ನವದೆಹಲಿ: ನೈಋತ್ಯ ಪೆಸಿಫಿಕ್ನ ಪುಟ್ಟ ರಾಷ್ಟ್ರವಾದ ಪಪುವಾ ನ್ಯೂಗಿನಿಯಾದಲ್ಲಿ ಪ್ರಕೃತಿ ರುದ್ರನರ್ತನ ತೋರಿದೆ. ಇತ್ತೀಚೆಗೆ ಉಂಟಾದ ಭೂಕುಸಿತದಿಂದ ಅಲ್ಲಿನ ಇಡೀ ಹಳ್ಳಿಯೊಂದು ಸಂಪೂರ್ಣ ನಾಶವಾಗಿದೆ. 2 ಸಾವಿರಕ್ಕೂ ಅಧಿಕ ಜನರು ಭೂ ಸಮಾಧಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಅವಶೇಷಗಳಡಿ ಸಿಲುಕಿದವರ ರಕ್ಷಣೆಗೆ ಕಾರ್ಯಾಚರಣೆ ನಡೆಯುತ್ತಿದೆ.
ಪುಟ್ಟ ಬಡರಾಷ್ಟ್ರಕ್ಕೆ ಹಲವು ದೇಶಗಳು ನೆರವಿನ ಹಸ್ತಚಾಚಿದ್ದು ಭಾರತವೂ ಕೂಡ ಆರ್ಥಿಕ ನೆರವು ಘೋಷಿಸಿದೆ. ದ್ವೀಪ ರಾಷ್ಟ್ರಕ್ಕೆ 10 ಲಕ್ಷ ಡಾಲರ್ ಹಣವನ್ನು ತಕ್ಷಣದ ಪರಿಹಾರ ನೀಡಲಾಗುವುದು ಎಂದಿದೆ. ಅಲ್ಲಿನ ಎಂಗಾ ಪ್ರಾಂತ್ಯದಲ್ಲಿ ಕಳೆದ ವಾರ ಭಾರಿ ಭೂಕುಸಿತದಿಂದ ಸಾವಿರಾರು ಜನರು ಸಮಾಧಿಯಾಗಿ, ದೊಡ್ಡ ವಿನಾಶ ಮತ್ತು ಜೀವಹಾನಿಗೆ ಕಾರಣವಾದ ದ್ವೀಪ ದೇಶಕ್ಕೆ ಪರಿಹಾರ ಘೋಷಿಸುವ ಮೂಲಕ ಒಗ್ಗಟ್ಟನ್ನು ಭಾರತ ಪ್ರದರ್ಶಿಸಿದೆ.
ಇಂದು ಮುಂಜಾನೆ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಪ್ರಾಕೃತಿಕ ದುರಂತಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದು, ಪೆಸಿಫಿಕ್ ದ್ವೀಪ ರಾಷ್ಟ್ರಕ್ಕೆ ಅದರ ಕಷ್ಟದ ಸಮಯದಲ್ಲಿ ಸಾಧ್ಯವಿರುವ ಎಲ್ಲ ಬೆಂಬಲ ಮತ್ತು ಸಹಾಯವನ್ನು ನೀಡಲು ಭಾರತ ಸಿದ್ಧವಿದೆ ಎಂದು ತಿಳಿಸಿದ್ದರು. ಇದರ ಬೆನ್ನಲ್ಲೇ, ಆರ್ಥಿಕ ನೆರವು ಘೋಷಿಸಲಾಗಿದೆ.
ಪುನರ್ವಸತಿಗಾಗಿ ಪರಿಹಾರ ನೆರವು: ಈ ಬಗ್ಗೆ ಅಧಿಕೃತ ಹೇಳಿಕೆ ನೀಡಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯ, ಫೋರಮ್ ಫಾರ್ ಇಂಡಿಯಾ-ಪೆಸಿಫಿಕ್ ಐಲ್ಯಾಂಡ್ಸ್ ಕೋಆಪರೇಶನ್ (ಎಫ್ಐಪಿಐಸಿ) ಅಡಿಯಲ್ಲಿ ನಿಕಟ ಸ್ನೇಹಿತ ಮತ್ತು ಪಾಲುದಾರ ರಾಷ್ಟ್ರವಾದ ಪಪುವಾ ನ್ಯೂಗಿನಿಯಾದ ಸ್ನೇಹಸಂಬಂಧಿ ಒಗ್ಗಟ್ಟಿನ ಸೂಚಕವಾಗಿ, ಭಾರತ ಸರ್ಕಾರವು 1 ಮಿಲಿಯನ್ ಅಮೆರಿಕರನ್ ಡಾಲರ್ ಆರ್ಥಿಕ ನೆರವನ್ನು ತಕ್ಷಣಕ್ಕೆ ನೀಡಲಿದೆ. ಇದರಿಂದ ಪ್ರಕೃತಿ ವಿಕೋಪಕ್ಕೆ ಸಿಲುಕಿದ ಜನರ ಪುನರ್ವಸತಿ ಮತ್ತು ಹಾನಿಗೀಡಾದ ಪ್ರದೇಶದ ಪುನರ್ ನಿರ್ಮಾಣ ಕಾರ್ಯಗಳಿಗೆ ನೆರವಾಗಲಿದೆ ಎಂದು ತಿಳಿಸಿದೆ.
ಭಾರತವು ಮಾನವೀಯ ನೆರವು ಮತ್ತು ವಿಪತ್ತು ಪರಿಹಾರಕ್ಕೆ (ಹೆಚ್ಎಡಿಆರ್) ಬದ್ಧವಾಗಿದೆ. ಸಂಕಷ್ಟದಲ್ಲಿರುವ ಜನರ ಜೊತೆಗೆ ದೇಶ ಸದಾ ಇರುತ್ತದೆ. ಭಾರೀ ಭೂಕುಸಿತದಿಂದ ಸುಮಾರು 2 ಸಾವಿರ ಜನರು ಸಮಾಧಿಯಾಗಿದ್ದಾರೆ ಎಂಬುದು ತೀವ್ರ ದುಃಖದ ಸಂಗತಿಯಾಗಿದೆ ಎಂದಿದೆ. ಇದಕ್ಕೂ ಮೊದಲು, 2018 ರಲ್ಲಾದ ಭೂಕಂಪ, 2019 ಮತ್ತು 2023 ರಲ್ಲಿ ಘಟಿಸಿದ ಜ್ವಾಲಾಮುಖಿ ಸ್ಫೋಟಗಳು ಸೇರಿದಂತೆ ನೈಸರ್ಗಿಕ ವಿಕೋಪಗಳ ಸಮಯದಲ್ಲೂ ಭಾರತವು ಪಪುವಾ ನ್ಯೂಗಿನಿಯಾಕ್ಕೆ ನೆರವು ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.
ಇದನ್ನೂ ಓದಿ: ಪಪುವಾ ನ್ಯೂಗಿನಿ ಭೂಕುಸಿತ: ಕನಿಷ್ಠ 2,000 ಜನರು ಜೀವಂತ ಸಮಾಧಿ! - Papua New Guinea Landslide