ಬೆಂಗಳೂರು: 'ಕಷ್ಟಕರ ಪರಿಸ್ಥಿತಿಗಳಲ್ಲಿ ದೇಶವನ್ನು ರಕ್ಷಿಸುವ ನಮ್ಮ ರಕ್ಷಣಾ ಸಿಬ್ಬಂದಿಯನ್ನು ರಾಜ್ಯ ಸರ್ಕಾರ ಮತ್ತು ಅದರ ಸಂಸ್ಥೆಗಳು ಕನಿಷ್ಠ ಗೌರವದಿಂದಲಾದರೂ ನಡೆಸಿಕೊಳ್ಳಬೇಕು' ಎಂದು ತಿಳಿಸಿರುವ ಹೈಕೋರ್ಟ್, ನಿವೃತ್ತ ಸೇನಾ ಸಿಬ್ಬಂದಿಗೆ ಹಂಚಿಕೆಯಾಗಿರುವ ನಿವೇಶನದ ಕ್ರಯಪತ್ರ ಮಾಡಿಕೊಡುವಂತೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ಕ್ಕೆ ಆದೇಶ ನೀಡಿದೆ.
ಅಲ್ಲದೇ, ಸುಮಾರು ಮೂರು ದಶಕಗಳ ಕಾಲ ಯಾವುದೇ ಕಪ್ಪು ಚುಕ್ಕೆ ಇಲ್ಲದೇ ದೇಶಕ್ಕಾಗಿ ಸೇವೆ ಸಲ್ಲಿಸಿದ ನಿವೃತ್ತ ರಕ್ಷಣಾ ಸಿಬ್ಬಂದಿಗೆ ಮುಡಾ 'ಅತ್ಯಲ್ಪ' ಗೌರವ ನೀಡದೇ ನಡೆಸಿಕೊಂಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದೆ.
ನಿವೃತ್ತ ಲೆಫ್ಟಿನೆಂಟ್ ಜನರಲ್ ಬಿಎನ್ಬಿಎಂ ಪ್ರಸಾದ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಹಾಗೂ ನ್ಯಾಯಮೂರ್ತಿ ಜಿ.ಬಸವರಾಜು ಅವರಿದ್ದ ವಿಭಾಗೀಯಪೀಠ ಈ ಆದೇಶ ನೀಡಿದೆ.
ಅರ್ಜಿದಾರರು ದೇಶಕ್ಕಾಗಿ ಮೂರು ದಶಕಗಳ ಕಾಲ ಸುದೀರ್ಘವಾಗಿ ಸೇವೆ ಸಲ್ಲಿಸಿದ್ದಾರೆ, ಗಡಿಯಲ್ಲಿ ದೇಶವನ್ನು ಕಾದಿದ್ದಾರೆ. ಆದರೆ ಮುಡಾ ಅವರನ್ನು ಹೀನಾಯವಾಗಿ ನಡೆಸಿಕೊಂಡಿದೆ. ಸೇವೆಯಲ್ಲಿದ್ದಾಗ ಅವರು ಗಳಿಸಿರುವ ಗೌರವ ಅರ್ಥಮಾಡಿಕೊಳ್ಳುವಲ್ಲಿ ಮುಡಾ ಅಧಿಕಾರಿಗಳು ವಿಫಲರಾಗಿದ್ದಾರೆ.
ಹಾಗಾಗಿ ಮುಡಾ ಅಧಿಕಾರಿಗಳು ಅರ್ಜಿದಾರರರಿಗೆ ಹಂಚಿಕೆಯಾಗಿರುವ ನಿವೇಶನದ ಕ್ರಯಪತ್ರ ಮಾಡಿಕೊಡಬೇಕು, ನಿವೇಶನವನ್ನು ಅವರ ಸುಪರ್ದಿಗೆ ಒಪ್ಪಿಸಬೇಕು ಇಲ್ಲವೇ ಸಮಾನ ವಿಸ್ತ್ರೀರ್ಣ ಮತ್ತು ಮೌಲ್ಯದ ಪರ್ಯಾಯ ನಿವೇಶನವನ್ನು 8 ವಾರಗಳಲ್ಲಿ ಹಂಚಿಕೆ ಮಾಡಬೇಕು ಎಂದು ನ್ಯಾಯಪೀಠ ಆದೇಶಿಸಿದೆ.
ಅರ್ಜಿದಾರರು ರಾಷ್ಟ್ರೀಯ ಗ್ರಾಹಕ ನ್ಯಾಯಾಲಯದ ಮೊರೆ ಹೋಗಬೇಕಿತ್ತು ಎಂಬ ಮುಡಾ ವಾದವನ್ನು ಸಾರಾಸಗಟಾಗಿ ತಳ್ಳಿ ಹಾಕಿರುವ ನ್ಯಾಯಾಲಯ, ಹೈಕೋರ್ಟ್ಗೆ ಕೂಡ ಈ ವಿಚಾರದಲ್ಲಿ ಮಧ್ಯಪ್ರವೇಶಿಸಿ ನ್ಯಾಯ ದೊರಕಿಸಿಕೊಡಲು ಅಧಿಕಾರವಿದೆ. ಜತೆಗೆ ಅರ್ಜಿದಾರರು ಮುಡಾ ಸೂಚಿಸಿದ್ದ ಪೂರ್ಣ ಮೊತ್ತವನ್ನು ಮೊದಲೇ ಪಾವತಿಸಿದ್ದಾರೆ. ಹಾಗೊಂದು ವೇಳೆ ಪೂರ್ಣ ಹಣ ಪಾವತಿಸಿಲ್ಲ ಎಂದಾಗಿದ್ದರೆ ಮುಡಾ ಅರ್ಜಿದಾರರಿಗೆ ಅವರು ಪಾವತಿಸಿದ್ದ ಹಣ ಹಿಂತಿರುಗಿಸಬೇಕಿತ್ತು. ಬಾಕಿ ಹಣ ಪಾವತಿ ಬಗ್ಗೆ ಮುಡಾ ಗಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಯೋಧನಿಗೆ ಯಾವುದೇ ಮಾಹಿತಿಯನ್ನು ನೀಡಿಲ್ಲ ಎಂದು ಆದೇಶದಲ್ಲಿ ತಿಳಿಸಿದೆ.
