ವಿಜಯಪುರ: ಹಿಂದೆಂದೂ ಕಂಡರಿಯದ ಪ್ರವಾಹ ಎದುರಿಸುತ್ತಿರುವ ಜಿಲ್ಲೆಯ ಅನ್ನದಾತನ ಸಂಕಷ್ಟ ಅರಿಯಲು ಪ್ರವಾಹ ಪೀಡಿತ ಸ್ಥಳಕ್ಕೆ ನಾಳೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ. ಸಿಎಂ ಆಗಮನ ಹಿನ್ನೆಲೆ ಜಿಲ್ಲೆಯ ರೈತರಲ್ಲಿ ಆಶಾಭಾವನೆ ಮೂಡಿದ್ದು, ಪ್ರವಾಹ ಪೀಡಿತರಿಗೆ ವಿಶೇಷ ಪ್ಯಾಕೇಜ್ ಘೋಷಿಸುತ್ತಾರೆ ಎನ್ನುವ ನಿರೀಕ್ಷೆ ಹೊಂದಿದ್ದಾರೆ.
![CM BSY to conduct aerial survey of flood-affected area Tomorrow](https://etvbharatimages.akamaized.net/etvbharat/prod-images/kn-vjp-06-cm-airaial-survey-av-7202140_20102020212016_2010f_1603209016_117.png)
ಮಹಾರಾಷ್ಟ್ರದ ಉಜನಿ ಹಾಗೂ ವೀರಾ ಜಲಾಶಯಗಳಿಂದ ಬೇಕಾಬಿಟ್ಟಿ ನೀರು ಹರಿಸಿದ್ದರಿಂದ ಭೀಮಾ ನದಿಯ 8 ಸೇತುವೆಗಳು ಮುಳುಗಡೆಯಾಗಿವೆ. ಹಲವು ಗ್ರಾಮಗಳು ಜಲಾವೃತಗೊಂಡಿವೆ. ನದಿ ತಟದ ಜನರು ತೀವ್ರ ಸಂಕಷ್ಟ ಎದುರಿಸುವಂತಾಗಿದೆ. ಮನೆ-ಮಠ ಹಾಗೂ ಹಲವು ಬೆಳೆಗಳು ನೀರಿನಲ್ಲಿ ಕೊಚ್ಚಿಕೊಂಡು ಹೋಗಿವೆ. ನಿರಾಶ್ರಿತ ಸಂಖ್ಯೆ ಹೆಚ್ಚಾಗಿದೆ. ಹಾಗಾಗಿ, ಇವರ ಸಂಕಷ್ಟಕ್ಕೆ ಸ್ಪಂದಿಸಲು ನಾಡಿನ ದೊರೆ ನಾಳೆ ಪ್ರವಾಹ ಪೀಡಿತ ಭೀಮಾ, ಕೃಷ್ಣಾ ಮತ್ತು ಡೋಣಿ ನದಿಗಳಿಂದ ಹಾಳಾಗಿರುವ ಪ್ರದೇಶದಲ್ಲಿ ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ.
825 ಕೋಟಿ ರೂ. ಅಂದಾಜು ನಷ್ಟ : ಭೀಕರ ಪ್ರವಾಹದಿಂದ ಜಿಲ್ಲೆಯಲ್ಲಿ ಈವರೆಗೆ 825 ಕೋಟಿ ರೂ.ಗಿಂತ ಅಧಿಕ ನಷ್ಟವಾಗಿದೆ ಎಂದು ಜಿಲ್ಲಾಡಳಿತ ನಡೆಸಿದ ಸಮೀಕ್ಷೆಯಲ್ಲಿ ತಿಳಿದು ಬಂದಿದೆ. ಕೃಷಿ ಹಾಗೂ ಕಂದಾಯ ಇಲಾಖೆ ಜಂಟಿಯಾಗಿ ನಡೆಸಿದ ಕೃಷಿ ಬೆಳೆ ನಷ್ಟವೇ 636 ಕೋಟಿ ರೂ. ಎಂದು ಅಂದಾಜಿಸಿದೆ. ಕಬ್ಬು, ತೊಗರಿ, ಸೂರ್ಯಕಾಂತಿ, ಹತ್ತಿ ಸೇರಿದಂತೆ ಕೃಷಿ ಬೆಳೆ ಬೆಳೆಯಲಾಗಿತ್ತು. ಎಲ್ಲವೂ ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದು, ಅಂದಾಜು 1, 60,739 ಲಕ್ಷ ಹೆಕ್ಟೇರ್ ಪ್ರದೇಶ ಪ್ರವಾಹಕ್ಕೆ ತುತ್ತಾಗಿದೆ. ಬೆಳೆಯ ನಷ್ಟ 636 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ತೋಟಗಾರಿಕೆ ಬೆಳೆ ಸಹ ನಷ್ಟವಾಗಿದ್ದು, 11,929 ಹೆಕ್ಟೇರ್ ಪ್ರದೇಶದ ದ್ರಾಕ್ಷಿ, ದಾಳಿಂಬೆ, ನಿಂಬು, ಮಾವಿನ ಹಣ್ಣು, ಬಾಳೆ, ಟೋಮ್ಯಾಟೊ ಸೇರಿ 156 ಕೋಟಿ ರೂ. ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.
