ಪಾಟ್ನಾ( ಬಿಹಾರ): 2024ರ ಲೋಕಸಭೆ ಚುನಾವಣೆ ಅಂತಿಮ ಘಟ್ಟಕ್ಕೆ ತಲುಪಿದೆ. ಜೂನ್ 1ರಂದು ಕೊನೆಯ ಮತ್ತು ಏಳನೇ ಹಂತದ ಮತದಾನ ನಡೆಯಲಿದೆ. ಕಣದಲ್ಲಿರುವ ಅಭ್ಯರ್ಥಿಗಳು ಮತದಾರರನ್ನು ಸೆಳೆಯಲು ಕೊನೆಯ ಕಸರತ್ತು ನಡೆಸುತ್ತಿದ್ದಾರೆ. ಇದರ ನಡುವೆ ಬಿಹಾರದ ಕುಟುಂಬವೊಂದು ಭಾರಿ ಸುದ್ದಿಯಾಗುತ್ತಿದೆ. ಈ ಕುಟುಂಬದಲ್ಲಿ 165 ಸದಸ್ಯರಿದ್ದು, ಇವರನ್ನು ಮೆಚ್ಚಿಸಲು ರಾಜಕೀಯ ಮುಖಂಡರು, ಬೆಂಬಲಿಗರು ಮನೆಯ ಸುತ್ತಲೂ ಅಲೆಯುತ್ತಿದ್ದಾರೆ.
ಪಾಟ್ನಾ ನಗರದ ಚಾಂಡೇಲ್ ನಿವಾಸ್ ಎಂಬ ಮನೆಯಲ್ಲಿ ಒಟ್ಟು 165 ಜನರು ವಾಸಿಸುತ್ತಿದ್ದಾರೆ. ಈ ಪೈಕಿ 110 ಮತದಾರರಿದ್ದಾರೆ. ಈ ಬಾರಿ ನಾಲ್ವರು ಗಂಡು ಮತ್ತು ಆರು ಹೆಣ್ಣು ಮಕ್ಕಳನ್ನು ಒಳಗೊಂಡ ಕುಟುಂಬದ 10 ಮಂದಿ ಹೊಸ ಮತದಾನದ ಹಕ್ಕು ಪಡೆದಿದ್ದಾರೆ. ಇವರೆಲ್ಲರೂ ವಿದ್ಯಾವಂತರಾಗಿದ್ದು, ರಾಜಕೀಯ ಅರಿವುಳ್ಳ ನಾಗರಿಕರಾಗಿದ್ದಾರೆ. ಯಾವುದೇ ಚುನಾವಣೆಯಲ್ಲಿ ಮತ ಹಾಕುವ ಮುನ್ನ ಚರ್ಚೆ ಮಾಡುತ್ತಾರೆ.
ಇದರ ಆಧಾರದ ಮೇಲೆ ಶೇ.70ರಿಂದ 80ರಷ್ಟು ಜನ ಒಬ್ಬ ಅಭ್ಯರ್ಥಿಯ ಮೇಲೆ ಒಮ್ಮತಕ್ಕೆ ಬಂದು ಮತ ಹಾಕುತ್ತಾರೆ. ಮತ್ತೆ ಕೆಲವರು ಬೇರೆ ಅಭ್ಯರ್ಥಿಗೆ ಮತ ಹಾಕುವ ಮೂಲಕ ಸ್ವತಃ ನಿರ್ಧಾರವನ್ನೂ ತೆಗೆದುಕೊಳ್ಳುತ್ತಾರೆ. ಆದ್ದರಿಂದ ರಾಜಕೀಯ ನಾಯಕರು 'ಚಾಂಡೇಲ್' ಕುಟುಂಬವನ್ನು ತಮ್ಮ ವೋಟ್ ಬ್ಯಾಂಕ್ ಎಂದೇ ಪರಿಗಣಿಸುತ್ತಾರೆ. ಚುನಾವಣಾ ಸಮಯದಲ್ಲಿ ಅಭ್ಯರ್ಥಿಗಳ ಬೆಂಬಲಿಗರು ತಮ್ಮ ನಾಯಕನಿಗೆ ಮತ ಕೇಳಲು ಕುಟುಂಬದ ಸುತ್ತಲೂ ಗಿರಕಿ ಹೊಡೆಯುತ್ತಲೇ ಇರುತ್ತಾರೆ. ಈ ಕುಟುಂಬಸ್ಥರನ್ನು ಮೆಚ್ಚಿಸಲು ಪ್ರಯತ್ನಗಳು ಸಹ ನಡೆಯುತ್ತಲೇ ಇರುತ್ತವೆ.