ಜಿಲ್ಲಾಗ್ರಾಹಕ ನ್ಯಾಯಾಲಯದ ಆದೇಶ ಎತ್ತಿಹಿಡಿದಿದೆ. ಆ ಆದೇಶದಂತೆ ಅರ್ಜಿದಾರರಿಗೆ 2001ರ ಫೆಬ್ರವರಿಯಿಂದ ಅನ್ವಯವಾಗುವಂತೆ ದಿನಕ್ಕೆ 500 ರೂ.ನಂತೆ ದಂಡವನ್ನು ಶೇ.10ರ ಬಡ್ಡಿ ಸಹಿತ ನೀಡಬೇಕು, ಆ ಮೊತ್ತವನ್ನು ತಪ್ಪಿತಸ್ಥ ಮುಡಾ ಅಧಿಕಾರಿಯ ವೇತನದಿಂದ ಕಡಿತಗೊಳಿಸಬೇಕು ಎಂದು ನ್ಯಾಯಾಲಯ ನಿರ್ದೇಶನ ನೀಡಿದೆ.
ಪ್ರಕರಣದ ಹಿನ್ನೆಲೆ: 1977 ರಿಂದ 2016ರವರೆಗೆ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ರಾಷ್ಟ್ರಪತಿ ಪದಕ, ವಿಶಿಷ್ಟ ಸೇವಾ ಪದಕ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬೆಂಗಳೂರಿನ ವಾಸಿ ನಿವೃತ್ತ ಲೆಫ್ಟಿನೆಂಟ್ ಜನರಲ್ ಬಿಎನ್ಬಿಎಂ ಪ್ರಸಾದ್ ನಿವೃತ್ತ ಸೇನಾ ನೌಕರರ ಕ್ಯಾಟಗರಿಯಲ್ಲಿ ರಿಯಾಯಿತಿ ದರದಲ್ಲಿ ಮುಡಾ ನಿವೇಶನಕ್ಕೆ ಅರ್ಜಿ ಸಲ್ಲಿಸಿದ್ದರು.
ಮುಡಾ 2001ರಲ್ಲಿ60-40 ವಿಸ್ತ್ರೀರ್ಣದ ನಿವೇಶನ ಮಂಜೂರು ಮಾಡಿತ್ತು. ಅರ್ಜಿದಾರರು ಪೂರ್ಣ ಮೊತ್ತವನ್ನು ಪಾವತಿಸಿ ನಿವೇಶನವನ್ನು ತಮ್ಮ ಹೆಸರಿಗೆ ನೋಂದಣಿ ಮಾಡಿಕೊಡುವಂತೆ ಪ್ರಾಧಿಕಾರವನ್ನು ಕೋರಿದ್ದರು. ಆದರೆ ಮುಡಾ ಅವರ ಮನವಿಗೆ ಸ್ಪಂದಿಸಲೇ ಇಲ್ಲ, ಆದರೆ, 2014ರಲ್ಲಿ ಅರ್ಜಿದಾರರಿಗೆ ಇನ್ನೂ 21,930 ರು. ಬಾಕಿ ಇದೆ, ಆ ಕಾರಣಕ್ಕೆ ನಿಮಗೆ ನಿವೇಶನದ ಕ್ರಯಪತ್ರ ಮಾಡಿಕೊಡಲಾಗದು ಎಂದು ಹಿಂಬರಹ ನೀಡಿತ್ತು.
ಮುಡಾದ ಕ್ರಮ ಪ್ರಶ್ನಿಸಿ ಅರ್ಜಿದಾರರು ಜಿಲ್ಲಾ ಗ್ರಾಹಕ ನ್ಯಾಯಾಲಯದ ಮೊರೆ ಹೋಗಿದ್ದರು. ನ್ಯಾಯಾಲಯ ಅರ್ಜಿ ಮಾನ್ಯ ಮಾಡಿ ಕ್ರಯಪತ್ರ ಮಾಡಿಕೊಡಬೇಕು, ಇಲ್ಲವಾದರೆ ಪ್ರತಿದಿನ 500 ರು. ದಂಡ ಪಾವತಿಸಬೇಕು ಎಂದು ಆದೇಶ ನೀಡಿತ್ತು. ಆ ಆದೇಶ ಪ್ರಶ್ನಿಸಿ ಮುಡಾ ರಾಜ್ಯ ಗ್ರಾಹಕರ ನ್ಯಾಯಾಲಯದ ಮೊರೆ ಹೋದಾಗ, ನ್ಯಾಯಾಲಯ ಜಿಲ್ಲಾ ನ್ಯಾಯಾಲಯದ ಆದೇಶವನ್ನು ರದ್ದುಗೊಳಿಸಿದ್ದರಿಂದ ಅರ್ಜಿದಾರರು ಹೈಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು.
ಇದನ್ನೂ ಓದಿ: ಉಚ್ಚಂಗಿದುರ್ಗ ಈಶ್ವರ ದೇವಾಲಯ ಖಾಸಗಿ ವ್ಯಕ್ತಿಗಳಿಂದ ಒತ್ತುವರಿ ಆರೋಪ: ಸರ್ಕಾರ, ಜಿಲ್ಲಾಡಳಿತಕ್ಕೆ ನೋಟಿಸ್