ಯಾದಗಿರಿ: ಸಂಕಷ್ಟದಿಂದ ಪಾರು ಮಾಡಿದ ಗಡೇ ದುರ್ಗಾದೇವಿ ದರ್ಶನ ಪಡೆಯಲು ಜಿಲ್ಲೆಯ ವಡಗೇರಾ ತಾಲೂಕಿನ ಗೋನಾಳ ಗ್ರಾಮಕ್ಕೆ ಇಂದು ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಆಗಮಿಸಿದ್ದರು. ದೇವಿಗೆ ಪತ್ರ ಬರೆದು ವಿಶೇಷ ಪೂಜೆ ಸಲ್ಲಿಸಿದರು. ದೇವಿಯ ಜಾತ್ರೆ ಅಂಗವಾಗಿ ನಡೆದ ರಥೋತ್ಸವದಲ್ಲಿ ಅವರು ಪಾಲ್ಗೊಂಡಿದ್ದರು.
ಕಲಬುರಗಿ ಜಿಲ್ಲೆಯಿಂದ ರಸ್ತೆ ಮಾರ್ಗದ ಮೂಲಕ ಗೋನಾಳ ಗ್ರಾಮಕ್ಕೆ ಆಗಮಿಸಿದ್ದ ಡಿಕೆಶಿ ಅವರನ್ನು ಮೆರವಣಿಗೆ ಮೂಲಕ ಅದ್ಧೂರಿಯಾಗಿ ಸ್ವಾಗತಿಸಲಾಯಿತು. ನಂತರ ಗಡೇ ದುರ್ಗಾ ದೇವಿ ಮಂದಿರದ ಗರ್ಭಗುಡಿಯೊಳಗೆ ತೆರಳಿ, ದೇವಿಯ ಅರ್ಚಕ ಮಹಾದೇವಪ್ಪ ಪೂಜಾರಿ ನೇತೃತ್ವದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ದೇವಿಯ ಸನ್ನಿಧಿಯಲ್ಲಿ ಬರೆದಿಟ್ಟ ಪತ್ರವನ್ನು ಡಿಕೆಶಿ ಇಟ್ಟು ಸಂಕಷ್ಟದಿಂದ ಪಾರು ಮಾಡಬೇಕೆಂದು ಪೂಜೆ ಸಲ್ಲಿಸಿದರು. ಕೆಪಿಸಿಸಿ ಅಧ್ಯಕ್ಷ ಸ್ಥಾನ ಹಾಗೂ ರಾಜಕೀಯದಲ್ಲಿ ಒಳ್ಳೆಯದಾಗಬೇಕೆಂದು ಅರ್ಧ ಗಂಟೆ ವಿಶೇಷ ಪೂಜೆ ನೆರವೇರಿಸಿದರು.
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಳೆದ ವರ್ಷ ನಾನು ಜಾತ್ರೆಗೆ ಬರುತ್ತೇನೆಂದು ಹೇಳಿ ಅರ್ಚಕರಿಗೆ ಮಾತುಕೊಟ್ಟಿದ್ದೆ. ಅನೇಕ ರಾಜಕೀಯ ಒತ್ತಡದಿಂದ ಬರಲು ಆಗಿರಲಿಲ್ಲ. ಒಂದು ವರ್ಷದ ನಂತರ ಇವತ್ತು ಗಡೇ ದುರ್ಗಾದೇವಿ ಜಾತ್ರೆಗೆ ಬಂದಿದ್ದೇನೆ. ದೇವಿಯ ದರ್ಶನ ಮಾಡಿದ್ದೇನೆ. ರಾಜ್ಯಕ್ಕೆ ಸಮೃದ್ಧಿ ಕೊಡುವಂತೆ ದೇವಿಯಲ್ಲಿ ಕೇಳಿಕೊಂಡಿದ್ದೇನೆ ಎಂದರು.
ದೇವಸ್ಥಾನದ ಅರ್ಚಕರು ಡಿಕೆಶಿ ಸಿಎಂ ಆಗ್ತಾರೆ ಎನ್ನುವ ಭವಿಷ್ಯದ ವಿಚಾರವಾಗಿ ಪ್ರತಿಕ್ರಿಯಿಸಿ, ಅದು ನನಗೆ ಗೊತ್ತಿಲ್ಲ. ನಾನು ಭವಿಷ್ಯಕಾರನಲ್ಲ. ದೇವರಲ್ಲಿ ಶಾಂತಿ, ನೆಮ್ಮದಿ ಕೊಡುವಂತೆ ಕೇಳಿಕೊಂಡಿದ್ದೇನೆ ಎಂದು ತಿಳಿಸಿದ್ರು.