾರ, ಮತ್ತು ಮಧ್ಯಪ್ರದೇಶದಿಂದ ಹೆಚ್ಚಿನ ಸಂಖ್ಯೆಯಲ್ಲಿ ವಲಸೆಗರನ್ನು ಆಕರ್ಷಿಸಿವೆ. ಜನಗಣತಿ 2011 ಸಹ 1991 ಮತ್ತು 2001 ರ ಜನಗಣತಿಯ ನಡುವೆ 30% ರಿಂದ 2001 ಮತ್ತು 2011 ರ ನಡುವೆ 58% ರಷ್ಟು ಅಂತರ ಜಿಲ್ಲಾ ವಲಸೆಯಲ್ಲಿ (ಅದೇ ರಾಜ್ಯದೊಳಗೆ) ಈ ಭಾಗದಿಂದ ವಲಸೆ ಬಂದವರ ಪ್ರಮಾಣ ಹೆಚ್ಚು ಎಂದು ವರದಿ ಮಾಡಿದೆ.