ವಿಜಯಪುರ: ಮಹಾರಾಷ್ಟ್ರದಿಂದ ಭೀಮಾ ನದಿ ಮೂಲಕ ಕರ್ನಾಟಕಕ್ಕೆ ಅಕ್ರಮವಾಗಿ ವಲಸಿಗರು ಬರುತ್ತಿರುವುದಕ್ಕೆ ಸಂಬಂಧಿಸಿದಂತೆ ಎಸ್ಪಿ ಅನುಪಮ್ ಅಗರವಾಲ ಪ್ರತಿಕ್ರಿಯೆ ನೀಡಿದ್ದು, ಇನ್ನು ಮುಂದೆ ಯಾರಾದರೂ ಅಕ್ರಮವಾಗಿ ನದಿ ಮೂಲಕ ಬಂದರೆ ಅಂಥವರ ವಿರುದ್ಧ ಪ್ರಕರಣ ದಾಖಲಿಸುತ್ತೇವೆ ಎಂದು ಎಚ್ಚರಿಸಿದ್ದಾರೆ.
ಬತ್ತಿದ ಭೀಮಾನದಿ ಮೂಲಕ ಮಹಾರಾಷ್ಟ್ರದಿಂದ ವಲಸೆ ಕಾರ್ಮಿಕರು ಕರ್ನಾಟಕಕ್ಕೆ ಆಗಮಿಸುತ್ತಿದ್ದಾರೆ ಎಂದು ವಿಡಿಯೋ ಸಮೇತ 'ಈಟಿವಿ ಭಾರತ' ವರದಿ ಪ್ರಸಾರ ಮಾಡಿತ್ತು. ತಕ್ಷಣ ವರದಿಗೆ ಸ್ಪಂದಿಸಿದ ಎಸ್ಪಿ ಅನುಪಮ ಅಗರವಾಲ ಸುತ್ತಮುತ್ತಲ ಗ್ರಾಮಸ್ಥರ ಜತೆ ಮಾತನಾಡಿ, ಸಮಿತಿ ರಚಿಸಿ ಅಕ್ರಮವಾಗಿ ವಿಜಯಪುರ ಜಿಲ್ಲೆಗೆ ಬರುವ ವಲಸಿಗರ ಬಗ್ಗೆ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಲು ಮನವಿ ಮಾಡಿದ್ದರು.
ಭೀಮಾ ನದಿಯಲ್ಲಿ ನೀರು ಕಡಿಮೆಯಾಗಿದೆ. ಈ ಹಿನ್ನೆಲೆ ನದಿಯ ಮೂಲಕ ಅಕ್ರಮವಾಗಿ ಕೆಲವು ಜನ ಒಳಗೆ ನುಸುಳುತ್ತಿದ್ದಾರೆ ಎಂದು ಎಸ್ಪಿ ಅಗರವಾಲ ತಿಳಿಸಿದ್ದಾರೆ. ಇದರಿಂದ ಅವರಿಗೆ ಯಾವುದೇ ಉಪಯೋಗವಾಗುವುದಿಲ್ಲ. ಯಾರಾದರೂ ಹೊರಗಿನಿಂದ ಬಂದರೆ ಗ್ರಾಮಸ್ಥರು ಜಿಲ್ಲಾಡಳಿತಕ್ಕೆ ಮಾಹಿತಿ ನೀಡುತ್ತಾರೆ. ಹೊರಗಿನಿಂದ ಬರುವವರನ್ನು ಸಾಂಸ್ಥಿಕ ಕ್ವಾರಂಟೈನ್ಗೆ ಒಳಪಡಿಸಲಾಗುವುದು. ಧೂಳಖೇಡ ಚೆಕ್ಪೋಸ್ಟ್ ಮೂಲಕ ಅಧಿಕೃತವಾಗಿ ಬರಬೇಕೆಂದು ಮನವಿ ಮಾಡಿದರು.