ಧರ್ಮಶಾಲಾ: ಪ್ಲೇಆಫ್ ಕನಸು ಜೀವಂತವಾಗಿರಿಕೊಳ್ಳಲು ಹೋರಾಟ ನಡೆಸಿದ ಪಂಜಾಬ್ ಬೌಲಿಂಗ್ನಲ್ಲಿ ಮಿಂಚಿ, ಬ್ಯಾಟಿಂಗ್ ವೈಫಲ್ಯ ಕಂಡಿತು. ಇದರಿಂದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಗೆಲ್ಲಲೇಬೇಕಿದ್ದ ಪಂದ್ಯದಲ್ಲಿ 28 ರನ್ಗಳ ಸೋಲನುಭವಿಸಿದೆ. ಕಳೆದ ಪಂದ್ಯದಲ್ಲಿ ತವರಿನಲ್ಲಿ ಸೋಲು ಕಂಡಿದ್ದ ಚೆನ್ನೈ ಟೀಂ ಪಂಜಾಬ್ ವಿರುದ್ಧ ಇಂದು ಸೇಡು ತೀರಿಸಿಕೊಂಡಿದೆ.
ದೇಶದ ಸುಂದರ ಮೈದಾನವಾದ ಧರ್ಮಶಾಲಾದಲ್ಲಿ ನಡೆದ ಹಣಾಹಣಿಯಲ್ಲಿ ಮೊದಲು ಬ್ಯಾಟ್ ಮಾಡಿದ ಸಿಎಸ್ಕೆ 167 ರನ್ಗಳ ಸಾಧಾರಣ ಗುರಿ ನೀಡಿತು. ಗಾಯಗೊಂಡ ಪತಿರಾನಾ ಗೈರಿನಲ್ಲಿ ಅದ್ಭುತ ಆಟ ಪ್ರದರ್ಶನ ತೋರಿದ ಬೌಲರ್ಸ್, ಪಂಜಾಬ್ ಅನ್ನು 139 ರನ್ಗಳಿಗೆ ಕಟ್ಟಿಹಾಕಿ ಗೆಲುವು ತಂದರು.
ಬೌಲರ್ಗಳಿಂದಲೇ ಉತ್ತಮ ಬ್ಯಾಟಿಂಗ್: ಬೌಲಿಂಗ್ನಲ್ಲಿ ಮಿಂಚಿದ್ದ ಪಂಜಾಬ್ ಕಿಂಗ್ಸ್ ಬ್ಯಾಟಿಂಗ್ನಲ್ಲಿ ಠುಸ್ ಆಯಿತು. ತಂಡದ ಐದು ಪ್ರಮುಖ ಬ್ಯಾಟರ್ಗಳು ಒಂದಂಕಿ ದಾಟಲಿಲ್ಲ. ಶಶಾಂಕ್ ಸಿಂಗ್ 27, ಪ್ರಭಸಿಮ್ರಾನ್ ಸಿಂಗ್ 30 ರನ್ ಗಳಿಸಿದ್ದೇ ಅತ್ಯಧಿಕ ಮೊತ್ತವಾಗಿತ್ತು. ಜಾನಿ ಬೈರ್ಸ್ಟೋವ್ 7, ರಿಲೇ ರೋಸ್ಸೋ 0, ನಾಯಕ ಸ್ಯಾಮ್ ಕರ್ರನ್ 7, ಜಿತೇಶ್ ಶರ್ಮಾ 0, ಅಶುತೋಶ್ ಶರ್ಮಾ 3 ರನ್ಗೆ ವಿಕೆಟ್ ನೀಡಿದರು.
