ವ್ಯಕ್ತಿಯೊಬ್ಬನನ್ನು ಕೆಲ ಜನರು ಹಾಡಹಗಲೇ ನಡುಬೀದಿಯಲ್ಲಿ ಇರಿದು ಹತ್ಯೆ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಇದು ದೆಹಲಿಯ ಸೀಲಂಪುರ ಪ್ರದೇಶದಲ್ಲಿ ನಡೆದಿದೆ. ಮುಸ್ಲಿಮರ ಗುಂಪೊಂದು ಹಿಂದೂ ವ್ಯಕ್ತಿಯ ಮೇಲೆ ಭೀಕರ ಹಲ್ಲೆ ನಡೆಸುತ್ತಿರುವುದು ಎಂದು ವೈರಲ್ ವಿಡಿಯೋದಲ್ಲಿ ಹೇಳಲಾಗಿದೆ. ನಿಜಕ್ಕೂ ಇದು ಕೋಮು ಹತ್ಯೆಯೇ ಎಂಬುದನ್ನು ಈ ಲೇಖನದ ಮೂಲಕ ಫ್ಯಾಕ್ಟ್ಚೆಕ್ ಮಾಡೋಣ.
ವೈರಲ್ ವಿಡಿಯೋ ಸೂಚಿಸುವುದೇನು?: ದೆಹಲಿಯ ಸೀಲಂಪುರ ಪ್ರದೇಶದಲ್ಲಿ ಹಿಂದೂ ವ್ಯಕ್ತಿಯ ಮೇಲೆ ಮುಸ್ಲಿಮರ ಗುಂಪಿನಿಂದ ಮಾರಣಾಂತಿಕ ಹಲ್ಲೆ.
ಸತ್ಯವೇನು?: ವೈರಲ್ ಆಗಿರುವ ವಿಡಿಯೋ 2024ರ ಮೇ 5 ರಂದು ದೆಹಲಿಯ ಜಾಫ್ರಾಬಾದ್ ಪ್ರದೇಶದಲ್ಲಿ ನಡೆದ ಕೊಲೆಯ ದೃಶ್ಯಗಳದ್ದಾಗಿದೆ. ಸುದ್ದಿ ವರದಿಗಳು ಮತ್ತು ಪೊಲೀಸರ ಪ್ರಕಾರ, ಘಟನೆಯಲ್ಲಿ ಮೃತಪಟ್ಟ ವ್ಯಕ್ತಿಯ ಹೆಸರು ನಜೀರ್. ಆರೋಪಿಗಳು ಮತ್ತು ಮೃತ ವ್ಯಕ್ತಿ ಮುಸ್ಲಿಂ ಸಮುದಾಯಕ್ಕೆ ಸೇರಿದವರು. ಇಲ್ಲಿ ಯಾವುದೇ ಕೋಮು ದ್ವೇಷವಿಲ್ಲ ಎಂದು ದೆಹಲಿಯ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಖಚಿತಪಡಿಸಿದ್ದಾರೆ.
ಏಪ್ರಿಲ್ ತಿಂಗಳಲ್ಲಿ ಸೀಲಂಪುರದಲ್ಲಿ ಮತ್ತೊಂದು ಕೊಲೆ ಸಂಭವಿಸಿತ್ತು. ವರದಿಗಳ ಪ್ರಕಾರ, ಏಪ್ರಿಲ್ 12 ರಂದು ದೆಹಲಿಯ ಸೀಲಂಪುರದ ಖಾಬ್ರಿ ಮಾರುಕಟ್ಟೆಯ ಇ ಬ್ಲಾಕ್ನಲ್ಲಿ ಶಾನವಾಜ್ ಎಂಬ ವ್ಯಕ್ತಿಯನ್ನು ಹಗಲಿನಲ್ಲಿ ಅಪ್ರಾಪ್ತನೊಬ್ಬ ಗುಂಡಿಕ್ಕಿ ಕೊಂದಿದ್ದ. ಈ ಪ್ರಕರಣದಲ್ಲೂ ಯಾವುದೇ ಕೋಮುವಾದದ ಕೋನವಿಲ್ಲ. ಕೊಲೆ ಆರೋಪಿ ಮತ್ತು ಮೃತರು ಮುಸ್ಲಿಮರು ಎಂದು ಸೀಲಂಪುರದ ಎಸ್ಎಚ್ಒ ಖಚಿತಪಡಿಸಿದ್ದಾರೆ. ಆದ್ದರಿಂದ, ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್ ತಪ್ಪಾಗಿದೆ.
