Ayurvedic herbs for strong immunity: ಮಳೆಗಾಲದಲ್ಲಿ ಕೆಲವು ಆಯುರ್ವೇದದ ಗಿಡಮೂಲಿಕೆಗಳನ್ನು ಸೇವಿಸುವುದರಿಂದ ಆರೋಗ್ಯವನ್ನು ಸುರಕ್ಷಿತವಾಗಿಟ್ಟುಕೊಳ್ಳಬಹುದು. ಆರೋಗ್ಯ ಮತ್ತು ರೋಗನಿರೋಧಕ ಶಕ್ತಿಯನ್ನು ಸುಧಾರಿಸಲು ಗಿಡಮೂಲಿಕೆಗಳು ನಮಗೆ ಸಾಕಷ್ಟು ನೆರವು ನೀಡುತ್ತವೆ. ಈ ಗಿಡಮೂಲಿಕೆಗಳು ನಿಮ್ಮ ಪ್ರತಿರಕ್ಷಣಾ ವ್ಯವಸ್ಥೆಯನ್ನು ನೈಸರ್ಗಿಕ ರೀತಿಯಲ್ಲಿ ಬಲಪಡಿಸುತ್ತದೆ ಮತ್ತು ನಿಮಗೆ ತಾಜಾತನವನ್ನು ನೀಡುತ್ತದೆ. ಅವುಗಳ ನಿಯಮಿತ ಮತ್ತು ಮಧ್ಯಮ ಬಳಕೆಯು ಮಳೆಗಾಲದಲ್ಲಿ ಸಂಭವಿಸುವ ವಿವಿಧ ರೀತಿಯ ಸೋಂಕುಗಳು, ಶೀತ, ಕೆಮ್ಮು, ಜ್ವರ ಮತ್ತು ಜೀರ್ಣಕಾರಿ ಸಮಸ್ಯೆಗಳಂತಹ ರೋಗಗಳಿಂದ ರಕ್ಷಣೆ ನೀಡುತ್ತವೆ. ಅಷ್ಟೇ ಅಲ್ಲ ಆಯುರ್ವೇದದ ಗಿಡಮೂಲಿಕೆಗಳು ಆರೋಗ್ಯಕರವಾಗಿ ಮತ್ತು ಶಕ್ತಿಯುತವಾಗಿರಿಸಲು ಸಹಾಯ ಮಾಡುತ್ತದೆ.
![Ayurvedic herbs for strong immunity](https://etvbharatimages.akamaized.net/etvbharat/prod-images/27-06-2024/21805927_d12397.jpg)
ಭೋಪಾಲ್ನ ಹಿರಿಯ ಆಯುರ್ವೇದ ವೈದ್ಯ ಡಾ.ರಾಜೇಶ್ ಶರ್ಮಾ, ಮಳೆಗಾಲದ ವಾತಾವರಣದಲ್ಲಿ ಹೆಚ್ಚಿನ ತೇವಾಂಶ ಇರುತ್ತದೆ. ಹೀಗಾಗಿ ಅನೇಕ ರೀತಿಯ ಬ್ಯಾಕ್ಟೀರಿಯಾಗಳ ಬೆಳವಣಿಗೆಗೆ ಕಾರಣವಾಗುತ್ತದೆ ಎಂದು ಹೇಳುತ್ತಾರೆ. ಅದೇ ಸಮಯದಲ್ಲಿ ಈ ಋತುವಿನಲ್ಲಿ, ಆಹಾರವು ಬೇಗನೆ ಹಾಳಾಗುತ್ತದೆ ಹಾಗೂ ನೀರಿಗೆ ಸಂಬಂಧಿಸಿದ ಸಮಸ್ಯೆಗಳಂತಹ ಹಲವಾರು ಸಮಸ್ಯೆಗಳು ತಲೆದೋರುತ್ತವೆ. ಇದು ಕೆಲವೊಮ್ಮೆ ಗಂಭೀರ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಒಟ್ಟಾರೆಯಾಗಿ ಈ ಋತುವಿನಲ್ಲಿ ಹಲವಾರು ರೀತಿಯ ಆರೋಗ್ಯ ಸಂಬಂಧಿತ ಸಮಸ್ಯೆಗಳನ್ನು ಉಂಟು ಮಾಡುವ ಹಲವಾರು ಅಂಶಗಳಿವೆ ಎಂದು ಹೇಳುವುದರಲ್ಲಿ ತಪ್ಪೇನಿಲ್ಲ ಅಂತಾರೆ ಅವರು. ಈ ಸಂದರ್ಭದಲ್ಲಿ ರೋಗನಿರೋಧಕ ಶಕ್ತಿಯು ಪ್ರಬಲವಾಗಿದ್ದರೆ ಈ ಋತುಮಾನದ ಸೋಂಕುಗಳು ಮತ್ತು ರೋಗಗಳಿಂದ ನಾವು ಆರಾಮಾಗಿ ಇರಬಹುದು.