ಸಹಮತ, ಭಿನ್ನಾಭಿಪ್ರಾಯಗಳು ಎರಡೂ ಉಂಟು: ''ಮತದಾನ ಮಾಡುವ ಮುನ್ನ ಕುಟುಂಬದವರ ಅಭಿಪ್ರಾಯ ತೆಗೆದುಕೊಳ್ಳುತ್ತೇವೆ. ಆದರೆ, ನನ್ನ ಮತ ಅಭಿವೃದ್ಧಿಗೆ ಎಂಬ ನಿರ್ಣಯ ಮುಖ್ಯವಾಗಿರುತ್ತದೆ. ಬೆಲೆ ಏರಿಕೆ, ನಿರುದ್ಯೋಗ ಸಮಸ್ಯೆಗಳಿವೆ. ರಸ್ತೆ ತುಂಬಾ ಹದಗೆಟ್ಟಿದೆ ಮತ್ತು ಮಹಿಳಾ ಸುರಕ್ಷತೆಯ ಸಮಸ್ಯೆಯೂ ಇದೆ'' ಎಂದು ಚಾಂಡೆಲ್ ಕುಟುಂಬದ ಸದಸ್ಯೆ ಕಲ್ಪನಾ ಸಿಂಗ್ ಹೇಳಿದರು.
ಮತ್ತೊಬ್ಬ ಮಹಿಳೆ ಸುಮನ್ ಸಿಂಗ್, ನಾನು ಕುಟುಂಬದ ನಂಬಿಕೆಗಳನ್ನು ಅನುಸರಿಸುತ್ತೇನೆ. ಆದ್ದರಿಂದ ಮನೆಯವರು ಹೇಳುವವರಿಗೆ ಮತ ಹಾಕುತ್ತೇನೆ ಎಂದು ತಿಳಿಸಿದರು. ಇದೇ ಪ್ರಥಮ ಬಾರಿಗೆ ಮತದಾನ ಮಾಡಲಿರುವ ಅನುಷ್ಕಾ ಕುಮಾರಿ, ನಮ್ಮ ಶಿಕ್ಷಣವೇ ಆದ್ಯತೆ ಆಗಿದೆ. ಶಿಕ್ಷಣ ಕ್ಷೇತ್ರವನ್ನು ಸುಧಾರಿಸಲು ಸರ್ಕಾರ ಶ್ರಮಿಸುತ್ತಿದೆ ಎಂದರು. ಮತ್ತೊಂದೆಡೆ, ಮತ್ತೊಬ್ಬ ಸದಸ್ಯ ಅಭಾ ಸಿಂಗ್ ಮಾತನಾಡಿ, ಪ್ರಸ್ತುತ ಸರ್ಕಾರವು ಮಹಿಳೆಯರ ಸುರಕ್ಷತೆಗಾಗಿ ಸಾಕಷ್ಟು ಕೆಲಸ ಮಾಡಿದೆ. ಶಾಲೆಗಳ ಸ್ಥಿತಿ ಮೊದಲಿಗಿಂತ ಉತ್ತಮವಾಗಿದೆ ಎಂದು ತಿಳಿಸಿದರು.
ಶಿಕ್ಷಕರಾದ ಶಿವೇಂದ್ರ ಸಿಂಗ್, ಈ ಪ್ರದೇಶದಲ್ಲಿ ಸ್ಥಳೀಯ ಸಾರ್ವಜನಿಕ ಪ್ರತಿನಿಧಿಗಳ ಕೊರತೆ ಇದೆ. ಹದಗೆಟ್ಟ ರಸ್ತೆಗಳು, ಒಡೆದ ಚರಂಡಿಗಳು ಮತ್ತು ಕಳಪೆ ನೈರ್ಮಲ್ಯ ಇದೆ. ಮತದಾನದ ವೇಳೆ ಇವುಗಳ ಬಗ್ಗೆ ಆಲೋಚನೆ ಮಾಡುತ್ತೇವೆ. ಪ್ರಸಕ್ತ ಲೋಕಸಭೆ ಚುನಾವಣೆ ವೇಳೆ ಒಮ್ಮತ ಮೂಡಿದರೂ, ಎಲ್ಲರೂ ತಮ್ಮ ನೆಚ್ಚಿನ ಅಭ್ಯರ್ಥಿಗೆ ಮತ ಹಾಕಲು ಸ್ವತಂತ್ರರು ಎಂದು ಸ್ಪಷ್ಟಪಡಿಸಿದರು.
