ಲಾತೂರ್ : ಕಳೆದ ಕೆಲ ತಿಂಗಳುಗಳಿಂದ ಹೆದ್ದಾರಿ ಬದಿಯಲ್ಲಿ ತನ್ನ 4 ವರ್ಷದ ಮಗಳೊಂದಿಗೆ ಬದುಕುತ್ತಿದ್ದ ಮಾನಸಿಕ ಅಸ್ವಸ್ಥೆಯೋರ್ವಳನ್ನು ಮರಳಿ ಆಕೆಯ ಕುಟುಂಬದೊಂದಿಗೆ ಸೇರಿಸಲಾಗಿದೆ. ಮಹಾರಾಷ್ಟ್ರದ ಲಾತೂರ್ ಜಿಲ್ಲೆಯ ಹೆದ್ದಾರಿ ಬದಿಯಲ್ಲಿ ಕಳೆದ ಹಲವು ತಿಂಗಳುಗಳಿಂದ ವಾಸಿಸುತ್ತಿದ್ದ ಮಾನಸಿಕ ಅಸ್ವಸ್ಥ ಮಹಿಳೆ ಮತ್ತು ಆಕೆಯ 4 ವರ್ಷದ ಮಗಳಳು ಕೆಲ ಯುವಕರ ಶ್ರಮದಿಂದ ಮತ್ತೆ ಕುಟುಂಬದೊಂದಿಗೆ ಸೇರುವಂತಾಗಿದೆ.
ಔರಾದ್-ಶಹಜಾನಿ ರಸ್ತೆಯಲ್ಲಿ ಓರ್ವ ಮಹಿಳೆಯು ತನ್ನ ಮಗುವಿನೊಂದಿಗೆ ವಾಸಿಸುತ್ತಿರುವುದನ್ನು ಕೆಲ ಸಮಾನ ಮನಸ್ಕ ಯುವಕರು ಫೆಬ್ರವರಿಯಲ್ಲಿ ಗುರುತಿಸಿದ್ದರು. ನಂತರ ಇಂಥ ನೊಂದವರ ಸಹಾಯಕ್ಕಾಗಿ ಕೆಲಸ ಮಾಡುವ ಎನ್ಜಿಒ ಒಂದಕ್ಕೆ ಅವರು ಈ ಬಗ್ಗೆ ಮಾಹಿತಿ ನೀಡಿದ್ದರು.
"ಶಿರ್ಶಿ ಹಂಗರ್ಗಾ ಗ್ರಾಮದಲ್ಲಿ ಮಹಿಳೆ ಕುಳಿತಿರುವಾಗ ಅಲ್ಲಿಂದ ಸುಮಾರು 100 ಮೀಟರ್ ದೂರದಲ್ಲಿರುವ ಬಾವಿಯಲ್ಲಿ ಆಕೆಯ ಮಗ ಮುಳುಗಿ ಸತ್ತಿದ್ದ. ಇದನ್ನು ನೋಡಿ ಆಕೆಯ ಪತಿ ಕೂಡ ತೀರಿಕೊಂಡಿದ್ದ. ಇದರಿಂದ ಮಾನಸಿಕ ಆಘಾತಕ್ಕೊಳಗಾದ ಮಹಿಳೆ ಯಾವುದೇ ದಿಕ್ಕು ತೋಚದೆ ಅಲ್ಲಿಯೇ ಇರತೊಡಗಿದ್ದಳು. ಅವಳನ್ನು ನಾವು ಬುಲ್ಧಾನಾ ಜಿಲ್ಲೆಯ ವರ್ವಾಂಡ್ನಲ್ಲಿರುವ ದಿವ್ಯ ಸೇವಾ ವಸತಿ ಪುನರ್ವಸತಿ ಕೇಂದ್ರಕ್ಕೆ ಸೇರಿಸಿದೆವು." ಎಂದು ರಿಲಿಜಿಯನ್ ಟು ರೆಸ್ಪಾನ್ಸಿಬಿಲಿಟಿ ಎನ್ಜಿಒದ ಕಾರ್ಯಕರ್ತ ರಾಹುಲ್ ಪಾಟೀಲ್ ಚಕುರ್ಕರ್ ಭಾನುವಾರ ಪಿಟಿಐಗೆ ತಿಳಿಸಿದರು.
