ಯಾದಗಿರಿ: ನಿಮಗೆ ಲಕ್ಕಿ ಡಿಪ್ ಸ್ಕೀಮ್ನಲ್ಲಿ ಕಾರು, ಬೈಕ್ ಸಿಗುತ್ತದೆ ಎಂದು ಹಳ್ಳಿಗರನ್ನು ನಂಬಿಸಿದ ಖದೀಮರ ತಂಡವೊಂದು ಅವರಿಂದ ಹಣ ಪಡೆದು ಎಸ್ಕೇಪ್ ಆಗಿದೆ.
ಕಳೆದ ಜನವರಿ ತಿಂಗಳಲ್ಲಿ ಕೆಎಸ್ಎಸ್ ಎಂಟರ್ಪ್ರೈಸಸ್ ಹೆಸರಿನಲ್ಲಿ ಯಾದಗಿರಿಯ ಲಕ್ಷ್ಮಿ ನಗರದಲ್ಲಿ ಖದೀಮರು ಕಂಪನಿ ಆರಂಭಿಸಿದ್ದರು. ಬಳಿಕ ಲಕ್ಕಿಡಿಪ್ ಸ್ಕೀಮ್ ಮಾಡಿ ಕಾರು, ಬೈಕ್, ಚಿನ್ನಾಭರಣ ಸೇರಿದಂತೆ ಗೃಹ ಬಳಕೆ ವಸ್ತುಗಳನ್ನು ಬಂಪರ್ ಲಕ್ಕಿ ಸ್ಕೀಮ್ನಲ್ಲಿ ಲಾಟರಿ ಮೂಲಕ ನೀಡುತ್ತೇವೆ ಎಂದು ಸ್ಥಳೀಯರನ್ನು ನಂಬಿಸಿ ಅವರಿಂದ ಹಣ ಪಡೆದುಕೊಂಡಿದ್ದರು.
ಈ ಪ್ರಕರಣದ ಸಂಬಂಧ ಮಾತನಾಡಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭಗವಾನ್, ಯಾದಗಿರಿ ನಗರ ಸೇರಿದಂತೆ ಯರಗೋಳ, ಬಂದಳ್ಳಿ, ಹತ್ತಿಕುಣಿ ಸೇರಿ ಸುತ್ತಮುತ್ತಲಿನ ಹಳ್ಳಿಗಳಲ್ಲಿನ 2,000ಕ್ಕೂ ಅಧಿಕ ಮಂದಿಯಿಂದ 8 ಕಂತುಗಳಲ್ಲಿ ಪ್ರತಿ ಕಂತಿಗೆ 399 ರೂ. ವಸೂಲಿ ಮಾಡಿ, ಪ್ರತಿಯೊಬ್ಬರಿಂದಲೂ 3,000 ರೂ.ಗಳಂತೆ ಸುಮಾರು 60 ಲಕ್ಷಕ್ಕೂ ಅಧಿಕ ಹಣ ಪಡೆದು ಜಾಗ ಖಾಲಿ ಮಾಡಿದ್ದಾರೆ ಎಂದು ಸಂತ್ರಸ್ತರು ಆರೋಪಿಸಿ ದೂರು ನೀಡಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ಇಂದ್ರಜಿತ್ ಲಂಕೇಶ್ ಭೇಟಿ ವಿಚಾರ.. ಅದು ಹಳೆ ಫೋಟೋ, ನನ್ನನ್ಯಾಕೆ ತಳಕು ಹಾಕೊಂಡಿದ್ದೀರಾ ಎಂದ ಹೆಚ್ಡಿಕೆ