ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಬೇಡಿಕೆ ಹೊಂದಿರುವ ಗೋಲ್ಡನ್ ಸ್ಟಾರ್ ಗಣೇಶ್ ಮುಖ್ಯಭೂಮಿಕೆಯ "ಕೃಷ್ಣಂ ಪ್ರಣಯ ಸಖಿ" ಸಿನಿಮಾ ತೆರೆಕಂಡು, ಶತದಿನದ ಸಂಭ್ರಮದಲ್ಲಿದೆ.
ಈ ಸಾಲಿನ ಆಗಸ್ಟ್ನಲ್ಲಿ ಸಾಲು ಸಾಲು ಸಿನಿಮಾಗಳು ತೆರೆಗಪ್ಪಳಿಸಿ, ಸಿನಿಪ್ರಿಯರಿಗೆ ಮನರಂಜನೆಯ ರಸದೌತಣ ಉಣಬಡಿಸಿದ್ದವು. ಅದರಂತೆ ಆಗಸ್ಟ್ 15ರಂದು 10ಕ್ಕೂ ಹೆಚ್ಚು ಬಹುನಿರೀಕ್ಷಿತ ಸಿನಿಮಾಗಳು ಚಿತ್ರಮಂದಿರ ಪ್ರವೇಶಿಸಿದ್ದವು. ಆ ಪೈಕಿ ಚಂದನವನದ ಗಣಿ ನಟನೆಯ "ಕೃಷ್ಣಂ ಪ್ರಣಯ ಸಖಿ" ಕೂಡಾ ಒಂದು. ಸಿನಿಮಾವೀಗ ಶತದಿನದ ಸಂಭ್ರಮದಲ್ಲಿದ್ದು, ಅಪಾರ ಸಂಖ್ಯೆಯ ಅಭಿಮಾನಿಗಳು ಗೋಲ್ಡನ್ ಸ್ಟಾರ್ನ ಮುಂದಿನ ಪ್ರಾಜೆಕ್ಟ್ಗಳಿಗಾಗಿ ಕಾತರರಾಗಿದ್ದಾರೆ. ಜೊತೆಗೆ "ಕೃಷ್ಣಂ ಪ್ರಣಯ ಸಖಿ" ಚಿತ್ರದ ಯಶಸ್ಸಿಗೆ ಅಭಿನಂದನೆ ತಿಳಿಸುತ್ತಿದ್ದಾರೆ.
![Ganesh Malvika Nair](https://etvbharatimages.akamaized.net/etvbharat/prod-images/20-11-2024/22941588_vdfsdghfsdhf.jpg)
ತ್ರಿಶೂಲ್ ಎಂಟರ್ಟೈನ್ಮೆಂಟ್ ಲಾಂಛನದಲ್ಲಿ ಪ್ರಶಾಂತ್ ಜಿ ರುದ್ರಪ್ಪ ಅವರು ನಿರ್ಮಾಣ ಮಾಡಿದ್ದ ಈ ಚಿತ್ರವನ್ನು ಖ್ಯಾತ ನಿರ್ದೇಶಕ ಶ್ರೀನಿವಾಸರಾಜು ನಿರ್ದೇಶಿಸಿದ್ದಾರೆ. ಗೋಲ್ಡನ್ ಸ್ಟಾರ್ ಗಣೇಶ್ ನಾಯಕರಾಗಿ ಗಮನ ಸೆಳೆದಿರುವ ಸಿನಿಮಾವಿದು. ಚಿತ್ರಮಂದಿರಗಳಿಗೆ ಪ್ರೇಕ್ಷಕರ ಸಂಖ್ಯೆ ಕಡಿಮೆ ಆಗುತ್ತಿದೆ ಎಂಬ ಮಾತುಗಳು ಕೇಳಿಬಂದ ಹೊತ್ತಲ್ಲಿ ಚಿತ್ರಮಂದಿರ ಪ್ರವೇಶಿಸಿ ಕನ್ನಡ ಚಿತ್ರವೊಂದು ನೂರು ದಿನಗಳ ಪ್ರದರ್ಶನ ಕಂಡಿರುವುದು ನಿಜಕ್ಕೂ ಸಂತಸದ ವಿಚಾರ.