"ಕೆಲವು ತಿಂಗಳುಗಳ ಕಾಲ ಕೇಂದ್ರದಲ್ಲಿ ಚಿಕಿತ್ಸೆ ಪಡೆದ ನಂತರ, ಮಹಿಳೆ ಮತ್ತು ಅವಳ ಮಗಳು ಇತ್ತೀಚೆಗೆ ನಿಲಂಗಾ ತಹಸಿಲ್ನಲ್ಲಿರುವ ತನ್ನ ಕುಟುಂಬದೊಂದಿಗೆ ಮರಳಿ ಸೇರಿಕೊಂಡಿದ್ದಾಳೆ. ಮಹಿಳೆಯ ಎರಡನೇ ಪುತ್ರ 12ನೇ ತರಗತಿ ಪಾಸಾಗಿ ಸ್ಥಳೀಯ ಹೋಟೆಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದಾನೆ. ಅಲ್ಲದೆ ಮಹಿಳೆಗೆ 12 ವರ್ಷದ ಇನ್ನೋರ್ವ ಪುತ್ರಿ ಇದ್ದಾಳೆ. ಇಬ್ಬರೂ ತಾಯಿಯನ್ನು ಕಂಡು ತುಂಬಾ ಸಂತೋಷವಾಗಿದ್ದಾರೆ" ಎಂದು ಅವರು ಹೇಳಿದರು.
ಮಕ್ಕಳ ಕಳ್ಳ ಸಾಗಣೆ ಪ್ರಕರಣದಲ್ಲಿ ಮತ್ತೋರ್ವ ಮಹಿಳೆಯ ಬಂಧನ: ಮುಂಬೈ: ಮಕ್ಕಳ ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರ ಅಪರಾಧ ವಿಭಾಗ ಪೊಲೀಸರು ಶುಕ್ರವಾರ ಮತ್ತೋರ್ವ ಮಹಿಳೆಯನ್ನು ಬಂಧಿಸಿದ್ದು, ಬಂಧಿತರ ಸಂಖ್ಯೆ 34 ಕ್ಕೆ ಏರಿದೆ. ತನ್ನ ಸ್ವಂತ ಮಗುವನ್ನು 2 ಲಕ್ಷ ರೂ.ಗೆ ಮಾರಾಟ ಮಾಡಿದ ನಲ್ಲಸೊಪರದ ಮದೀನಾ ಅನ್ಸಾರಿ ಖಾನ್ (38) ಎಂಬಾಕೆಯನ್ನು ಅಪರಾಧ ವಿಭಾಗದ 2 ನೇ ಘಟಕ ಬಂಧಿಸಿದೆ. ಅನ್ಸಾರಿಯನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ. ಪೊಲೀಸರು ಮಗುವನ್ನು ರತ್ನಗಿರಿಯಿಂದ ರಕ್ಷಿಸಿದ್ದಾರೆ. ಏಪ್ರಿಲ್ನಲ್ಲಿ, ಅಪರಾಧ ವಿಭಾಗ ಘಟಕ ಅಂತರರಾಜ್ಯ ಮಕ್ಕಳ ಕಳ್ಳಸಾಗಣೆ ಗ್ಯಾಂಗ್ ಅನ್ನು ಭೇದಿಸಿ, ವೈದ್ಯರು ಸೇರಿದಂತೆ ಏಳು ಜನರನ್ನು ಬಂಧಿಸಿತ್ತು.
ಇದನ್ನೂ ಓದಿ : ಕೋರ್ಟ್ ಆದೇಶದ ಮೇರೆಗೆ ಅಕ್ರಮವಾಗಿ ನಿರ್ಮಿಸುತ್ತಿದ್ದ ವೈಎಸ್ಆರ್ಸಿಪಿ ಕಚೇರಿ ನೆಲಸಮ: ಟಿಡಿಪಿ - YSRP Office Demolished