ವೈರಲ್ ವಿಡಿಯೋದ ಸತ್ಯಾಸತ್ಯತೆಯನ್ನು ಪರಿಶೀಲಿಸಲು, ವೈರಲ್ ಫೂಟೇಜ್ನಿಂದ ಕೀಫ್ರೇಮ್ಗಳನ್ನು ಬಳಸಿಕೊಂಡು ಗೂಗಲ್ ರಿವರ್ಸ್ ಇಮೇಜ್ ಹುಡುಕಾಟ ನಡೆಸಲಾಯಿತು. ಈ ವೇಳೆ 2024 ರ ಮೇ 07ರಂದು 'ನ್ಯೂಸ್ನೈನ್' ಸುದ್ದಿ ಪ್ರಕಟಿಸಿದೆ. ವರದಿಯ ಪ್ರಕಾರ, ಈ ಘಟನೆಯಲ್ಲಿ ಬಲಿಯಾದವರನ್ನು 35 ವರ್ಷದ ನಜೀರ್ ಎಂದು ಗುರುತಿಸಲಾಗಿದೆ. ಆತ ದೆಹಲಿಯ ಜಾಫ್ರಾಬಾದ್ನಲ್ಲಿ ನಡೆದ ದಾಳಿಯಲ್ಲಿ ಬರ್ಬರವಾಗಿ ಇರಿದು ಹತ್ಯೆಯಾಗಿದ್ದಾನೆ. ಮೇ 5 ರ ಸಂಜೆ ರ ವೇಳೆ ನಡೆದಿದೆ. ಕೊಲೆಯಾದ ನಜೀರ್ ಮೇಲೆ ಹಲವು ಕ್ರಿಮಿನಲ್ ಮೊಕದ್ದಮೆಗಳಿವೆ ಎಂದು ಪೊಲೀಸ್ ದಾಖಲೆಗಳು ಪ್ರಸ್ತುತಪಡಿಸುತ್ತದೆ. ಈ ಕೊಲೆ ವೈಯಕ್ತಿಕ ದ್ವೇಷದಿಂದ ಕೂಡಿದೆ ಎಂದು ವರದಿ ಹೇಳಿದೆ.
ವಿವಿಧ ವರದಿಗಳಲ್ಲಿ ಪ್ರಕಟ: ಈ ಸುಳಿವಿನಿಂದ ಇನ್ನಷ್ಟು ಜಾಲಾಡಿದಾಗ, ಘಟನೆಯ ಕುರಿತು ಪ್ರಕಟವಾದ ವರದಿಗಳು ದೊರಕಿವೆ. ವರದಿಗಳ ಪ್ರಕಾರ, ಘಟನೆಯಲ್ಲಿ ಸಾವನ್ನಪ್ಪಿದ ನಜೀರ್ ಈಶಾನ್ಯ ದೆಹಲಿಯ ಚೌಹಾನ್ ಬಂಗಾರ್ ನಿವಾಸಿ. ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಫ್ರಾಬಾದ್ ಪೊಲೀಸ್ ಠಾಣೆಯ ತಂಡವು ನಾಲ್ವರು ಬಾಲಾಪರಾಧಿಗಳನ್ನು ಬಂಧಿಸಿದೆ ಎಂದು ಉಪ ಪೊಲೀಸ್ ಆಯುಕ್ತ (ಈಶಾನ್ಯ) ಜಾಯ್ ಟಿರ್ಕಿ ಹೇಳಿದ್ದಾರೆ. ಮಾರಣಾಂತಿಕ ದಾಳಿಗೂ ಎರಡು ದಿನ ಮುನ್ನ ನಜೀರ್ ಬೇರೊಬ್ಬ ವ್ಯಕ್ತಿಗೆ ಬೆದರಿಕೆ ಹಾಕಿದ್ದ. ಇದರಿಂದ ಆತನನ್ನೇ ಕೊಲೆ ಮಾಡಿರುವುದಾಗಿ ದುಷ್ಕರ್ಮಿಗಳು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣದ ಕುರಿತು ಈಶಾನ್ಯ ದೆಹಲಿ ಪೊಲೀಸ್ ಅಧಿಕಾರಿ ಮಾಧ್ಯಮಗಳೊಂದಿಗೆ ಮಾತನಾಡಿರುವ ವಿಡಿಯೊವನ್ನು 'ANI' ಕೂಡ ಪ್ರಕಟಿಸಿದೆ.
