ಕಾರವಾರ: ಸಮ್ಮಿಶ್ರ ಸರ್ಕಾರದಿಂದ ಅತೃಪ್ತಗೊಂಡ ಶಾಸಕ ಶಿವರಾಮ ಹೆಬ್ಬಾರ್ ಬಿಜೆಪಿಗೆ ಬರುವುದನ್ನು ಹೈಕಮಾಂಡ್ ಒಪ್ಪಿದರೆ ಜಿಲ್ಲೆಯ ಬಿಜೆಪಿ ಕಾರ್ಯಕರ್ತರು ಮುಕ್ತವಾಗಿ ಸ್ವಾಗತಿಸಲಿದ್ದೇವೆ ಎಂದು ಬಿಜೆಪಿ ಜಿಲ್ಲಾಘಟಕದ ಅಧ್ಯಕ್ಷ ಕೆ.ಜಿ. ನಾಯ್ಕ ಹೇಳಿದರು.
ಕಾರವಾರದಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನದ ಕುರಿತು ಮಾಹಿತಿ ನೀಡಿದ ಬಳಿಕ ಮಾತನಾಡಿದ ಅವರು, ಸಮ್ಮಿಶ್ರ ಸರ್ಕಾರದ ದುರಾಡಳಿತದಿಂದ ಬೇಸತ್ತಿರುವ ಶಾಸಕ ಶಿವರಾಮ ಹೆಬ್ಬಾರ್ ತಮ್ಮ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ, ಆದರೆ ಇನ್ನೂ ಪಕ್ಷಕ್ಕೆ ರಾಜಿನಾಮೆ ನೀಡಿಲ್ಲ. ಈ ನಡುವೆ ಜಿಲ್ಲೆಯಲ್ಲಿ ಬಿಜೆಪಿ ಸೇರುವುದಾಗಿ ಸುದ್ದಿಗಳು ಹರಿದಾಡುತ್ತಿದೆ. ಒಂದೊಮ್ಮೆ ಅವರು ಬಿಜೆಪಿ ಬರುವುದನ್ನು ಹೈಕಮಾಂಡ್ ಒಪ್ಪಿದಲ್ಲಿ ನಾವು ಒಪ್ಪಿಕೊಳ್ಳಲೇ ಬೇಕಾಗುತ್ತದೆ ಎಂದು ಹೇಳಿದರು.
ಶಿವರಾಮ್ ಹೆಬ್ಬಾರ್ ಬಿಜೆಪಿಯಲ್ಲಿಯೇ ಇದ್ದು ಈ ಹಿಂದೆ ಎರಡು ಬಾರಿ ಜಿಲ್ಲಾಧ್ಯಕ್ಷರಾಗಿದ್ದರು. ಆದರೆ ಬೇರೆ ಬೇರೆ ಕಾರಣಗಳಿಂದ ಕಾಂಗ್ರೆಸ್ಗೆ ತೆರಳಿ ಶಾಸಕರಾಗಿದ್ದರು. ಆದರೆ ಇದೀಗ ಸಮ್ಮಿಶ್ರ ಸರ್ಕಾರದಿಂದ ಬೇಸತ್ತಿದ್ದಾರೆ. ಅವರು ಪಕ್ಷಕ್ಕೆ ಬಂದರೆ ಈಗಾಗಲೇ ಕಾರ್ಯಕರ್ತರಿಗೆ ಒಡನಾಟ ಇರುವುದರಿಂದ ಯಾವುದೇ ಸಮಸ್ಯೆ ಆಗುವುದಿಲ್ಲ. ಮಾಜಿ ಶಾಸಕ ವಿ.ಎಸ್. ಪಾಟೀಲ್ ಕಳೆದ ಚುನಾವಣೆಯಲ್ಲಿ ಹೆಬ್ಬಾರ ವಿರುದ್ಧ ಕೇವಲ 1400 ಮತಗಳಿಂದ ಸೋತಿದ್ದರು. ಆದರೆ ಅವರು ಕಾಂಗ್ರೆಸ್ ಸೇರುತ್ತಾರೆ ಎಂಬುವ ನಂಬಿಕೆ ಇಲ್ಲ. ಈಗಾಗಲೇ ಕಾಂಗ್ರೆಸ್, ರಾಷ್ಟ್ರಾಧ್ಯಕ್ಷರಿಲ್ಲದೆ ಮುಳುಗುವ ಹಡಗಾಗಿದ್ದು, ಇಂತಹ ಪಕ್ಷಕ್ಕೆ ಹೋದರೆ ತಮ್ಮ ಭವಿಷ್ಯ ಏನಾಗಬಹುದು ಎಂಬ ಅರಿವು ಇದೆ. ಆದರೆ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುಂದಿನ ದಿನಗಳಲ್ಲಿ ಪಕ್ಷ ಸೂಕ್ತ ಸ್ಥಾನ ಕಲ್ಪಿಸಲಿದೆ ಎಂದು ಹೇಳಿದರು.
ಇನ್ನು ಬಿಜೆಪಿಯು ಐದು ವರ್ಷದ ಸದಸ್ಯತ್ವಕ್ಕಾಗಿ ಅಭಿಯಾನ ಆರಂಭಿಸಿದ್ದು, ಆಗಸ್ಟ್ 11 ರಂದು ಕೊನೆಗೊಳ್ಳಲಿದೆ. ಉತ್ತರಕನ್ನಡ ಜಿಲ್ಲೆಯಲ್ಲಿ ಹೊಸದಾಗಿ 3 ಲಕ್ಷದ ಸದಸ್ಯತ್ವ ಗುರಿ ಹೊಂದಿದ್ದು, 80 ಸಾವಿರ ಜನರು ಈಗಾಗಲೇ ನೋಂದಣಿ ಮಾಡಿದ್ದಾರೆ. ಮಿಸ್ ಕಾಲ್ ಕೊಡುವ ಮೂಲಕ ಸದಸ್ಯತ್ವವನ್ನು ಪಡೆಯಬಹುದು ಎಂದು ಇದೇ ವೇಳೆ ಹೇಳಿದರು. ಈ ವೇಳೆ ಬಿಜೆಪಿ ಮುಖ್ಯ ಸಂಚಾಲಕ ಆರ್.ಡಿ. ಹೆಗಡೆ, ನಾಗರಾಜ ನಾಯ್ಕ, ಮನೋಜ್ ಭಟ್, ರಾಜೇಶ ನಾಯ್ಕ ಇದ್ದರು.