ಯಾದಗಿರಿ: ಸ್ನೇಹಿತರ ಎದುರು ಕಳ್ಳತನ ಆರೋಪ ಎದುರಿಸುತ್ತಿದ್ದ ವಿದ್ಯಾರ್ಥಿನಿಯೋರ್ವಳು ಮನೆ ಮುಂದೆ ಇರುವ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಶಹಾಪುರ ತಾಲೂಕಿನ ಅರಳಹಳ್ಳಿ ಗ್ರಾಮದ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡವಳು ಎನ್ನಲಾಗಿದೆ.
ಕಲಬುರಗಿ ನಗರದ ಎನ್.ವಿ ಶಾಲೆಯಲ್ಲಿ ಒಂಭತ್ತನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ, ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯದಲ್ಲಿ ವಾಸವಿದ್ದಳು. ಹಾಸ್ಟೆಲ್ ಅಡುಗೆ ಸಹಾಯಕಿಯೊಬ್ಬರ ಮೊಬೈಲ್ ಕಳ್ಳತನವಾಗಿತ್ತು. ಈ ವಿದ್ಯಾರ್ಥಿನಿಯೇ ಮೊಬೈಲ್ ಕದ್ದಿದ್ದಾಳೆ ಎಂದು ವಿದ್ಯಾರ್ಥಿಗಳ ಬಳಗದಲ್ಲಿ ಆರೋಪ ಕೇಳಿಬಂದಿತ್ತು. ನಾನು ಕಳ್ಳತನ ಮಾಡಿಲ್ಲ ಎಂದು ಆಕೆ ಹೇಳಿದ್ದಾಳೆ. ಆದ್ರೆ ಆಕೆಯ ಬ್ಯಾಗ್ನಲ್ಲಿ ಮೊಬೈಲ್ ಪತ್ತೆಯಾಗಿತ್ತು ಎನ್ನಲಾಗಿದೆ.
ಬಳಿಕ ಈ ವಿಷಯವನ್ನ ಆಕೆ ಮನೆಗೆ ಹಿಂತಿರುಗಿ ತಂದೆಗೆ ತಿಳಿಸಿದ್ದಾಳೆ. ತಂದೆ ವಸತಿ ನಿಲಯದ ಮೇಲ್ವಿಚಾರಕರ ಜೊತೆ ಮಾತನಾಡಿ, ನಾನು ಮಗಳ ಜೊತೆ ಬಂದು ಸಮಸ್ಯೆ ಬಗೆಹರಿಸುವೆ ಎಂದು ಹೇಳಿದ್ದಾರೆ. ಅಷ್ಟರಲ್ಲಿ ಮನೆ ಮುಂದಿರುವ ಬಾವಿಗೆ ಹಾರಿ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇನ್ನು ಈ ಸಂಬಂಧ ಗೋಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.