ಮೇ 31ರಂದು ಮತದ ಬಗ್ಗೆ ನಿರ್ಧಾರ: ಇನ್ನೂ ಯಾವೊಬ್ಬ ಅಭ್ಯರ್ಥಿಯೂ ತಮ್ಮ ಮನೆಗೆ ಬಂದಿಲ್ಲ. ಅಭ್ಯರ್ಥಿಗಳ ಸ್ಥಳೀಯ ಬೆಂಬಲಿಗರು ಬರುತ್ತಿದ್ದಾರೆ. ಆದರೂ, ಮೇ 31ರಂದು ನಾವು ಮನೆಯಲ್ಲಿ ಸಭೆ ನಡೆಸಿ ಅಭ್ಯರ್ಥಿಯ ಬೆಂಬಲಿಸುವ ಬಗ್ಗೆ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಕುಟುಂಬದ ಹಿರಿಯ ಸದಸ್ಯ, 74 ವರ್ಷದ ಅರುಣ್ ಕುಮಾರ್ ಸಿಂಗ್ ಮಾಹಿತಿ ನೀಡಿದರು.
ಕುಟುಂಬದ ಹಿನ್ನೆಲೆ: ಅರುಣ್ ಕುಮಾರ್ ಸಿಂಗ್ ಅವರ ತಂದೆ ವೈಶಾಲಿ ಜಿಲ್ಲೆಯ ರಾಘೋಪುರದವರು. ಅರುಣ್ ತಂದೆಗೆ ಒಬ್ಬ ಸಹೋದರ ಇದ್ದಾನೆ. ಇಬ್ಬರೂ ಕೃಷಿಕರಾಗಿದ್ದರು. ಆದರೆ, ಗ್ರಾಮದಲ್ಲಿದ್ದ ಕೃಷಿ ಭೂಮಿಯನ್ನು ಮಾರಾಟ ಮಾಡಿ 1974ರಲ್ಲಿ ಸಹೋದರರಿಬ್ಬರೂ ಪಾಟ್ನಾಕ್ಕೆ ಬಂದಿದ್ದರು.
ನಂತರ ಇಬ್ಬರೂ ನಿವೇಶನ ಪಡೆದು ಮನೆ ಕಟ್ಟಿಕೊಂಡರು. ಅವರಿಬ್ಬರ ಮಕ್ಕಳು ಕೊಟ್ಟಿಗೆ ವಾಸಿಸುತ್ತಿದ್ದಾರೆ. ಈ ಕುಟುಂಬದ 165 ಜನರ ಪೈಕಿ 35 ಮಂದಿ ಮನೆಯಿಂದ ಹೊರಗಿದ್ದಾರೆ. ಕೆಲವರು ವಿದೇಶದಲ್ಲಿದ್ದಾರೆ. ಇತರರು ತಮ್ಮ ವೃತ್ತಿ ಮತ್ತು ಉದ್ಯೋಗದ ಕಾರಣದಿಂದ ಮುಂಬೈ, ದೆಹಲಿ ಮತ್ತು ನೋಯ್ಡಾದಂತಹ ನಗರಗಳಲ್ಲಿ ವಾಸಿಸುತ್ತಿದ್ದಾರೆ.
ಈ ಕುಟುಂಬದಲ್ಲಿ 24 ಎಂಜಿನಿಯರ್ಗಳು, ಇಬ್ಬರು ವೈದ್ಯರು ಮತ್ತು ನಾಲ್ವರು ವಕೀಲರು ಇದ್ದಾರೆ. 20ಕ್ಕೂ ಹೆಚ್ಚು ಮಂದಿ ಕಾರ್ಪೊರೇಟ್ ಉದ್ಯೋಗ ಮಾಡುತ್ತಿದ್ದಾರೆ. ಅನೇಕ ಮಹಿಳೆಯರು ಸಹ ಸ್ಥಳೀಯ ಉದ್ಯೋಗದಲ್ಲಿ ತೊಡಗಿಸಿಕೊಂಡಿದ್ದಾರೆ.
ಇದನ್ನೂ ಓದಿ: ಅಂದು ಅವಿಭಕ್ತ, ಇಂದು ವಿಭಕ್ತ: 2,500 ಜನರಿಗೆ ಒಂದೇ ಕುಟುಂಬ ಮೂಲ; 1,200 ಮಂದಿಗಿದೆ ಮತ ಹಕ್ಕು!