![CM BSY to conduct aerial survey of flood-affected area Tomorrow](https://etvbharatimages.akamaized.net/etvbharat/prod-images/kn-vjp-06-cm-airaial-survey-av-7202140_20102020212016_2010f_1603209016_1016.png)
ಮಳೆಯಿಂದ ಮೂಲಸೌಕರ್ಯಗಳಾದ ವಿದ್ಯುತ್ ಕಂಬ, ಶಾಲಾ ಕಟ್ಟಡ, ಲೋಕೋಪಯೋಗಿ ಇಲಾಖೆಯ ಕಟ್ಟಡಗಳು ಸೇರಿದಂತೆ 33 ಕೋಟಿ ರೂ. ದಷ್ಟು ನಷ್ಟವಾಗಿರುವ ಕುರಿತು ಜಿಲ್ಲಾಡಳಿತ ಅಂದಾಜು ಸಿದ್ಧಪಡಿಸಿದ್ದು, ನಾಳೆ ಆಲಮಟ್ಟಿಯಲ್ಲಿ ನಡೆಯಲಿರುವ ಮುಖ್ಯಮಂತ್ರಿಗಳ ಅಧ್ಯಕ್ಷತೆಯ ಸಭೆಯಲ್ಲಿ ಜಿಲ್ಲಾಧಿಕಾರಿ ಪಿ. ಸುನೀಲಕುಮಾರ ಅವರು 825 ಕೋಟಿ ರೂ.ಗಳ ಅಂದಾಜು ನಷ್ಟದ ವರದಿಯನ್ನು ಸಿಎಂಗೆ ಸಲ್ಲಿಸಲಿದ್ದಾರೆ.
ಪೂರ್ವ ಸಿದ್ಧತೆ : ಜಿಲ್ಲೆಯಲ್ಲಿ ಭೀಮಾ ನದಿಯಿಂದ ಉಂಟಾದ ಪ್ರವಾಹದ ವೈಮಾನಿಕ ಸಮೀಕ್ಷೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಾಳೆ ಆಲಮಟ್ಟಿಗೆ ಭೇಟಿ ನೀಡುವ ಹಿನ್ನೆಲೆಯಲ್ಲಿ ಆಲಮಟ್ಟಿ ಹೆಲಿಪ್ಯಾಡ್ಗೆ ಜಿಲ್ಲಾಧಿಕಾರಿ ಪಿ.ಸುನೀಲಕುಮಾರ ಮತ್ತು ಎಸ್ಪಿ ಅನುಪಮ್ ಅಗರವಾಲ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
![CM BSY to conduct aerial survey of flood-affected area Tomorrow](https://etvbharatimages.akamaized.net/etvbharat/prod-images/kn-vjp-06-cm-airaial-survey-av-7202140_20102020212016_2010f_1603209016_1063.png)
ಕೃಷ್ಣಾ ಮತ್ತು ಭೀಮಾ ನದಿಗಳ ಪಾತ್ರದಲ್ಲಿ ಪ್ರವಾಹ ಪರಿಸ್ಥಿತಿಯಿಂದಾಗಿ ಜಿಲ್ಲೆಯಲ್ಲಿ ಹಾನಿಯಾದ ಬಗ್ಗೆ ಪ್ರಗತಿ ಪರಿಶೀಲನಾ ಸಭೆ ನಡೆಸಲಿದ್ದಾರೆ. ಸಿಎಂ ವೈಮಾನಿಕ ಸಮೀಕ್ಷೆ ನಡೆಸಿದ ನಂತರ ಮಧ್ಯಾಹ್ನ 2.30ಕ್ಕೆ ಆಲಮಟ್ಟಿಗೆ ಭೇಟಿ ನೀಡಲಿದ್ದಾರೆ. ಬಳಿಕ ಎಂಡಿ ಕಚೇರಿ ಸಭಾಂಗಣದಲ್ಲಿ ಸಚಿವರು, ಶಾಸಕರು ಸೇರಿದಂತೆ ವಿಜಯಪುರ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳೊಂದಿಗೆ ಅತಿವೃಷ್ಟಿ ಕುರಿತು ಚರ್ಚೆ ನಡೆಸಲಿದ್ದಾರೆ.
