ವಿಜಯಪುರ: ಜಿಲ್ಲೆಯಲ್ಲಿ ಅನಧಿಕೃತ ರಿವಾಲ್ವರ್, ಗುಂಡುಗಳ ಹಾವಳಿ ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಕಂಟ್ರಿ ಪಿಸ್ತೂಲ್ಗಳ ಮಾರಾಟ ಹಾಗೂ ಅವುಗಳಿಂದ ನಡೆದ ರಕ್ತಸಿಕ್ತ ಅಧ್ಯಯನಕ್ಕೆ ನಾಂದಿ ಹಾಡಿದ್ದ ಭೀಮಾತೀರ ಸದ್ಯ ಶಾಂತವಾಗಿದೆ. ಆದ್ರೆ ಕಂಟ್ರಿ ಪಿಸ್ತೂಲ್ ಮಾರಾಟ ದಂಧೆ ಈಗ ವಿಜಯಪುರ ಗ್ರಾಮೀಣ ಭಾಗವಾದ ಕುಮಟಗಿ ತಾಂಡಾಕ್ಕೆ ಹಬ್ಬಿದೆ.
ಅಕ್ರಮವಾಗಿ ಕಂಟ್ರಿ ಪಿಸ್ತೂಲ್ ಹಾಗೂ ಗುಂಡು ಮಾರಾಟ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಈಗ ಗ್ರಾಮೀಣ ಪೊಲೀಸರು ಬಂಧಿಸಿ ಜೈಲಿಗೆ ಅಟ್ಟಿರುವದು ಇದಕ್ಕೆ ಸಾಕ್ಷಿಯಾಗಿದೆ. ಇವರು ಮಧ್ಯಪ್ರದೇಶ, ಉತ್ತರ ಪ್ರದೇಶ ಹಾಗೂ ದೇಶದ ಗಡಿಭಾಗಗಳಿಂದ ಕಂಟ್ರಿ ಪಿಸ್ತೂಲ್ ಹಾಗೂ ಗುಂಡುಗಳನ್ನು ತಂದು ವಿಜಯಪುರ ಜಿಲ್ಲೆಯಲ್ಲಿ ಅಕ್ರಮವಾಗಿ ಮಾರಾಟ ಮಾಡುತ್ತಿರುವುದು ತನಿಖೆ ವೇಳೆ ಬಯಲಾಗಿದೆ.
ಸದ್ಯ ಪೊಲೀಸ್ ಬಂಧನದಲ್ಲಿರುವ ನರಸಿಂಗ್ ಪವಾರ, ಸತೀಶ ರಾಠೋಡ, ರಾಜು ರಾಠೋಡ ಹಾಗೂ ಪ್ರಕಾಶ ರಾಠೋಡ ಈ ನಾಲ್ವರು ಜಿಲ್ಲೆಯ ಕನ್ನೂರ, ಅರಕೇರಿ, ಕುಮಟಗಿ ತಾಂಡಾದವರು ಎನ್ನುವುದು ಆಘಾತ ತಂದಿದೆ. ಈ ಆರೋಪಿಗಳಿಗೆ ಬೇರೆ ರಾಜ್ಯಗಳ ಅಪರಾಧಿಗಳ ಸಂಪರ್ಕ ದೊರೆತು, ಅವರ ಮೂಲಕ ಇವರು ಅನಧಿಕೃತವಾಗಿ ಕಂಟ್ರಿ ಪಿಸ್ತೂಲ್, ಗುಂಡು ತಂದು ಮಾರಾಟಕ್ಕೆ ಯತ್ನಿಸುತ್ತಿರುವ ಕುರಿತು ತನಿಖೆ ವೇಳೆ ಮಾಹಿತಿ ದೊರೆತಿದೆ.
ಆದರೆ ಆರೋಪಿಗಳು ಮಾತ್ರ ಈ ಪಿಸ್ತೂಲ್ಗಳನ್ನು ಸ್ವಂತ ಬಳಕೆಗೆ ತಂದಿರುವುದಾಗಿ ಪೊಲೀಸರ ಎದುರು ಹೇಳಿಕೊಂಡಿದ್ದಾರೆ. ಬಂಧಿತ ಆರೋಪಿಗಳಿಂದ 50 ಸಾವಿರ ಮೌಲ್ಯದ ಒಂದು ಕಂಟ್ರಿ ಪಿಸ್ತೂಲ್ ಹಾಗೂ 500 ರೂ. ಮೌಲ್ಯದ ಒಂದು ಜೀವಂತ ಗುಂಡು ವಶಪಡಿಸಿಕೊಂಡಿದ್ದು, ಇದರ ಜತೆ 3.5 ಲಕ್ಷ ರೂ. ಮೌಲ್ಯದ ಎರಡು ಕಾರುಗಳನ್ನು ವಶಪಡಿಸಿಕೊಂಡಿದ್ದಾರೆ. ಸದ್ಯ ಈ ಅನಧಿಕೃತ ಕಂಟ್ರಿ ಪಿಸ್ತೂಲ್ ಜಾಲ ಭೇದಿಸಲು ತಂಡ ರಚನೆ ಮಾಡಿದ್ದು, ತನಿಖೆ ಮುಂದುವರೆದಿದೆ.
ಬೈಕ್ ಕಳ್ಳರ ಬಂಧನ: ಇದೇ ವೇಳೆ ಜಿಲ್ಲೆಯಲ್ಲಿ ಹೆಚ್ಚಾಗಿ ನಡೆಯುತ್ತಿದ್ದ ಬೈಕ್ ಕಳ್ಳತನ ಪ್ರಕರಣವನ್ನು ಸಹ ಗೋಲಗುಮ್ಮಟ ಪೊಲೀಸರು ಭೇದಿಸಿದ್ದಾರೆ. ಈ ಸಂಬಂಧ ಇಬ್ಬರನ್ನು ಬಂಧಿಸಲಾಗಿದೆ. ಓರ್ವ ಅಪ್ರಾಪ್ತ ಹಾಗೂ ಓರ್ವ ಅವಿನಾಶ ರಜಪೂತ ಇದ್ದಾರೆ. ಇವರಿಂದ 4.5 ಲಕ್ಷ ರೂ. ಮೌಲ್ಯದ 6 ಬೈಕ್ಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳು ಶೋಕಿಗಾಗಿ ಬೈಕ್ ಕಳ್ಳತನ ಮಾಡುತ್ತಿರುವುದು, ಹೆಚ್ಚಾಗಿ ಇಂಥ ಪ್ರಕರಣಗಳಲ್ಲಿ ಕಾಲೇಜು ಅರ್ಧದಲ್ಲೇ ಬಿಟ್ಟ ಅಪ್ರಾಪ್ತರು ತೊಡಗಿಸಿಕೊಂಡಿರುವುದು ತನಿಖೆಯಿಂದ ದೃಢಪಟ್ಟಿದೆ.
ಇದನ್ನೂ ಓದಿ: ಟೆಕ್ಸ್ ಟೈಲ್ಸ್ ಕಂಪನಿ ಕಳ್ಳತನ ಪ್ರಕರಣ ಭೇದಿಸಿದ ವಿಜಯಪುರ ಪೊಲೀಸರು: 7 ಮಂದಿ ಆರೋಪಿಗಳ ಬಂಧನ