ಗಂಗಾವತಿ: ಸತತ ಎರಡು ದಿನಗಳ ಕಾಲ ಸುರಿದ ಅಕಾಲಿಕ ಮಳೆಯಿಂದಾಗಿ ಗಂಗಾವತಿ ಹಾಗೂ ಕನಕಗಿರಿ ವಿಧಾನಸಭಾ ಕ್ಷೇತ್ರಗಳ ಹಲವು ಗ್ರಾಮಗಳಲ್ಲಿ ಭತ್ತದ ಗದ್ದೆ ನಾಶವಾಗಿದ್ದು, ಸುಮಾರು 12ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ.
ಕನಕಗಿರಿ ವಿಧಾನಸಭಾ ಕ್ಷೇತ್ರದ ಹಣವಾಳ, ಜಂಗಮರ ಕಲ್ಗುಡಿ, ಗಂಗಾವತಿ ತಾಲೂಕಿನ ಕೇಸಕ್ಕಿ ಹಂಚಿನಾಳ, ಮರಕುಂಬಿ ಸೇರಿದಂತೆ ಇನ್ನಿತರ ಗ್ರಾಮಗಳಲ್ಲಿ ಭತ್ತ ನಾಶವಾಗಿದೆ.

ಗಂಟೆಗೆ 80ರಿಂದ 100 ಕಿಲೋ ಮೀಟರ್ ವೇಗದಲ್ಲಿ ಬೀಸಿದ ಬಿರುಗಾಳಿ ಹಾಗೂ ಆಲಿಕಲ್ಲು ಮಳೆಯಿಂದಾಗಿ ವಿವಿಧ ಗ್ರಾಮಗಳಲ್ಲಿನ ಗದ್ದೆಯಲ್ಲಿ ಬೆಳೆದು ನಿಂತಿದ್ದ ಭತ್ತದ ಬೆಳೆ ಹಾನಿಯಾಗಿದ್ದು, ಸಂಪೂರ್ಣ ಬೆಳೆ ನೆಲಕ್ಕೊರಗಿದೆ. ಮರಕುಂಬಿ, ಹಣವಾಳ, ಜೀರಾಳ ಕಲ್ಗುಡಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಮನೆಗಳಿಗೆ ಹಾನಿಯಾಗಿದೆ. ಎರಡರಿಂದ ಐದು ಸೆಂಟಿ ಮೀಟರ್ ಗಾತ್ರದ ಆಲಿಕಲ್ಲುಗಳು ಬಿದ್ದು ತೆನೆಕಟ್ಟಿದ ಭತ್ತದ ಬೆಳೆಗೆ ಹಾನಿಯಾಗಿದೆ.

"ತುಂಗಭದ್ರಾ ಜಲಾಶಯದ ಗೇಟ್ ಕಿತ್ತು ಹೋಗಿ ಈ ಬಾರಿ ಬೆಳೆ ಕೈಗೆ ಬಾರದೆಂಬ ಆತಂಕ ಮನೆ ಮಾಡಿತ್ತು. ಅದರ ನಡುವೆಯೂ ಸಮೃದ್ಧವಾಗಿ ಬೆಳೆದು ನಿಂತಿದ್ದ ಭತ್ತದ ಗದ್ದೆ ಇನ್ನೆರಡು ತಿಂಗಳಲ್ಲಿ ಕೊಯ್ಲಿಗೆ ಬರುತಿತ್ತು. ಆದರೆ, ಈಗ ಬಿದ್ದ ಮಳೆಯಿಂದ ಬೆಳೆ ಕೈಗೆ ಬಾರದು" ಎಂದು ರೈತ ಮುಳ್ಳಪೂಡಿ ಸೂರ್ಯರಾವ್ ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಮೈಸೂರು ದಸರಾದಲ್ಲಿ ಭಾಗಿಯಾಗಿರುವ ಕಾರಣ ಮಳೆ, ಬಿರುಗಾಳಿಯಿಂದ ಮನೆ-ಬೆಳೆ ಹಾನಿಗೀಡಾದ ಪ್ರದೇಶಕ್ಕೆ ಅವರ ಸಹೋದರ ವೆಂಕಟೇಶ ತಂಗಡಗಿ ಹಾಗೂ ಬಿಜೆಪಿಯ ಮಾಜಿ ಶಾಸಕ ಬಸವರಾಜ ದಢೇಸ್ಗೂರು ಅವರ ಪುತ್ರ ಮೌನೇಶ ಭೇಟಿ ನೀಡಿ ಪರಿಶೀಲಿಸಿದರು.

ಇದನ್ನೂ ಓದಿ: ಕರಾವಳಿ ಸೇರಿದಂತೆ ರಾಜ್ಯದ 7 ಜಿಲ್ಲೆಗಳಿಗೆ ಮಳೆ ಮುನ್ಸೂಚನೆ: ಯೆಲ್ಲೋ ಅಲರ್ಟ್ ಘೋಷಣೆ - Yellow Alert