ಇದೇ ತಿಂಗಳ 23ರಿಂದ ಸೆಲೆಬ್ರಿಟಿ ಕ್ರಿಕೆಟ್ ಲೀಗ್ (CCL) 10ನೇ ಆವೃತ್ತಿ ಆರಂಭವಾಗಲಿದೆ. ಸ್ಯಾಂಡಲ್ವುಡ್ ಟು ಬಾಲಿವುಡ್ ತನಕ ಎಲ್ಲಾ ಇಂಡಸ್ಟ್ರೀಯ ಸ್ಟಾರ್ಗಳು ಸೆಲೆಬ್ರಿಟಿ ಕ್ರಿಕೆಟ್ ಲೀಗ್ 10ರ ಸೀಸಸ್ನಲ್ಲಿ ಪಾಲ್ಗೊಳ್ಳಲಿದ್ದಾರೆ. ಇತ್ತೀಚೆಗಷ್ಟೇ ದುಬೈನಲ್ಲಿ ಅದ್ಧೂರಿಯಾಗಿ ಸಿಸಿಎಲ್ಗೆ ಚಾಲನೆ ನೀಡಲಾಗಿತ್ತು. ಸಿಸಿಎಲ್ಗೆ ಕೇವಲ ಎರಡು ದಿನಗಳು ಮಾತ್ರ ಬಾಕಿ ಉಳಿದಿದ್ದು ಎಲ್ಲಾ ತಂಡದ ನಟರು ಭರ್ಜರಿ ಅಭ್ಯಾಸ ನಡೆಸುತ್ತಿದ್ದಾರೆ.
ಕರ್ನಾಟಕ ಬುಲ್ಡೋಜರ್ಸ್ ತಂಡ ಅಭ್ಯಾಸಕ್ಕೂ ಮುನ್ನ ಮಾಧ್ಯಮದೊಟ್ಟಿಗೆ ಒಂದಿಷ್ಟು ಮಾಹಿತಿ ಹಂಚಿಕೊಂಡಿದೆ. ಖಾಸಗಿ ಹೋಟೆಲ್ನಲ್ಲಿ ನಡೆದ ಸೆಲೆಬ್ರಿಟಿ ಕ್ರಿಕೆಟ್ ಲೀಗ್ನ ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ಬುಲ್ಡೋಜರ್ಸ್ ತಂಡದ ಮಾಲೀಕ ಅಶೋಕ್ ಖೇಣಿ, ಸಿಸಿಎಲ್ ಸಂಸ್ಥಾಪಕ ವಿಷ್ಣು ಇಂದೋರಿ ಹಾಗೂ ಕ್ಯಾಪ್ಟನ್ ಪ್ರದೀಪ್ ಸೇರಿದಂತೆ ಇತತರು ಭಾಗಿಯಾಗಿದ್ದರು. ಅನಾರೋಗ್ಯದ ಕಾರಣದಿಂದ ಕಿಚ್ಚ ಸುದೀಪ್ ಅವರು ಭಾಗಿಯಾಗಲಿರಲಿಲ್ಲ. ಇದೇ ಸಂದರ್ಭದಲ್ಲಿ ಸಿಸಿಎಲ್ ಜರ್ನಿ ವಿಡಿಯೋ ಬಿಡುಗಡೆ ಮಾಡಲಾಯಿತು.
ಬಳಿಕ ಮಾತನಾಡಿದ ಕರ್ನಾಟಕ ಬುಲ್ಡೋಜರ್ಸ್ ಕ್ಯಾಪ್ಟನ್ ಪ್ರದೀಪ್, 12 ವರ್ಷದ ಸಿಸಿಎಲ್ ಜರ್ನಿ ನೋಡಿದ್ಮೇಲೆ ತುಂಬಾ ಎಮೋಷನಲ್ ಮೂಮೆಂಟ್ ತರ ಇದೆ. ಅಷ್ಟು ವರ್ಷದ ಎಫರ್ಟ್ ಇವತ್ತು ಬುರ್ಜ್ ಖಲೀಫಾ ಮೇಲೆ ಬರ್ತಿದೆ. ಸಿಸಿಎಲ್ ಬಿಗ್ಗರ್ ಅಂಡ್ ಬೆಟರ್ ಆಗ್ತಿದೆ. ಇವಿಷ್ಟಕ್ಕೂ ನಾನು ವಿಷ್ಣು ಸರ್ಗೆ ಧನ್ಯವಾದ ಹೇಳುತ್ತೇನೆ. ಕರ್ನಾಟಕ ಬುಲ್ಡೋಜರ್ಸ್ ಸ್ಟಾಟ್ ಆಗುವುದೇ ಕೆ ಅಕ್ಷರದಿಂದ ಅಂದ್ರೆ ಸುದೀಪಣ್ಣ ಅವರನ್ನು ಬಿಟ್ಟು ಮಾತನಾಡಲು ಸಾಧ್ಯವಿಲ್ಲ. ಅವರಿಗೆ ಹುಷಾರಿಲ್ಲ. ಹೀಗಾಗಿ ಅವರು ಬರಲು ಆಗಲಿಲ್ಲ ಎಂದರು.
