ವಿಜಯಪುರ: ಕೊರೊನಾ ಭೀತಿ ಜಿಲ್ಲೆಯಲ್ಲಿ ವ್ಯಾಪಕವಾಗಿ ಹರಡಿದೆ. ಕೊರೊನಾ ಹರಡದಂತೆ ಸೋಂಕಿತರನ್ನ ಪ್ರತ್ಯೇಕವಾಗಿಟ್ಟು ಚಿಕಿತ್ಸೆ ನೀಡುವ ಕೋವಿಡ್ ಸೆಂಟರ್ ಗಳು ಅಧಿಕಾರಿಗಳ ನಿರ್ಲಕ್ಷ್ಯದಿಂದ ಅವ್ಯವಸ್ಥೆಯ ಆಗರವಾಗಿವೆ.
ಮೂಲ ಸೌಕರ್ಯವಿಲ್ಲದೇ ರೋಗಿಗಳು ಇಲ್ಲಿ ಗುಣಮುಖವಾಗದೇ ಹೊಸ ರೋಗಗಳನ್ನು ಅಂಟಿಸಿಕೊಂಡು ನರಕಯಾತನೆ ಅನುಭವಿಸುವ ವಾತಾವರಣ ನಿರ್ಮಾಣವಾಗಿದೆ. ಈ ಕೇಂದ್ರದಲ್ಲಿನ ಅವ್ಯವಸ್ಥೆಯನ್ನು ಸೋಂಕಿತ ರೋಗಿಯೊಬ್ಬ ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದಾನೆ.
ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಜಮ್ಮಲದಿನ್ನಿ ಗ್ರಾಮದ ಹೊರ ವಲಯದಲ್ಲಿ ಸ್ಥಾಪಿಸಿರುವ ಕೋವಿಡ್ ಕೇಂದ್ರದಲ್ಲಿ ಸೌಲಭ್ಯ ಎನ್ನುವದು ಮರೀಚಿಕೆಯಾಗಿದೆ. ತಾಲೂಕಿನ ಕೊರೊನಾ ಸೋಂಕಿತ ರೋಗಿಗಳನ್ನು ಇಲ್ಲಿ ಕ್ವಾರಂಟೈನ್ ಮಾಡಲಾಗಿದೆ. ಸಮಾಜ ಕಲ್ಯಾಣ ಇಲಾಖೆಯ ಅಡಿಯಲ್ಲಿ ನಿರ್ಮಿಸಿರುವ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಈಗ ಕೋವಿಡ್ ಕೇಂದ್ರವಾಗಿದೆ. ಹೊಸ ಕಟ್ಟಡ, ಹೊಸ ಮಂಚ, ಬೆಡ್ ಗಳ ಸೌಲಭ್ಯವಿದ್ದರೂ ರೋಗಿಗಳು ಮಾತ್ರ ಇಲ್ಲಿನ ವಾತಾವರಣ ನೋಡಿ ದಂಗಾಗಿದ್ದಾರೆ.
ಎಲ್ಲೆಂದರಲ್ಲಿ ಕಸದ ರಾಶಿ, ಗಬ್ಬು ನಾರುತ್ತಿರುವ ಶೌಚಾಲಯಗಳು, ಸರಿಯಾದ ನೀರಿನ ವ್ಯವಸ್ಥೆ ಇಲ್ಲದೇ ಹಲವು ದಿನಗಳಿಂದ ಕೋವಿಡ್ ರೋಗಿಗಳು ಸ್ನಾನವೇ ಮಾಡಿಲ್ಲ. ಮಳೆಗಾಲವಿದ್ದರೂ ಬಿಸಿನೀರಿನ ವ್ಯವಸ್ಥೆ ಇಲ್ಲ. ರೋಗಿಗಳು ಕೋವಿಡ್ ಸೆಂಟರ್ ನಲ್ಲಿ ದಾಖಲಾಗುತ್ತಲೇ ಇಲ್ಲಿಯ ಅವ್ಯವಸ್ಥೆ ಕಂಡು ಸೆಂಟರ್ನಿಂದ ಹೇಗೆ ಓಡಿ ಹೋಗಬೇಕು ಎನ್ನುವ ಆಲೋಚನೆ ಆರಂಭಿಸಿ ಬಿಡುತ್ತಾರೆ. ಹೆಸರಿಗಷ್ಟೇ ಶೌಚಾಲಯಗಳಿವೆ, ಆದರೆ ನೀರಿನ ವ್ಯವಸ್ಥೆ ಇಲ್ಲ ಮತ್ತು ಶೌಚಾಲಯಕ್ಕೆ ಬಾಗಿಲುಗಳು ಸಹ ಸರಿಯಾಗಿಲ್ಲ.