![Ayurvedic herbs for strong immunity](https://etvbharatimages.akamaized.net/etvbharat/prod-images/27-06-2024/21805927_d13976.jpg)
ಗಿಡಮೂಲಿಕೆಗಳ ಪ್ರಯೋಜನಗಳೇನು?: ಮಾನ್ಸೂನ್ ಸಮಯದಲ್ಲಿ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು, ಸಹಾಯ ಮಾಡುವ ಕೆಲವು ಪ್ರಮುಖ ಆಯುರ್ವೇದ ಗಿಡಮೂಲಿಕೆಗಳಿವೆ ಅಂತಾರೆ ಡಾ. ರಾಜೇಶ್ ಶರ್ಮಾ. ಅವುಗಳ ಬಳಕೆಯ ಕೆಲವು ವಿಧಾನಗಳು ಹೀಗಿವೆ.
ಗಿಲೋಯ್: ಗಿಲೋಯ್ ಹೆಚ್ಚು ಪರಿಣಾಮಕಾರಿಯಾದ ಆಯುರ್ವೇದದ ಮೂಲಿಕೆಯಾಗಿದೆ. ಇದು ನಮ್ಮ ದೇಹದ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುತ್ತದೆ ಮತ್ತು ಜ್ವರ, ಶೀತದಂತಹ ಸಮಸ್ಯೆಗಳಿಂದ ಪರಿಹಾರವನ್ನು ನೀಡುತ್ತದೆ. ಅದರ ಕಾಂಡ ಅಥವಾ ಕ್ಯಾಪ್ಸುಲ್ಗಳನ್ನು ಕುದಿಸಿ ತಯಾರಿಸಿದ ಗಿಲೋಯ್ ರಸ ಅಥವಾ ಕಷಾಯವನ್ನು ಪ್ರತಿದಿನ ಸೇವಿಸುವುದರಿಂದ ರೋಗನಿರೋಧಕ ಶಕ್ತಿ ಬಲಪಡಿಸಿಕೊಳ್ಳಬಹುದು. ಋತುಮಾನದ ಸೋಂಕುಗಳು ಮತ್ತು ಜ್ವರದಿಂದ ಪರಿಹಾರವನ್ನು ಈ ಗಿಲೋಯ್ ನೀಡುತ್ತದೆ.
ಅಶ್ವಗಂಧ: ಅಶ್ವಗಂಧ ಒಂದು ಅದ್ಭುತವಾದ ಆಯುರ್ವೇದ ಮೂಲಿಕೆಯಾಗಿದ್ದು ಇದು ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ಶಕ್ತಿಯನ್ನು ವೃದ್ಧಿಸುವಂತೆ ಮಾಡುತ್ತದೆ. ಇದು ಪ್ರತಿರಕ್ಷಣಾ ವ್ಯವಸ್ಥೆಯನ್ನು ಸಹ ಬಲಪಡಿಸುತ್ತದೆ. ಅಶ್ವಗಂಧದ ಪುಡಿಯನ್ನು ಹಾಲು ಅಥವಾ ನೀರಿನಲ್ಲಿ ಬೆರೆಸಿ ಕುಡಿಯುವುದು ಅಥವಾ ಅದರ ಕ್ಯಾಪ್ಸುಲ್ ಅಥವಾ ಮಾತ್ರೆಗಳನ್ನು ಸೇವಿಸುವುದರಿಂದ ಬಲವಾದ ರೋಗನಿರೋಧಕ ಶಕ್ತಿ ನೀಡುವುದಲ್ಲದೇ, ರೋಗಗಳು ಮತ್ತು ಸೋಂಕುಗಳಿಂದ ದೂರವಿರಲು ದೇಹದ ಬಲವರ್ಧನೆಗೆ ಕಾರಣವಾಗುತ್ತದೆ.
