ವಿಜಯಪುರ : ವಾಹನ ಮಾಲೀಕರ ಬೇಡಿಕೆಗೆ ಅನುಗುಣವಾಗಿ ರಾಜ್ಯದ ಹಲವು ತಾಲೂಕು ಕೇಂದ್ರಗಳಲ್ಲಿಯೂ ಉಪ ಪ್ರಾದೇಶಿಕ ಸಾರಿಗೆ ಕಚೇರಿ ಆರಂಭಿಸಲು ಸರ್ಕಾರ ನಿರ್ಧರಿಸಿದೆ ಎಂದು ಸಾರಿಗೆ ಸಚಿವ ಹಾಗೂ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದರು.
ನಗರದ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯ ನೂತನ ಕಟ್ಟಡ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ನಿತ್ಯ ವಾಹನಗಳ ಬೇಡಿಕೆ ಹೆಚ್ಚಾಗುತ್ತಿದೆ. ಅದಕ್ಕೆ ತಕ್ಕಂತೆ ಪ್ರಾದೇಶಿಕ ಸಾರಿಗೆ ಕಚೇರಿಗಳು ಇಲ್ಲ, ಜಿಲ್ಲಾ ಮಟ್ಟದಲ್ಲಿ ಮಾತ್ರ ಆರ್ಟಿಒ ಕಚೇರಿಗಳಿವೆ.
ಅವುಗಳ ಮೇಲೆ ಹೆಚ್ಚುತ್ತಿರುವ ಕೆಲಸದ ಒತ್ತಡದ ಜತೆ ದೂರದ ತಾಲೂಕು ಕೇಂದ್ರದಿಂದ ವಾಹನ ಸವಾರರು ಆಗಮಿಸಿ ವಾಹನ ನೋಂದಣಿ ಮಾಡಿಕೊಳ್ಳುವ ಅನಿರ್ವಾಯತೆ ಇದೆ.
ಇದನ್ನು ತಪ್ಪಿಸಲು ಮೊದಲು ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಹಾಗೂ ಸಿಂದಗಿ ಪಟ್ಟಣದಲ್ಲಿ ಉಪ ಪ್ರಾದೇಶಿಕ ಸಾರಿಗೆ ಕಚೇರಿ ಆರಂಭಿಸಲಾಗುವುದು. ಬಜೆಟ್ ಅಧಿವೇಶನ ಪೂರ್ಣಗೊಂಡ ನಂತರ ಎರಡು ತಾಲೂಕಿನಲ್ಲಿ ಉಪ ಪ್ರಾದೇಶಿಕ ಸಾರಿಗೆ ಇಲಾಖೆ ಕಚೇರಿ ಉದ್ಘಾಟಿಸಲಾಗುವುದು ಎಂದರು.
ಇದಕ್ಕೂ ಮುನ್ನ ವಿಜಯಪುರ ಪ್ರಾದೇಶಿಕ ಸಾರಿಗೆ ಇಲಾಖೆಯ ನೂತನ ಕಟ್ಟಡ ಕಾಮಗಾರಿ ಭೂಮಿ ಪೂಜೆ ನೆರವೇರಿಸಿದರು. ಜತೆಗೆ ನಾಮಫಲಕ ಸಹ ಅನಾವರಣಗೊಳಿಸಿದರು. ಶಾಸಕರಾದ ಎ.ಎಸ್.ಪಾಟೀಲ ನಡಹಳ್ಳಿ, ದೇವಾನಂದ ಚೌಹಾಣ್, ಮುಖಂಡರಾದ ವಿಜುಗೌಡ ಪಾಟೀಲ ಸೇರಿ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.