ಗುರುಮಠಕಲ್ : ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಗ್ರಾಮೀಣ ಅಭಿವೃದ್ಧಿಗೆ ಅನೇಕ ಯೊಜನೆಗಳು ಜಾರಿ ಮಾಡಿ ಕೋಟಿಗಟ್ಟಲೆ ಹಣ ಬಿಡುಗಡೆ ಮಾಡಿದರೂ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಇನ್ನೂ ಅನೇಕ ಗ್ರಾಮಗಳು ಕೊಳಚೆ ತಾಣಗಳಾಗಿಯೇ ಉಳಿದಿವೆ.
ಅದಕ್ಕೆ ಉದಾಹರಣೆ ಎನ್ನುವುದಕ್ಕೆ ಯಾದಗಿರಿ ಜಿಲ್ಲೆ ಗುರುಮಠಕಲ್ ತಾಲೂಕಿನ ಕಾಕಲವಾರ ಗ್ರಾಮವೇ ಸಾಕ್ಷಿ. ಸ್ವಚ್ಛ ಪರಿಸರ, ಸಮರ್ಪಕ ರಸ್ತೆ, ಗಟಾರು ವ್ಯವಸ್ಥೆ ಇಲ್ಲದೇ ಗ್ರಾಮಸ್ಥರು ನಿತ್ಯ ನರಕ ಅನುಭವಿಸುತ್ತಿದ್ದಾರೆ. ಸರಿಯಾದ ಕಾಲುವೆ ವ್ಯವಸ್ಥೆ ಇರದೇ ಮಳೆ ನೀರು ರಸ್ತೆ ಮೇಲೆ ಹರಿಯುತ್ತಿದೆ. ಈ ಗ್ರಾಮದಲ್ಲಿ ಸಮರ್ಪಕ ರಸ್ತೆಗಳಿಲ್ಲ, ಚರಂಡಿ ಹಾಗೂ ಶೌಚಾಲಯಗಳು ಕಾಣದೆ ಸುಮಾರು ವರ್ಷಗಳೇ ಕಳೆದಿದೆ.
ಸರ್ಕಾರಗಳು ಸ್ವಚ್ಛ ಭಾರತ್ ಅಂತ ಅನೇಕ ಯೋಜನೆಗಳನ್ನು ರೂಪಿಸಿದರೂ ಕೆಲವು ಪಂಚಾಯಿತಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಮಹತ್ವದ ಯೋಜನೆಗಳು ಹಳ್ಳ ಹಿಡಿದಿವೆ. ಸರಿಯಾದ ಚರಂಡಿಗಳು ಇಲ್ಲದ ಕಾರಣದಿಂದ, ಮಳೆಗಾಲ ಬಂತು ಅಂದ್ರೆ ಸಾಕು, ಕೊಳಚೆ ನೀರು ಮನೆಗಳ ಪಕ್ಕದಲ್ಲಿ ಶೇಖರಣೆಯಾಗಿ, ಸೊಳ್ಳೆಗಳ ಕಾಟಕ್ಕೆ ಜನರು, ನರಕ ಯಾತನೆ ಅನುಭವಿಸುತ್ತಾ, ಸಾಂಕ್ರಾಮಿಕ ರೋಗಗಳ ಭಯದಲ್ಲಿ ಕಾಲ ಕಳೆಯುತ್ತಿದ್ದಾರೆ. ಅನೇಕ ಬಾರಿ ಅಧಿಕಾರಿಗಳಿಗೆ ಸರಿಯಾಗಿ ಚರಂಡಿಗಳ ವ್ಯವಸ್ಥೆ ಮಾಡಬೇಕು ಎಂದು ಮನವಿ ಮಾಡಿದರೂ ಅವರು ನಮ್ಮ ಮನವಿಗೆ ಸ್ಪಂದಿಸುತ್ತಿಲ್ಲ, ಎಂದು ಗ್ರಾಮಸ್ಥರು ಪಂಚಾಯಿತಿ ಅಧಿಕಾರಿಗಳ ವಿರುದ್ಧ ಆರೋಪಿಸಿದರು.