ತಂಡದ ಮಾಲೀಕ ಅಶೋಕ್ ಖೇಣಿ ಮಾತನಾಡಿ, ಸಿಸಿಎಲ್ನಲ್ಲಿ ಇಂತಹ ತಂಡ ಪಡೆದಿರುವುದು ನನ್ನ ಅದೃಷ್ಟ. ಸುದೀಪ್ ಅವರಿಗೆ ಕ್ರಿಕೆಟ್ ಅಂದ್ರೆ ಹುಚ್ಚು. ಕ್ರಿಕೆಟನ್ನು ಪ್ರೀತಿಸ್ತಾರೆ. ಒಮ್ಮೆ ಸಿಸಿಎಲ್ನಲ್ಲಿ ಪೆಟ್ಟು ಮಾಡಿಕೊಂಡಿದ್ದರು. ಆದ್ರೆ ಅದನ್ನು ಲೆಕ್ಕಿಸದೇ ಮತ್ತೆ ಆಟವಾಡಿದ್ದರು. ಕ್ರಿಕೆಟ್ ಸಿನಿಮಾ ಇಂಡಸ್ಟ್ರೀಯ ಭಾಗ. ಅದೇ ರೀತಿ ಸಿನಿಮಾ ಕ್ರಿಕೆಟ್ನ ಒಂದು ಭಾಗ ಎಂದರು.
ಸಿಸಿಎಲ್ ಸಂಸ್ಥಾಪಕ ಹಾಗೂ ವ್ಯವಸ್ಥಾಪಕ ನಿರ್ದೇಶಕರು ಆಗಿರುವ ವಿಷ್ಣು ವರ್ಧನ್ ಇಂದೂರಿ ಮಾತನಾಡಿ, ಸಿಸಿಎಲ್ ಅನ್ನು ಈ ಮಟ್ಟಕ್ಕೆ ತರಬೇಕಾದರೆ ಬಹಳ ಕಷ್ಟಪಟ್ಟಿದ್ದೇವೆ. ನೋವು ಅನುಭವಿಸಿದ್ದೇವೆ. ಅನೇಕ ಬಾರಿ ನಿಲ್ಲಿಸುವ ಯೋಚನೆಯೂ ಬಂದಿದೆ. ಆದರೆ ಅಶೋಕ್ ಸರ್, ಸುದೀಪ್ ಸರ್ ಸಪೋರ್ಟ್ ಹಾಗೂ ಆಟದ ಮೇಲಿನ ಪ್ರೀತಿ ಇದನ್ನು ಇಲ್ಲಿವರೆಗೆ ತರಲು ಸಾಧ್ಯವಾಯಿತು. ಈ ಬಾರಿ ಸಿಸಿಎಲ್ ದೊಡ್ಡ ಮಟ್ಟದಲ್ಲಿ ನಡೆಯುತ್ತಿದ್ದು, ದೂರದರ್ಶನ, ಸೋನಿ, ಜಿಯೋ ಸಿನಿಮಾಗಳಲ್ಲಿ ಪ್ರಸಾರಗೊಳ್ಳುತ್ತಿದ್ದು, ಹೊಸ ದಾಖಲೆ ಬರೆಯಲಿದೆ ಎಂದರು.
