ಯಾದಗಿರಿ: ಕಲಬುರಗಿ ವಿಮಾನ ನಿಲ್ದಾಣಕ್ಕೆ ಸೇವಾಲಾಲ್ ಸಂತರ ಹೆಸರಿಡುವಂತೆ ಆಗ್ರಹಿಸಿ ಅಖಿಲ ಭಾರತೀಯ ಬಂಜಾರ ಸೇವಾ ಸಂಘ ತಾಲೂಕು ಘಟಕದ ವತಿಯಿಂದ ಗುರಮಿಠಕಲ್ ಪಟ್ಟಣದಲ್ಲಿಂದು ಪ್ರತಿಭಟನೆ ನಡೆಸಲಾಯಿತು.
ಪಟ್ಟಣದ ಕಾಕಲವಾರ ಕ್ರಾಸ್ನಿಂದ ಬಸ್ ನಿಲ್ದಾಣದ ಮಾರ್ಗವಾಗಿ ಪ್ರತಿಭಟನಾ ಮೆರವಣಿಗೆಯ ಮೂಲಕ ಬಸವೇಶ್ವರ ವೃತ್ತದಲ್ಲಿ ಜಮಾವಣೆಗೊಂಡ ಸಮುದಾಯದ ಸದಸ್ಯರು, ತಹಸಿಲ್ದಾರ್ ಶ್ರೀಧರಾಚರ್ಯಗೆ ಮನವಿ ಸಲ್ಲಿಸಿದರು. ಕಲಬುರಗಿ ವಿಮಾನ ನಿಲ್ದಾಣಕ್ಕೆ ಜಮೀನು ನೀಡಿದವರು ಬಂಜಾರ ಸಮುದಾಯದ ರೈತರು. ನ. 21ರಂದು ಕಾಮಗಾರಿ ವೇಳೆ ಸಂತ ಸೇವಾಲಾಲರ ಮಂದಿರವನ್ನು ಧ್ವಂಸಗೊಳಿಸಿದ್ದು ಬಂಜಾರ ಸಮುದಾಯಕ್ಕೆ ನೋವುಂಟುಮಾಡಿದೆ ಎಂದರು.
ಕಲಬುರಗಿ ದೇವಸ್ಥಾನವನ್ನು ಅದೇ ಸ್ಥಳದಲ್ಲಿ ಮರು ನಿರ್ಮಾಣ ಮಾಡುವುದು, ದ್ವಂಸ ಮಾಡಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಮೂಲಕ ನಮ್ಮ ಸಮುದಾಯಕ್ಕೆ ನ್ಯಾಯ ನೀಡಿ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.