ಮಂಡಿ (ಹಿಮಾಚಲ ಪ್ರದೇಶ): ಸಂಜೌಲಿ ಪ್ರದೇಶದಲ್ಲಿ ನಿರ್ಮಿಸಲಾಗಿರುವ ಪ್ರಾರ್ಥನಾ ಮಂದಿರದ ಕೆಲವು ಮಹಡಿಗಳನ್ನು ಅಕ್ರಮವಾಗಿ ನಿರ್ಮಿಸಲಾಗಿದೆ ಎಂದು ಆರೋಪಿಸಿ ಮಂಡಿಯಲ್ಲಿಂದು ಬೃಹತ್ ಪ್ರತಿಭಟನೆಗೆ ಕೆಲವು ಸಂಘಟನೆಗಳು ಮುಂದಾಗಿದ್ದವು. ಆದರೆ ಅದಕ್ಕೆ ಮುಂಚೆಯೇ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಅಪೂರ್ವ್ ದೇವಗನ್ ಏಳು ವಾರ್ಡ್ಗಳಲ್ಲಿ ಭಾರತೀಯ ನಾಗರಿಕ ರಕ್ಷಣಾ ಸಂಹಿತೆಯ ಸೆಕ್ಷನ್ 163 (ನಿಷೇಧಾಜ್ಞೆ) ಜಾರಿಗೊಳಿಸಿದ್ದಾರೆ.
ಸೆಕ್ಷನ್ 163 ಅಡಿ ಐದಕ್ಕಿಂತ ಹೆಚ್ಚು ಮಂದಿ ಒಟ್ಟುಗೂಡುವುದನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ. ಜೊತೆಗೆ ಶಸಾಸ್ತ್ರಗಳು ಹಾಗೂ ದಹನಶೀಲ ವಸ್ತುಗಳನ್ನು ಸಾಗಿಸುವುದನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ.
ವಾರ್ಡ್ ನಂ 5 ಮಂಗ್ವಾಲ್, ವಾರ್ಡ್ ನಂ 13 ಥಾನೆಹ್ರಾ, ವಾರ್ಡ್ ನಂ 12 ಭಗ್ವಹನ್ ಮೊಹಲ್ಲಾ, ವಾರ್ಡ್ 8 ಪ್ಯಾಲೇಸ್-1, ವಾರ್ಡ್ 9 ಫೇಸ್ 2, ವಾರ್ಡ್ 10 ಸುಹ್ರಾ ಮೊಹಲ್ಲಾ, ವಾರ್ಡ್ 11 ಮಂಡಿ ಮುನ್ಸಿಪಲ್ ಕಾರ್ಪೊರೇಷನ್ ಪ್ರದೇಶದ ಸಂಖೇಟರ್ನಲ್ಲಿ ನಿಷೇಧಾಜ್ಞೆಯನ್ನು ವಿಧಿಸಲಾಗಿದೆ.
ಈ ಕುರಿತು ಮಾತನಾಡಿದ ಜಿಲ್ಲಾ ಮ್ಯಾಜಿಸ್ಟ್ರೇಟ್, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಡೆಯುವ ಉದ್ದೇಶದಿಂದ ಜಿಲ್ಲಾಡಳಿಕ ಈ ಕ್ರಮಕ್ಕೆ ಮುಂದಾಗಿದೆ. ಯಾವುದೇ ರೀತಿಯ ಪ್ರತಿಭಟನೆಗೆ ಸಮರ್ಥನೆ ಇಲ್ಲ. ಬಿಎನ್ಎಸ್ ಸೆಕ್ಷನ್ 183 ಅನ್ನು ನಗರದ ಏಳು ವಾರ್ಡ್ನಲ್ಲಿ ಜಾರಿಗೆ ತರಲಾಗಿದೆ. ಯಾರಾದರೂ ಶಾಂತಿ ಕದಡಿದಲ್ಲಿ ಅವರ ವಿರುದ್ಧ ಕಠಿಣ ಕಾನೂನು ಕ್ರಮಗಳಿಗೆ ಮುಂದಾಗಲಾಗುವುದು ಎಂದು ಎಚ್ಚರಿಸಿದರು.
ಮುಂದುವರೆದು ಮಾತನಾಡಿದ ಅವರು, ಒಂದೆರಡು ದಿನಗಳ ಹಿಂದೆ ಇಲ್ಲಿನ ಜನರು ಶಾಂತಿಯುತವಾಗಿ ಈ ಕುರಿತು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಜನರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುವುದರಲ್ಲಿ ನಮಗೆ ಯಾವುದೇ ಸಮಸ್ಯೆ ಇಲ್ಲ. ಆದರೆ, ಅದರಿಂದ ಶಾಂತಿ ಕದಡುವುದು ಸರಿಯಲ್ಲ. ಶಾಂತಿಯುತವಾಗಿ ಪ್ರತಿಭಟನೆ ನಡೆಸುವಂತೆ ನಾನು ಜನರಲ್ಲಿ ಮನವಿ ಮಾಡುತ್ತೇನೆ ಎಂದಿದ್ದಾರೆ.
ಸರ್ಕಾರಿ ಭೂಮಿಯಲ್ಲಿ ಅನಧಿಕೃತವಾಗಿ ನಿರ್ಮಾಣವಾಗಿದ್ದ ಪ್ರಾರ್ಥನಾ ಮಂದಿರದ ಗೋಡೆ ಕೆಡವಲು ನಿರ್ಧರಿಸಲಾಗಿದೆ. ಸಂಜೌಲಿಯಲ್ಲಿರುವ ಪ್ರಾರ್ಥನ ಮಂದಿರದ ಅನಧಿಕೃತ ಭಾಗವನ್ನು ಕೆಡವಲು ಶಿಮ್ಲಾ ಪುರಸಭೆಯ ಆಯುಕ್ತರಿಂದ ಅನುಮತಿ ಕೋರಿದ್ದೇವೆ ಎಂದು ಕಲ್ಯಾಣ ಸಮಿತಿ ಸದಸ್ಯ ಮುಫ್ತಿ ಮೊಹಮ್ಮದ್ ಶಾಫಿ ಕಾಸ್ಮಿ ತಿಳಿಸಿದ್ದಾರೆ.
ಸಂಜೌಲಿಯಲ್ಲಿ ಅನಧಿಕೃತವಾಗಿ ನಿರ್ಮಾಣವಾಗಿರುವ ಪ್ರಾರ್ಥನಾ ಮಂದಿರ ಧ್ವಂಸಕ್ಕೆ ಆಗ್ರಹಿಸಿ, ಸೆಪ್ಟೆಂಬರ್ 5 ರಿಂದ 11ರವರೆಗೆ ನಡೆಸಲಾದ ಪ್ರತಿಭಟನೆಯಲ್ಲಿ 50 ಜನರ ವಿರುದ್ಧ ಶಿಮ್ಲಾ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಇದನ್ನೂ ಓದಿ: ಶಿಮ್ಲಾದಲ್ಲಿ ಹಿಂದೂ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ; ಪೊಲೀಸರಿಂದ ಬಿಗಿ ಭದ್ರತೆ