ಕೊರೊನಾ ಮುಂಜಾಗ್ರತೆ ಕ್ರಮವಾಗಿ ಭದ್ರತೆಗೆ ನಿಯೋಜನೆಗೊಂಡಿರುವ ಪೊಲೀಸ್ ಅಧಿಕಾರಿಗಳು, ಬಾಣಸಿಗರು ಹಾಗೂ ನಾನಾ ಅಧಿಕಾರಿಗಳು ಸೇರಿ ಒಟ್ಟು 60ಕ್ಕೂ ಅಧಿಕ ಜನರಿಗೆ ಇಂದು ಕೋವಿಡ್ ಪರೀಕ್ಷೆ ನಡೆಸಲಾಯಿತು. ಹೆಲಿಪ್ಯಾಡ್, ಎಂಡಿ ಕಚೇರಿ, ಪ್ರವಾಸಿ ಮಂದಿರ ಸೇರಿದಂತೆ ನಾನಾ ಕಡೆ ಈಗಾಗಲೇ ಸ್ಯಾನಿಟೈಸ್ ಸಿಂಪಡಿಸಲಾಗಿದೆ. ವೈದ್ಯಕೀಯ ತಂಡ ರಚಿಸಲಾಗಿದ್ದು, ಪ್ರತಿಯೊಬ್ಬರ ಆರೋಗ್ಯ ಪರೀಕ್ಷೆಯನ್ನು ನಡೆಸಲಾಗುತ್ತದೆ.
![CM BSY to conduct aerial survey of flood-affected area Tomorrow](https://etvbharatimages.akamaized.net/etvbharat/prod-images/kn-vjp-06-cm-airaial-survey-av-7202140_20102020212016_2010f_1603209016_717.jpg)
ಪೊಲೀಸ್ ಭದ್ರತೆ: ಮುಖ್ಯಮಂತ್ರಿಗಳ ಆಗಮನ ಹಿನ್ನೆಲೆ ಆಲಮಟ್ಟಿಗೆ ಸಾರ್ವಜನಿಕ ಪ್ರವೇಶಕ್ಕೆ ನಿರ್ಬಂಧಿಸಲಾಗಿದೆ. ಆಲಮಟ್ಟಿ ಜಲಾಶಯದ ಬಲಭಾಗದ ಪ್ರವೇಶ ದ್ವಾರದ ಬಳಿ ಪೊಲೀಸ್ ಚೆಕ್ ಪೋಸ್ಟ್ ನಿರ್ಮಿಸಲಾಗಿದೆ. ನಾಳೆ ಅಧಿಕೃತ ಪಾಸ್ ಹೊಂದಿದವರು ಮಾತ್ರ ಆಲಮಟ್ಟಿ ಮುಖ್ಯದ್ವಾರದ ಮೂಲಕ ಆರೋಗ್ಯ ತಪಾಸಣೆಗೆ ಒಳಗಾದ ಮೇಲೆ ಒಳ ಬಿಡಲಾಗುತ್ತದೆ. ಭದ್ರತೆಗೆ ಒಬ್ಬ ಎಸ್ಪಿ, ಎಎಸ್ಪಿ, ಮೂವರು ಡಿವೈಎಸ್ಪಿ, ಐವರು ಸಿಪಿಐ, 23 ಪಿಎಸೈ, ಎಎಸೈ ಸೇರಿದಂತೆ 250 ಸಿಬ್ಬಂದಿ, 3 ಡಿಎಆರ್ ಹಾಗೂ 2 ಕೆಎಸ್ಆರ್ಪಿ ತುಕಡಿ ಸೇರಿದಂತೆ 1 ಅಗ್ನಿಶಾಮಕ ವಾಹನ, 4 ಆ್ಯಂಬುಲೆನ್ಸ್ಗಳನ್ನು ನಿಯೋಜಿಸಲಾಗಿದೆ.