ಸಿಸಿಎಲ್ 10ನೇ ಸೀಸನ್ ಫೆಬ್ರವರಿ 23 ರಿಂದ ಆರಂಭವಾಗಿ ಮಾರ್ಚ್ 17ರ ವರೆಗೆ ನಡೆಯಲಿದೆ. ಭಾರತದ ಎಂಟು ಚಲನಚಿತ್ರೋದ್ಯಮಗಳ ಸೂಪರ್ಸ್ಟಾರ್ ಒಳಗೊಂಡಿರುವ ಒಟ್ಟು ಎಂಟು ತಂಡಗಳು ಯುಎಇ ಸೇರಿದಂತೆ ಭಾರತದ ಐದು ಸ್ಥಳಗಳಲ್ಲಿ 24 ದಿನಗಳ ಕಾಲ ಕ್ರಿಕೆಟ್ ಅಂಗಳದಲ್ಲಿ ಪ್ರಶಸ್ತಿಗಾಗಿ ಕಾದಾಡಲಿವೆ. ಯುಎಇಯ ಶಾರ್ಜಾದಲ್ಲಿ ಲೀಗ್ನ ಮೂರು ಪಂದ್ಯಗಳು ನಡೆಯಲ್ಲಿದ್ದು, ಆ ನಂತರ ಲೀಗ್ ಭಾರತಕ್ಕೆ ಕಾಲಿಡಲಿದೆ. ಐದು ನಗರಗಳಾದ ಹೈದರಾಬಾದ್, ಬೆಂಗಳೂರು, ಚಂಡೀಗಢ, ತಿರುವನಂತಪುರ ಮತ್ತು ವೈಜಾಗ್ನಲ್ಲಿ ಉಳಿದ ಪಂದ್ಯಗಳು ನಡೆಯಲ್ಲಿವೆ. ವಾರಾಂತ್ಯದಲ್ಲಿ ಅಂದರೆ ಶನಿವಾರ ಹಾಗೂ ಭಾನುವಾರ ಡಬಲ್ ಹೆಡರ್ (ಎರಡು) ಪಂದ್ಯಗಳಿರಲಿವೆ. ಉದ್ಘಾಟನಾ ಪಂದ್ಯದಲ್ಲಿ ಮುಂಬೈ ಹೀರೋಸ್ ಮತ್ತು ಕೇರಳ ಸ್ಟ್ರೈಕರ್ಸ್ ತಂಡಗಳು ಮುಖಾಮುಖಿಯಾಗಲಿವೆ. ಕರ್ನಾಟಕ ಬುಲ್ಡೋಜರ್ಸ್ ಮೊದಲ ಪಂದ್ಯಾವಳಿ ಇದೇ 25ರಂದು ನಡೆಯುತ್ತಿದ್ದು, ಮುಂಬೈ ಹೀರೋಸ್ ಎದುರು ಸೆಣಸಲಿದೆ.
ಸಿಸಿಎಲ್ ತಂಡಗಳು
ಕರ್ನಾಟಕ ಬುಲ್ಡೋಜರ್ಸ್
ಮುಂಬೈ ಹೀರೋಸ್
ಕೇರಳ ಸ್ಟ್ರೈಕರ್ಸ್
ತೆಲುಗು ವಾರಿಯರ್ಸ್
ಭೋಜ್ಪುರಿ ದಬಾಂಗ್ಸ್
ಬೆಂಗಾಲ್ ಟೈಗರ್ಸ್
ಚೆನ್ನೈ ರೈನೋಸ್
ಪಂಜಾಬ್ ದಿ ಶೇರ್
ಕರ್ನಾಟಕ ಬುಲ್ಡೋಜರ್ಸ್ ತಂಡಕ್ಕೆ ಪ್ರದೀಪ್ ಕ್ಯಾಪ್ಟನ್ ಆಗಿದ್ದಾರೆ. ಮುಂಬೈ ಹೀರೋಸ್ ತಂಡಕ್ಕೆ ನಟ ಸಲ್ಮಾನ್ ಖಾನ್ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದು, ರಿತೇಶ್ ದೇಶಮುಖ್ ಕ್ಯಾಪ್ಟನ್ ಆಗಿದ್ದಾರೆ. ಸೋಹೈಲ್ ಖಾನ್ ಅವರು ಈ ತಂಡದ ಮಾಲೀಕ. ತೆಲುಗು ವಾರಿಯರ್ಸ್ ಟೀಮ್ಗೆ ವೆಂಕಟೇಶ್ ದಗ್ಗುಬಾಟಿ ಅವರು ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದು, ಅಖಿಲ್ ಅಕ್ಕಿನೇನಿ ನಾಯಕನಾಗಿದ್ದಾರೆ. ಮೋಹನ್ ಲಾಲ್ ಸಹ-ಮಾಲೀಕರಾಗಿರುವ ಕೇರಳ ಸ್ಟ್ರೈಕರ್ಸ್ ತಂಡವನ್ನು ಇಂದ್ರಜಿತ್ ಮುನ್ನಡೆಸಲಿದ್ದಾರೆ. ಭೋಜಪುರಿ ದಬಾಂಗ್ಸ್ ತಂಡಕ್ಕೆ ಮನೋಜ್ ತಿವಾರಿ ನಾಯಕ, ಸೋನು ಸೂದ್ ಅವರು ಪಂಜಾಬ್ ದಿ ಶೇರ್’ ತಂಡಕ್ಕೆ ನಾಯಕರಾಗಿದ್ದಾರೆ. ಬೋನಿ ಕಪೂರ್ ಒಡೆತನದ ‘ಬೆಂಗಾಲ್ ಟೈಗರ್ಸ್’ ಟೀಮ್ ಗೆ ಜಿಸ್ಸು ಸೇನ್ಗುಪ್ತ ಕ್ಯಾಪ್ಟನ್ ಆಗಿದ್ದಾರೆ.
ಇದನ್ನೂ ಓದಿ: ರಶ್ಮಿಕಾ ಬೆನ್ನಲ್ಲೇ ಅಪಾಯದಿಂದ ಪಾರಾದ 'ಮಾರ್ಟಿನ್' ಚಿತ್ರತಂಡ: ಧ್ರುವ ಸರ್ಜಾ ಹೇಳಿದ್ದಿಷ್ಟು!