ಇದನ್ನೂ ಓದಿ: ಭೈರತಿ ರಣಗಲ್ನನ್ನು ಹೃದಯಕ್ಕೆ ತೆಗೆದುಕೊಂಡ್ರಿ, ಮಫ್ತಿ 2 ಬರಲಿದೆ: ಅಭಿಮಾನಿಗಳಿಗೆ ಶಿವಣ್ಣನ ವಿಶೇಷ ಧನ್ಯವಾದ
ಕರ್ನಾಟಕದ ನಾಲ್ಕು ಕಡೆಗಳಲ್ಲಿ ಈ ಚಿತ್ರ ನೂರು ದಿನಗಳ ಪ್ರದರ್ಶನ ಕಂಡಿದೆ. ಈಗಲೂ ಪ್ರದರ್ಶನ ಕಾಣುತ್ತಿದೆ. ತಮ್ಮ ಸಿನಿಮಾವನ್ನು ಯಶಸ್ವಿಗೊಳಿಸಿದ ಕನ್ನಡ ಸಿನಿಪ್ರಿಯರಿಗೆ ನಿರ್ಮಾಪಕ ಪ್ರಶಾಂತ್ ಜಿ ರುದ್ರಪ್ಪ, ನಿರ್ದೇಶಕ ಶ್ರೀನಿವಾಸರಾಜು ಹಾಗೂ ನಾಯಕ ನಟ ಗಣೇಶ್ ಅವರು ತುಂಬುಹೃದಯದ ಧನ್ಯವಾದ ಅರ್ಪಿಸಿದ್ದಾರೆ. ಅರ್ಜುನ್ ಜನ್ಯ ಸಂಗೀತ ನಿರ್ದೇಶನದ ಹಾಡುಗಳಂತೂ ಬಹಳ ಜನಪ್ರಿಯವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಈಗಲೂ ಸದ್ದು ಮಾಡುತ್ತಿವೆ. ಚಿತ್ರದ ದ್ವಾಪರ ಸಾಂಗ್ ಬಹಳ ದಿನಗಳವರೆಗೆ ಸುದ್ದಿಯಲ್ಲಿತ್ತು. ಈ ಹಾಡಿಗೆ ಸಪರೇಟ್ ಫ್ಯಾನ್ ಬೇಸ್ ಇದ್ದು, ಸಾಕಷ್ಟು ರೀಲ್ಸ್ ಮೂಡಿಬಂದಿವೆ.
![Ganesh Malvika Nair](https://etvbharatimages.akamaized.net/etvbharat/prod-images/20-11-2024/22941588_ejgtrseftr.jpg)
ಇದನ್ನೂ ಓದಿ: ಮಹಾರಾಷ್ಟ್ರ ಚುನಾವಣೆ: ಬಾಲಿವುಡ್ ಖ್ಯಾತ ಸೆಲೆಬ್ರಿಟಿಗಳಿಂದ ಮತದಾನ - ಯಾರೆಲ್ಲ ಮತ ಚಲಾಯಿಸಿದರು ವಿಡಿಯೋ ನೋಡಿ!
ಕೃಷ್ಣಂ ಪ್ರಣಯ ಸಖಿಯಲ್ಲಿ ಗಣೇಶ್ ಜೊತೆ ಬಹುಭಾಷಾ ನಟಿ ಮಾಳವಿಕ ನಾಯರ್ ತೆರೆಹಂಚಿಕೊಂಡರು. ಉಳಿದಂತೆ ಶರಣ್ಯ ಶೆಟ್ಟಿ, ಶ್ರೀನಿವಾಸಮೂರ್ತಿ, ಸಾಧುಕೋಕಿಲ, ರಂಗಾಯಣ ರಘು, ಶಶಿಕುಮಾರ್, ಶಿವಧ್ವಜ್, ಶ್ರುತಿ, ಭಾವನ, ಅಶೋಕ್, ರಾಮಕೃಷ್ಣ, ರಘುರಾಮ್, ಮಾನಸಿ ಸುಧೀರ್, ಅಂಬುಜ, ಗಿರಿ ಶಿವಣ್ಣ ಸೇರಿದಂತೆ ಹಲವರು ಕಾಣಿಸಿಕೊಂಡಿದ್ದಾರೆ. ಇದು ಗಣೇಶ್ ಅಭಿನಯದ 41ನೇ ಚಿತ್ರ. ಮುಂದಿನ ಸಿನಿಮಾಗಳಿಗಾಗಿ ಅಭಿಮಾನಿಗಳು ಎದುರು ನೋಡುತ್ತಿದ್ದಾರೆ.