ಮಹಿಳಾ ರೋಗಿಗಳು, ಪುರುಷ ರೋಗಿಗಳಿಗೆ ಪ್ರತ್ಯೇಕವಾದ ಶೌಚಾಲಯ ವ್ಯವಸ್ಥೆ ಇಲ್ಲ. ಸ್ನಾನ, ಇತರೆ ಬಳಕೆಗೆ ನೀರು ಬೇಕಾದರೆ ರೋಗಿಗಳು ಖುದ್ದು ಕೋವಿಡ್ ಸೆಂಟರ್ ಮೇಲೆ ಮಹಡಿಯಲ್ಲಿರುವ ನೀರಿನ ಟ್ಯಾಂಕ್ ಮೂಲಕ ನೀರು ತುಂಬಿಕೊಳ್ಳಬೇಕಿದೆ. ವಯೋವೃದ್ಧ ರೋಗಿಗಳಿಗೆ ಸಹಾಯ ಮಾಡಲು ಯಾವ ಸಿಬ್ಬಂದಿ ಸಹ ಇಲ್ಲ, ಇಲ್ಲಿನ ರೋಗಿಗಳೇ ಅವರಿಗೆ ನೆರವಾಗುತ್ತಿದ್ದಾರೆ.
ಇಲ್ಲಿ ಊಟ, ಮಾತ್ರೆ ಸರಿಯಾಗಿ ಸಮಯಕ್ಕೆ ವೈದ್ಯ ಸಿಬ್ಬಂದಿ ನೀಡುತ್ತಾರೆ ಎನ್ನುವುದೇ ಸಮಾಧಾನಕರ ಸಂಗತಿಯಾಗಿದೆ. ದೊಡ್ಡ ವಸತಿ ನಿಲಯವಾಗಿರುವ ಕಾರಣ ಮಲಗಲು ಸಾಕಷ್ಟು ವ್ಯವಸ್ಥೆ ಇದೆ. ಆದರೆ ಕೇವಲ 26 ರೋಗಿಗಳು ಮಾತ್ರ ಸದ್ಯ ಇಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರನ್ನು ಸರಿಯಾಗಿ ನೋಡಿಕೊಳ್ಳಲು ಯಾವ ಸಿಬ್ಬಂದಿಯೂ ಇಲ್ಲವಾಗಿದೆ. ನಿತ್ಯ ರೋಗಿಗಳು ತಮ್ಮ ಪಾಡಿಗೆ ತಾವು ಇರಬೇಕಾಗಿದೆ. ರೋಗ ಬೇಗ ಗುಣಮುಖವಾಗಲು ಔಷಧಿ ಬಿಟ್ಟು ಆತ್ಮಸ್ಥೈರ್ಯ ತುಂಬುವ ಯಾವುದೇ ಚಟುವಟಿಕೆ ಗಳು ಮಾತ್ರ ಇಲ್ಲಿ ನಡೆಯುತ್ತಿಲ್ಲ. ರೋಗಿಗಳಿಗೆ ಸೂಕ್ತ ಮೂಲ ಸೌಲಭ್ಯ ನೀಡಿದರೆ ಮಾತ್ರ ಬೇಗ ಗುಣಮುಖರಾಗುತ್ತಾರೆ.