ಭಾರತದ ಪ್ರತಿಷ್ಠಿತ ಫಿಲ್ಮ್ ಫೆಸ್ಟಿವಲ್ಗಳಲ್ಲಿ ಒಂದಾಗಿರುವ ಗೋವಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸದಲ್ಲಿ ಕೆರೆಬೇಟೆ ಸಿನಿಮಾ ಪ್ರದರ್ಶನ ಕಂಡಿದೆ. ಸಿನಿಮಾದ ನಿರ್ಮಾಪಕ ಹಾಗೂ ನಾಯಕ ಗೌರಿಶಂಕರ್, ನಿರ್ದೇಶಕ ರಾಜ್ ಗುರು ಸೇರಿದಂತೆ ಇಡೀ ಸಿನಿಮಾತಂಡ ಭಾಗಿಯಾಗಿದೆ.
ಗೋವಾ ಪಣಜಿಯಲ್ಲಿ ನಡೆಯುತ್ತಿರುವ 55ನೇ 'ಭಾರತದ ಅಂತಾರಾಷ್ಟ್ರೀಯಾ ಚನಲಚಿತ್ರೋತ್ಸವ' ನವೆಂಬರ್ 20ರಿಂದ ಪ್ರಾರಂಭವಾಗಿದ್ದು, 28ರ ವರೆಗೆ ನಡೆಯಲಿದೆ. ಚಿತ್ರೋತ್ಸವಕ್ಕೆ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಅನೇಕ ಸಿನಿ ಗಣ್ಯರು ಸಾಕ್ಷಿಯಾಗಲಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯುವ ಗೋವಾ ಚಿತ್ರೋತ್ಸವದಲ್ಲಿ ಕನ್ನಡದ ಕೆರೆಬೇಟೆ ಸಿನಿಮಾ ಪ್ರದರ್ಶನ ಕಂಡಿರುವುದು ನಿಜಕ್ಕೂ ಸ್ಯಾಂಡಲ್ವುಡ್ಗೆ, ಕನ್ನಡಿಗರಿಗೆ ಹೆಮ್ಮೆಯ ವಿಚಾರ.
![Kerebete film team participates in Goa International Film Festival](https://etvbharatimages.akamaized.net/etvbharat/prod-images/27-11-2024/22989471_thumbnilmeg.jpg)
ಗೋವಾ ಫೆಸ್ಟಿವಲ್ ಪನೋರಮಾ ಫೀಚರ್ ಫಿಲ್ಮ್ ವಿಭಾಗದಲ್ಲಿ ಕನ್ನಡದ ಕೆರೆಬೇಟೆ ಸಿನಿಮಾ ಪ್ರದರ್ಶನ ಕಂಡಿದೆ. ಭಾರತೀಯ ಪನೋರಮಾ ಭಾರತದ ಅಂತಾರಾಷ್ಟ್ರೀಯ ಚನಲಚಿತ್ರೋತ್ಸವದ ಪ್ರಮುಖ ವಿಭಾಗವಾಗಿದೆ. ಇದರಲ್ಲಿ 25 ಫೀಚರ್ ಫಿಲ್ಮ್ ಮತ್ತು 20 ನಾನ್-ಫೀಚರ್ ಫಿಲ್ಮ್ಗಳು ಪ್ರದರ್ಶನ ಕಾಣುತ್ತಿವೆ. ಇಂಡಿಯನ್ ಪನೋರಮಾ ವಿಭಾಗದ ಆರಂಭಿಕ ಸಿನಿಮಾವಾಗಿ 'ಸ್ವಾತಂತ್ರ್ಯ ವೀರ್ ಸಾವರ್ಕರ್' ಹಿಂದಿ ಸಿನಿಮಾ ಪ್ರದರ್ಶನಗೊಂಡಿದೆ. ಇನ್ನು 2ನೇ ಸಿನಿಮಾ ಕನ್ನಡದ ಕೆರೆಬೇಟೆ ಚಿತ್ರ ಪ್ರದರ್ಶನ ಕಂಡಿದೆ.
ಈ ಬಗ್ಗೆ ಸಿನಿಮಾತಂಡ ಸಂತಸ ವ್ಯಕ್ತಪಡಿಸಿದೆ. ಜೂರಿ ಮೆಂಬರ್ ಕೆರೆಬೇಟೆ ಸಿನಿಮಾವನ್ನು ಮೆಚ್ಚಿಕೊಂಡಿದ್ದು, ಪ್ರಪಂಚದ ವಿವಿಧ ಚಿತ್ರ ಪ್ರೇಮಿಗಳಿಂದ ಸಹ ಭಾರೀ ಪ್ರಶಂಸೆ ವ್ಯಕ್ತವಾಗಿದೆ.
![Kerebete film team participates in Goa International Film Festival](https://etvbharatimages.akamaized.net/etvbharat/prod-images/27-11-2024/22989471_thumbnailmeg.jpg)
ಅಂದಹಾಗೆ ಕೆರೆಬೇಟೆ, ರಾಜ್ಗುರು ನಿರ್ದೇಶನದಲ್ಲಿ ಮೂಡಿಬಂದಿರುವ ಚೊಚ್ಚಲ ಸಿನಿಮಾ. ಗೌರಿ ಶಂಕರ್ ನಾಯಕನಾಗಿ ಈ ಸಿನಿಮಾದಲ್ಲಿ ಮಿಂಚಿದ್ದಾರೆ. ನಟನೆ ಜೊತೆಗೆ ಗೌರಿ ಶಂಕರ್ ನಿರ್ಮಾಣದ ಜವಾಬ್ದಾರಿಯನ್ನೂ ವಹಿಸಿಕೊಂಡಿದ್ದರು.
ಕೆರೆಬೇಟೆ ಸಿನಿಮಾ ಬಗ್ಗೆ: ಅಪ್ಪಟ ಹಳ್ಳಿ ಸೊಗಡಿನ ಚಿತ್ರ. ಈ ಸಿನಿಮಾ ಮಾರ್ಚ್ 15ಕ್ಕೆ ರಾಜ್ಯಾದ್ಯಂತ ಅದ್ಧೂರಿಯಾಗಿ ರಿಲೀಸ್ ಆಗಿತ್ತು. ಜನಮನ ಸಿನಿಮಾ ಸಂಸ್ಥೆಯಲ್ಲಿ ಮೂಡಿ ಬಂದಿದ್ದ ಈ ಸಿನಿಮಾ ಮಲೆನಾಡಿನ ಮೀನು ಬೇಟೆ ಸಂಸ್ಕೃತಿಯನ್ನು ಪರಿಚಯಿಸಿತ್ತು. ಸಿನಿಮಾದಲ್ಲಿ ನಾಯಕ ಗೌರಿಶಂಕರ್, ನಾಯಕಿ ಬಿಂದು ಗೌಡ ಜೊತೆಗೆ ಗೋಪಾಲ್ ದೇಶಪಾಂಡೆ, ಸಂಪತ್ ಕುಮಾರ್ ಹರಿಣಿ ಸೇರಿದಂತೆ ಅನೇಕ ದೊಡ್ಡ ಕಲಾವಿದರು ಬಣ್ಣ ಹಚ್ಚಿದ್ದರು.
ಇದನ್ನೂ ಓದಿ: ಡಾಲಿ ಧನಂಜಯ್ ಬಗ್ಗೆ ಮೆಗಾಸ್ಟಾರ್ ಚಿರಂಜೀವಿ ನುಡಿದ ಭವಿಷ್ಯ ನಿಜವಾಗುತ್ತಾ?: ಏನದು ಆ ಮಾತು?