ದೆಹಲಿ ಪೊಲೀಸ್ ವೆಬ್ಸೈಟ್ನಲ್ಲಿ ಪ್ರಕರಣದ ಕುರಿತು ದಾಖಲಿಸಲಾದ ಎಫ್ಐಆರ್ ಅನ್ನು ಕೂಡ ಪರಿಶೀಲಿಸಲಾಯಿತು. ಎಫ್ಐಆರ್ ಪ್ರಕಾರ, ಘಟನೆಯು ಸ್ಟ್ರೀಟ್ ನಂ. 6, ಚೌಹಾನ್ ಬಂಗಾರ್, ಜಾಫ್ರಾಬಾದ್, ಈಶಾನ್ಯ ದೆಹಲಿಯಲ್ಲಿ 05 ಮೇ 2024 ರಂದು ಸಂಜೆ 6:45 ರ ಸುಮಾರಿಗೆ ನಡೆದಿದೆ. ಮೃತರ ಹೆಸರು ನಜೀರ್ ಎಂದು ನಮೂದಿಸಲಾಗಿದೆ. ಆದರೆ, ಆರೋಪಿಗಳ ಹೆಸರು ಬಹಿರಂಗಪಡಿಸಿಲ್ಲ. ಈ ಕುರಿತು ಈಶಾನ್ಯ ದೆಹಲಿಯ ಡಿಸಿಪಿ ಜಾಯ್ ಟಿರ್ಕಿ ಅವರನ್ನು ಸಂಪರ್ಕಿಸಿದಾಗ ಅವರು, ಯಾವುದೇ ಕೋಮು ದ್ವೇಷವಿಲ್ಲ ಎಂದು ಅವರು ಖಚಿತಪಡಿಸಿದ್ದಾರೆ.
ಒಟ್ಟಾರೆ, 2024 ರ ಲೋಕಸಭಾ ಚುನಾವಣೆಯ ನಡುವೆ ದೆಹಲಿಯ ಜಾಫ್ರಾಬಾದ್ನಲ್ಲಿ ನಡೆದ ಕೊಲೆಯ ವೀಡಿಯೊವನ್ನು ಕೋಮುವಾದಿ ಬಣ್ಣ ಹಚ್ಚಿ ಸುಳ್ಳು ಮಾಹಿತಿಯನ್ನು ಹಂಚಿಕೊಳ್ಳಲಾಗುತ್ತಿದೆ.
Note: This story was first published in Boom as part of Shakti Collective and has been republished by ETV Bharat.
ಇದನ್ನೂ ಓದಿ: ಶಿವಸೇನಾ ಪ್ರಚಾರದಲ್ಲಿ ಪಾಕಿಸ್ತಾನದ ಧ್ವಜ ಬಳಸಲಾಗಿತ್ತಾ?: ಫ್ಯಾಕ್ಟ್ಚೆಕ್ನಲ್ಲಿ ಬಂದ ಫಲಿತಾಂಶವಿದು! - Pakistan Flag