ಬೌಲರ್ಗಳಾದ ಹರ್ಪ್ರೀತ್ ಬ್ರಾರ್ 17, ಹರ್ಷಲ್ ಪಟೇಲ್ 12, ರಾಹುಲ್ ಚಹರ್ 16, ಕಗಿಸೊ ರಬಾಡ 11 ರನ್ ಗಳಿಸಿದರು. ಇದಕ್ಕೂ ಮೊದಲು ಹರ್ಷಲ್ ಪಟೇಲ್ ಮತ್ತು ರಾಹುಲ್ ಚಹರ್ ತಲಾ 3 ವಿಕೆಟ್ ಕಿತ್ತು ಸಿಎಸ್ಕೆ ಬ್ಯಾಟಿಂಗ್ ಬೆನ್ನೆಲುಬು ಮುರಿದಿದ್ದರು. ಅರ್ಷದೀಪ್ ಸಿಂಗ್ 2 ವಿಕೆಟ್ ಕಿತ್ತಿದ್ದರು.
ಜಡೇಜಾ ಸೂಪರ್ ಆಲ್ರೌಂಡರ್ ಆಟ: ಟಿ20 ವಿಶ್ವಕಪ್ನ ಭಾಗವಾಗಿರುವ ರವೀಂದ್ರ ಜಡೇಜಾ ತಾವ್ಯಾಕೆ ವಿಶ್ವದ ಶ್ರೇಷ್ಠ ಆಲ್ರೌಂಡರ್ಗಳಲ್ಲಿ ಒಬ್ಬರು ಎಂಬುದನ್ನು ಮತ್ತೊಮ್ಮೆ ಸಾಬೀತು ಮಾಡಿದರು. ಬ್ಯಾಟಿಂಗ್ ವೇಳೆ ತಂಡ ಕುಸಿದಾಗ 43 ರನ್ ಕಲೆ ಹಾಕಿ ನೆರವಾಗಿದ್ದರು. ಬಳಿಕ ಬೌಲಿಂಗ್ನಲ್ಲಿ ಪಂಜಾಬ್ಗೆ ಮಾರಕವಾಗಿ ಪ್ರಮುಖ 3 ವಿಕೆಟ್ ಕಿತ್ತರು.
ಈ ಗೆಲುವಿನ ಮೂಲಕ ಗಾಯಕ್ವಾಡ್ ಪಡೆ 3ನೇ ಸ್ಥಾನಕ್ಕೇರಿತು. ಆಡಿದ 11 ಪಂದ್ಯಗಳಲ್ಲಿ 6 ಗೆದ್ದು 12 ಪಾಯಿಂಟ್ ಹೊಂದಿದೆ. ಪಂಜಾಬ್ ಕಿಂಗ್ಸ್ 11 ರಲ್ಲಿ 4 ಗೆದ್ದು 8 ಪಾಯಿಂಟ್ ಹೊಂದಿದ್ದು ಪ್ಲೇಆಫ್ ಹಾದಿಯಿಂದ ಭಾಗಶಃ ಹೊರಬಿದ್ದಿತು.
ಸೊನ್ನೆ ಸುತ್ತಿದ ಧೋನಿ: ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅಭಿಮಾನಿಗಳನ್ನು ರಂಜಿಸುವಲ್ಲಿ ವಿಫಲರಾದರು. ಕೊನೆಯ ಪಂದ್ಯದಲ್ಲೂ ಸೊನ್ನೆ ಸುತ್ತಿದ ಥಲಾ ಇಲ್ಲೂ ಮತ್ತೆ ಒಂದೂ ರನ್ ಗಳಿಸಲು ಸಾಧ್ಯವಾಗದೆ ಎದುರಿಸಿದ ಮೊದಲ ಎಸೆತದಲ್ಲೇ ಔಟ್ ಆದರು. ಇದರಿಂದ ಅಭಿಮಾನಿಗಳು ಭಾರೀ ನಿರಾಸೆಗೆ ಒಳಗಾದರು.
ಇದನ್ನೂ ಓದಿ: ಅಕ್ಟೋಬರ್ 3 ರಿಂದ ಮಹಿಳಾ ಟಿ20 ವಿಶ್ವಕಪ್ ಹಂಗಾಮ: ಭಾರತದ ಪಂದ್ಯಗಳು ಹೀಗಿವೆ - Womens T20 World Cup