ಕಲಬುರಗಿ: ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ಹಗರಣಕ್ಕೆ ಸಂಬಂಧಿಸಿದಂತೆ ಕಲಬುರಗಿ ನಗರದ ಸಂತೋಷ ಕಾಲೊನಿಯಲ್ಲಿರುವ ಬಿಜೆಪಿ ವಿಧಾನ ಪರಿಷತ್ ಸದಸ್ಯ ಸುನೀಲ್ ವಲ್ಯಾಪುರೆ ಅವರ ಮನೆಯ ಮೇಲೆ ಶನಿವಾರ ಸಿಐಡಿ ಅಧಿಕಾರಿಗಳ ತಂಡ ದಾಳಿ ನಡೆಸಿ ದಾಖಲಾತಿಗಳನ್ನು ಶೋಧಿಸಿತು.
ನ್ಯಾಯಾಲಯದ ಸರ್ಚ್ ವಾರಂಟ್ನೊಂದಿಗೆ ಆಗಮಿಸಿದ ಸಿಐಡಿ ಡಿಎಸ್ಪಿ ಅಸ್ಲಂ ಬಾಷಾ ಹಾಗೂ ನಾಲ್ವರು ಸಿಬ್ಬಂದಿಯಿದ್ದ ತಂಡ, ಮಧ್ಯಾಹ್ನ 12ರಿಂದ ಸಂಜೆ 6 ಗಂಟೆವರೆಗೆ ಪರಿಶೀಲನೆ ನಡೆಸಿದೆ. ಹಲವು ದಾಖಲೆಗಳು ಹಾಗೂ ಮನೆಯಲ್ಲಿದ್ದ ಕಂಪ್ಯೂಟರ್ ಸೇರಿ ಡಿಜಿಟಲ್ ದಾಖಲೆಗಳನ್ನು ಪರಿಶೀಲಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
![CID raid on MLC Sunils Valyapure house](https://etvbharatimages.akamaized.net/etvbharat/prod-images/20-10-2024/22718794_kalb.jpg)
ಆರೋಪವೇನು?: ಸುನೀಲ್ ವಲ್ಯಾಪುರೆ ಅವರ ಪುತ್ರ ವಿನಯ್ ವಲ್ಯಾಪುರೆ 2022ರಲ್ಲಿ ಭೋವಿ ನಿಗಮದ 12 ಕೋಟಿ ರೂ. ದುರ್ಬಳಕೆ ಮಾಡಿಕೊಂಡಿದ್ದಾರೆ ಎಂಬ ಆರೋಪವಿದೆ. 2022ರಲ್ಲಿ ನಿಗಮದ ನಾನಾ ಯೋಜನೆಗಳಿಗೆ ನಕಲಿ ಫಲಾನುಭವಿಗಳನ್ನು ಸೃಷ್ಟಿಸಿ ನಿಗಮದ ಹಣವನ್ನು ವಿನಯ್ ತಮ್ಮ ಒಡೆತನದ ಸೋಮನಾಥೇಶ್ವರ ಎಂಟರ್ಪ್ರೈಸಸ್ಗೆ ವರ್ಗಾವಣೆ ಮಾಡಿಕೊಂಡಿದ್ದಾರೆ ಎಂದು ದೂರು ದಾಖಲಾಗಿತ್ತು.
![MLC Sunil Valyapure son Vinay Valyapure](https://etvbharatimages.akamaized.net/etvbharat/prod-images/20-10-2024/22718794_vina.jpg)
'ನನ್ನ ಮನೆಯಲ್ಲಿ ಬದನೆಕಾಯಿಯೂ ಸಿಗಲ್ಲ'-ಸುನೀಲ್ ವಲ್ಯಾಪುರೆ: ಸಿಐಡಿ ಅಧಿಕಾರಿಗಳ ದಾಳಿ ಕುರಿತು ಪ್ರತಿಕ್ರಿಯಿಸಿದ ಎಂಎಲ್ಸಿ ಸುನೀಲ್ ವಲ್ಯಾಪುರೆ, "ಈ ಪ್ರಕರಣದಲ್ಲಿ ನಮ್ಮದೇನೂ ಪಾತ್ರವಿಲ್ಲ. ನಮ್ಮ ಮನೆಯಲ್ಲಿ ಬದನೆಕಾಯಿಯೂ ಸಿಗಲ್ಲ. ಅಧಿಕಾರಿಗಳು ಸರ್ಚ್ ಮಾಡಿದ್ದಾರೆ. ನಾವು ಅವರಿಗೆ ಸಹಕಾರ ನೀಡಿದ್ದೇವೆ. ಕಳೆದ ವಿಧಾನ ಪರಿಷತ್ ಅಧಿವೇಶನದಲ್ಲಿ ಭೋವಿ ನಿಗಮದಲ್ಲಿ ಅವ್ಯವಹಾರವಾಗಿದೆ ಎಂದು ನಾನೇ ಧ್ವನಿ ಎತ್ತಿದ್ದೆ. ಹಗರಣದಲ್ಲಿ ಕೆಲವು ಅಧಿಕಾರಿಗಳು ಸಿಕ್ಕಿಬಿದ್ದಿದ್ದಾರೆ. ಅವರೇ ನಮ್ಮ ಮೇಲೆ ಗೂಬೆ ಕೂರಿಸಲು ಈ ರೀತಿ ಮಾಡುತ್ತಿದ್ದಾರೆ" ಎಂದರು.
ಇದನ್ನೂ ಓದಿ: ಭೋವಿ ಅಭಿವೃದ್ಧಿ ನಿಗಮ ಅಕ್ರಮ ಪ್ರಕರಣ; ತಡರಾತ್ರಿ ಸಿಐಡಿ ಅಧಿಕಾರಿಗಳಿಂದ ಶೋಧ - CID Raid