ಬೆಂಗಳೂರು: ಅಮ್ಮ ಬೈಕ್ ಕೊಡಿಸಲಿಲ್ಲ ಎಂದು ಮನನೊಂದು ಮಗ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ. ಹೆಣ್ಣೂರು ಪೊಲೀಸ್ ಠಾಣಾ ವ್ಯಾಪ್ತಿಯ ಥಣಿಸಂದ್ರದಲ್ಲಿ ವಾಸವಾಗಿದ್ದ ಅಯ್ಯಪ್ಪ (20) ಎಂಬ ಯುವಕ ಬುಧವಾರ ಸಂಜೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಖಾಸಗಿ ಕಾಲೇಜಿನಲ್ಲಿ ದ್ವಿತೀಯ ಬಿಎಸ್ಸಿ ವ್ಯಾಸಂಗ ಮಾಡುತ್ತಿದ್ದ ಯುವಕನ ತಂದೆ 6 ವರ್ಷಗಳ ಹಿಂದೆ ಸಾವನ್ನಪ್ಪಿದ್ದರು. ತಾಯಿ ಹೌಸ್ ಕೀಪಿಂಗ್ ಕೆಲಸ ಮಾಡುತ್ತಿದ್ದರು. ಕಾಲೇಜಿಗೆ ಹೋಗುತ್ತಿದ್ದ ಅಯ್ಯಪ್ಪ, ಬೈಕ್ ಕೊಡಿಸುವಂತೆ ತಾಯಿಗೆ ಕೇಳಿದ್ದ. ಆದರೆ, ಬೈಕ್ ಕೊಡಿಸಲು ಬಡತನ ಅಡ್ಡಿಯಾಗಿದ್ದರಿಂದ ಮುಂದೆ ಕೊಡಿಸುವುದಾಗಿ ಭರವಸೆ ನೀಡಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಆದರೂ ಪದೇ ಪದೇ ಒತ್ತಾಯಿಸಿದ್ದರಿಂದ 50 ಸಾವಿರ ಹಣ ಸಾಲ ಮಾಡಿದ್ದ ತಾಯಿ ಇನ್ನೆರಡು ದಿನಗಳಲ್ಲಿ ಬೈಕ್ ಕೊಡಿಸುವುದಾಗಿ ಹೇಳಿದ್ದರು. ತಾಳ್ಮೆ ಕಳೆದುಕೊಂಡ ಅಯ್ಯಪ್ಪ, ಮನೆಯಲ್ಲಿ ಯಾರು ಇಲ್ಲದಿರುವಾಗ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಉಡುಪಿ: ಹಾಸ್ಟೆಲ್ ಕಿಟಕಿಯಲ್ಲಿ ಕೈ ಹಾಕಿ ವಿದ್ಯಾರ್ಥಿನಿಗೆ ಕಿರುಕುಳ - ಆರೋಪಿ ಸೆರೆ