ವಿಜಯಪುರ: ಡಿಪ್ಲೋಮಾ ನಂತರ ಇಂಜಿನಿಯರಿಂಗ್ ಹಾಗೂ ಇಂಜಿನಿಯರಿಂಗ್ ಸ್ನಾತಕೋತ್ತರ ಕೋರ್ಸ್ಗಳಿಗೆ ಸೇರಬಯಸುವ ವಿದ್ಯಾರ್ಥಿಗಳಿಗೆ ದಾಖಲೆ ಪರಿಶೀಲನೆ ಹಾಗೂ ಪ್ರವೇಶ ಹಾಗೂ ಕಾಲೇಜು ಬದಲಾವಣೆಗಾಗಿ ಈ ಬಾರಿ ವಿಜಯಪುರದ ಸಿಕ್ಯಾಬ್ ಇಂಜಿನಿಯರಿಂಗ್ ಕಾಲೇಜ್ಗೆ ಅವಕಾಶ ಕಲ್ಪಿಸಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ನೋಡಲ್ ಅಧಿಕಾರಿ ಕೆ. ಜಿ ಲಮಾಣಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನೋಡಲ್ ಹಾಗೂ ಸಹಾಯವಾಣಿ ಕೇಂದ್ರಗಳನ್ನು ಜಿಲ್ಲೆಯ 9 ಕಡೆ ತೆರೆಯಲಾಗಿದೆ ಎಂದರು. ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆ ಒಳಗೊಂಡು ಈ ಕೇಂದ್ರ ತೆರೆಯಲಾಗಿದೆ. ರಾಜ್ಯದ ಯಾವುದೇ ಪ್ರದೇಶದ ವಿದ್ಯಾರ್ಥಿಗಳಿಗೆ ಸಿಇಟಿ ಪ್ರವೇಶಾತಿ ಕುರಿತು ಸಹಾಯ ಮತ್ತು ಮಾರ್ಗದರ್ಶನ ಮಾಡಲು ಈ ಕೇಂದ್ರ ತೆರೆಯಲಾಗಿದೆ.
ನಾಳೆಯಿಂದ 2023 ಜನವರಿ 5ರವರೆಗೆ ಈ ಕೇಂದ್ರವು ಬೆಳಗ್ಗೆ 8- 30ರಿಂದ ಸಂಜೆ 5-00ರವರೆಗೆ ಕಾರ್ಯನಿರ್ವಹಿಸಲಿದೆ. ವಿದ್ಯಾರ್ಥಿಗಳು ಅವಶ್ಯಕ ಮೂಲ ದಾಖಲೆ ಹಾಗೂ ಗೆಜೆಟೆಡ್ ಅಧಿಕಾರಿಯಿಂದ ಧೃಢೀಕರಿಸಿದ ಪ್ರತಿಗಳನ್ನು ತರಲು ಸೂಚಿಸಲಾಗಿದೆ ಎಂದರು.
ತಮಗೆ ತಿಳಿಸಿದ ದಿನಾಂಕದಂದು ಸಹಜವಾಗಿ ತಾವು ಆಯ್ಕೆ ಮಾಡುವ ಕಾಲೇಜ್ಗಳ ಬಗ್ಗೆ ಮಾಹಿತಿ ನೀಡಬಹುದು. ಒಂದು ಕಾಲೇಜ್ ಆಯ್ಕೆ ಮಾಡಿಕೊಂಡ ಮೇಲೆ ತಮಗೆ ಅವಶ್ಯವಿದ್ದರೆ ಅದರ ಜತೆ ಬೇರೆ ಕಾಲೇಜ್ ಸಹ ಆಯ್ಕೆ ಮಾಡಲು ಅವಕಾಶ ನೀಡಲಾಗಿದೆ. ವಿದ್ಯಾರ್ಥಿಗಳು ಅದಕ್ಕೆ ಶುಲ್ಕ ಭರಿಸಬೇಕಾಗುತ್ತದೆ. ಅಂತಿಮವಾಗಿ ತಾವು ಆಯ್ಕೆ ಮಾಡಿಕೊಂಡ ಕಾಲೇಜಿನಲ್ಲಿ ದಾಖಲೆ ಪಡೆದ ಮೇಲೆ ವಿದ್ಯಾರ್ಥಿಯ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ತಿಳಿಸಿದರು.
ದಾಖಲಾತಿ ಪ್ರಕ್ರಿಯೆ : ವಿದ್ಯಾರ್ಥಿಗಳ ರ್ಯಾಂಕ್ಗೆ ಅನುಗುಣವಾಗಿ ದಾಖಲಾತಿ ಪರಿಶೀಲನೆ ನಡೆಯಲಿದೆ. ಡಿ. 23ರಂದು 1ರಿಂದ 2 ಸಾವಿರ ರ್ಯಾಂಕ್ ವಿದ್ಯಾರ್ಥಿಗಳಿಗೆ, ಡಿ. 24 ರಂದು 2001 ಸಾವಿರದಿಂದ 6 ಸಾವಿರ, ಡಿ. 26ರಂದು 6001ರಿಂದ 10ಸಾವಿರ, 27ರಂದು 10,001ಸಾವಿರ ರಿಂದ 15001 ಸಾವಿರ ಹಾಗೂ ಡಿ. 28 ರಂದು 15,001 ರಿಂದ ಕೊನೆಯ ಮುಗಿಯುವ ರ್ಯಾಂಕ್ ಪಡೆದ ವಿದ್ಯಾರ್ಥಿಗಳ ಮೂಲದಾಖಲೆ ಪರಿಶೀಲನೆ ನಡೆಯಲಿದೆ ಎಂದರು. ಹೆಚ್ಚಿನ ಮಾಹಿತಿಗಾಗಿ ನೋಡಲ್ ಅಧಿಕಾರಿ ಕೆ ಜಿ ಲಮಾಣಿ ಮೊ. 9448343935 ಇಲ್ಲಿ ಸಂಪರ್ಕಿಸಬಹುದು ಎಂದು ತಿಳಿಸಿದರು.
ಓದಿ: ಸಿಇಟಿ ಅಂಕಗಳ ಗೊಂದಲ: ಸರಾಸರಿ ಅಂಕ ಕಡಿಮೆ ಮಾಡಿ ಫಲಿತಾಂಶ ಪ್ರಕಟಿಸಿ ಎಂದ ಹೈಕೋರ್ಟ್