ತುಳಸಿ: ತುಳಸಿಯು ಅದರ ಬ್ಯಾಕ್ಟೀರಿಯಾ ಮತ್ತು ಆಂಟಿವೈರಲ್ ಗುಣಲಕ್ಷಣಗಳಿಂದಲೇ ಜನಪ್ರಿಯವಾದ ಪ್ರಮುಖ ಆಯುರ್ವೇದದ ಮೂಲಿಕೆಯಾಗಿದೆ. ಇದನ್ನು ಅನೇಕ ಔಷಧಗಳಲ್ಲಿಯೂ ಬಳಸಲಾಗುತ್ತದೆ. ಇದು ಶೀತ, ಕೆಮ್ಮು ಮತ್ತು ಜ್ವರದಂತಹ ಸಮಸ್ಯೆಗಳಿಂದ ಪರಿಹಾರವನ್ನು ನೀಡುತ್ತದೆ. ತುಳಸಿ ಎಲೆಗಳನ್ನು ಜಗಿಯುವ ಮೂಲಕ ತಿನ್ನುವುದು ಅಥವಾ ಅದರಿಂದ ಚಹಾ ಮಾಡಿ ಕುಡಿಯುವುದರಿಂದ ಭಾರಿ ಪ್ರಯೋಜನಗಳಿವೆ. ಅಷ್ಟೇ ಅಲ್ಲ, ಒಂದು ಲೋಟ ನೀರಿಗೆ 5-7 ತುಳಸಿ ಎಲೆಗಳನ್ನು ಸೇರಿಸಿ ಕುದಿಸಿ ನಂತರ ಫಿಲ್ಟರ್ ಮಾಡಿ ಕುಡಿದರೆ ದೇಹಕ್ಕೆ ದೊಡ್ಡ ರಿಲೀಫ್ ಸಿಗುತ್ತದೆ.
![Ayurvedic herbs for strong immunity](https://etvbharatimages.akamaized.net/etvbharat/prod-images/27-06-2024/21805927_d123976asgdha.jpg)
ಶುಂಠಿ: ಶುಂಠಿಯು ಅದರ ಉರಿಯೂತ ನಿವಾರಕ ಮತ್ತು ಉತ್ಕರ್ಷಣ ನಿರೋಧಕ ಗುಣಲಕ್ಷಣಗಳಿಂದ ಭಾರಿ ಪ್ರಸಿದ್ಧಿ ಪಡೆದುಕೊಂಡಿದೆ. ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ಶೀತ ಮತ್ತು ಕೆಮ್ಮಿನಿಂದ ಪರಿಹಾರವನ್ನು ನೀಡುತ್ತದೆ. ಮಳೆಗಾಲದಲ್ಲಿ, ಶುಂಠಿಯೊಂದಿಗೆ ಚಹಾವನ್ನು ಕುಡಿಯುವುದು, ಅಥವಾ ಕಪ್ಪು ಚಹಾ ಅಥವಾ ಗ್ರೀನ್ ಟೀ ಅಥವಾ ಸರಳ ನೀರಿಗೆ ಶುಂಠಿಯನ್ನು ಸೇರಿಸಿ, ಅದನ್ನು ಕುದಿಸಿ ಮತ್ತು ಜೇನುತುಪ್ಪ ಮತ್ತು ನಿಂಬೆ ರಸವನ್ನು ಸೇರಿಸಿ ಸೇವನೆ ಮಾಡುವುದು ಉತ್ತಮ ಆರೋಗ್ಯ ಪ್ರಯೋಜನಗಳನ್ನು ನೀಡುವಂತೆ ಮಾಡುತ್ತದೆ. ಇದಲ್ಲದೇ ಶುಂಠಿಯನ್ನು ಚೆನ್ನಾಗಿ ತೊಳೆಯುವುದು ಮತ್ತು ಅದರ ತುಂಡುಗಳನ್ನು ಹಾಗೆಯೇ ಅಥವಾ ಹುರಿದ ನಂತರ ಅಗಿಯುವುದು ಸಹ ಅನೇಕ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಶುಂಠಿಯನ್ನು ನಿಯಮಿತವಾಗಿ ಆಹಾರದಲ್ಲಿ ಬಳಸುವುದರಿಂದ ತುಂಬಾ ಪ್ರಯೋಜನಕಾರಿ ಅಂತಾರೆ ಡಾ ರಾಜೇಶ್.
ಅರಿಶಿಣ: ಅರಿಶಿಣದಲ್ಲಿ ಕಂಡುಬರುವ ಕರ್ಕ್ಯುಮಿನ್ ಎಂಬ ಅಂಶವು ನಂಜುನಿರೋಧಕ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಇದು ನಮ್ಮ ದೇಹದ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಒಂದು ಲೋಟ ಬಿಸಿ ಹಾಲನ್ನು ಒಂದು ಚಮಚ ಅರಿಶಿಣದೊಂದಿಗೆ ಬೆರೆಸಿ ಕುಡಿಯುವುದರಿಂದ ರೋಗನಿರೋಧಕ ಶಕ್ತಿ ಗಮನಾರ್ಹವಾಗಿ ಸುಧಾರಿಸುತ್ತದೆ. ಅಷ್ಟೇ ಅಲ್ಲ, ಅರಿಶಿಣವನ್ನು ದೈನಂದಿನ ಆಹಾರದಲ್ಲಿ ಮಸಾಲೆಯಾಗಿ ಬಳಸುವುದರಿಂದ ಆಹಾರದ ಗುಣಗಳನ್ನು ಹೆಚ್ಚಿಸುತ್ತದೆ ಮತ್ತು ಆರೋಗ್ಯಕ್ಕೆ ಹೇಳಿ ಮಾಡಿಸಿದ ಪದಾರ್ಥವಾಗಿದೆ.
ಆಮ್ಲ: ಆಮ್ಲ ವಿಟಮಿನ್ ಸಿ ಯ ಅತ್ಯುತ್ತಮ ಮೂಲವಾಗಿದೆ ಮತ್ತು ಇದು ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸಲು ಹೆಚ್ಚಿನ ನೆರವು ನೀಡುತ್ತದೆ. ಇದು ಜೀರ್ಣಕ್ರಿಯೆಯನ್ನೂ ಸಹ ಸುಧಾರಿಸುತ್ತದೆ. ನೆಲ್ಲಿಕಾಯಿ ರಸ, ತಾಜಾ ಮತ್ತು ಹಸಿ ನೆಲ್ಲಿಕಾಯಿ, ನೆಲ್ಲಿಕಾಯಿ ಪುಡಿ ಅಥವಾ ನೆಲ್ಲಿಕಾಯಿ ಜಾಮ್ ಅನ್ನು ನಿತ್ಯ ಸೇವಿಸುವುದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ.
ಬೇವು: ಬೇವು ಆಂಟಿಬ್ಯಾಕ್ಟೀರಿಯಲ್ ಮತ್ತು ಆಂಟಿಫಂಗಲ್ ಗುಣಗಳನ್ನು ಹೊಂದಿದೆ. ಇದು ಚರ್ಮದ ಸಮಸ್ಯೆಗಳನ್ನು ನಿವಾರಿಸುತ್ತದೆ ಮತ್ತು ರಕ್ತವನ್ನು ಶುದ್ಧಗೊಳಿಸುತ್ತದೆ. ಬೇವಿನ ಎಲೆಗಳ ರಸವನ್ನು ಕುಡಿಯುವುದು ಅಥವಾ ಬೇವಿನ ಚಹಾವನ್ನು ತಯಾರಿಸುವುದು ಅನೇಕ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಬೇವಿನ ಎಲೆಗಳ ಪೇಸ್ಟ್ ತಯಾರಿಸಿ ಅದನ್ನು ಚರ್ಮಕ್ಕೆ ಅನ್ವಯಿಸುವುದರಿಂದ ಚರ್ಮದ ಸೋಂಕುಗಳು ಮತ್ತು ಇತರ ಸಮಸ್ಯೆಗಳಿಂದ ಪರಿಹಾರವನ್ನು ಪಡೆದುಕೊಳ್ಳಬಹುದು. ಬೇವಿನ ಎಲೆಗಳನ್ನು ಹೊಂದಿರುವ ಹೇರ್ ಪ್ಯಾಕ್ಗಳು ಅಥವಾ ಅವುಗಳ ಪೇಸ್ಟ್ನ ಬಳಕೆ ನಿಮ್ಮ ಕೇಶ ಸೌಂದರ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
![Ayurvedic herbs for strong immunity](https://etvbharatimages.akamaized.net/etvbharat/prod-images/27-06-2024/21805927_d123976.jpg)
Important Note: ಇಲ್ಲಿ ನಿಮಗೆ ನೀಡಿರುವ ಎಲ್ಲ ಆರೋಗ್ಯ ಮಾಹಿತಿ ಮತ್ತು ಸಲಹೆಗಳು ನಿಮ್ಮ ತಿಳಿವಳಿಕೆಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯನ್ನು ಆಧರಿಸಿ ನಾವು ಈ ಮಾಹಿತಿಯನ್ನು ಒದಗಿಸುತ್ತಿದ್ದೇವೆ. ಆದರೆ, ಇವುಗಳನ್ನು ಅನುಸರಿಸುವ ಮೊದಲು ಪರಿಣತ ವೈದ್ಯರ ಸಲಹೆಯನ್ನು ತೆಗೆದುಕೊಳ್ಳುವುದು ಉತ್ತಮ.
ಇದನ್ನು ಓದಿ:ವಾಯುಮಾಲಿನ್ಯದಿಂದ ಕ್ಯಾನ್ಸರ್, ಹೃದಯಾಘಾತದ ಅಪಾಯ: ಅಧ್ಯಯನ - Air Pollution