ಕಾರವಾರ: ಕೊರೊನಾ ಆತಂಕದ ಹಿನ್ನೆಲೆಯಲ್ಲಿ ಗೋವಾದಲ್ಲಿ ಎಸ್ಎಸ್ಎಲ್ಸಿ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಕರ್ನಾಟಕ ಪಠ್ಯಕ್ರಮದಂತೆ ಅಲ್ಲಿಯೇ ಪರೀಕ್ಷೆ ನಡೆಸಬೇಕೆಂಬ ಕಾರವಾರದ ಕೆಲ ಗ್ರಾಮಸ್ಥರ ಒತ್ತಾಯಕ್ಕೆ ಸರ್ಕಾರ ಮಣಿದಿದ್ದು, ಗೋವಾದಲ್ಲಿಯೇ ಪರೀಕ್ಷೆ ನಡೆಸಲು ಮುಂದಾಗಿದೆ.
ಗೋವಾದಲ್ಲಿ ಹೆಚ್ಚುತ್ತಿರುವ ಕೊರೊನಾ ಆತಂಕದ ಹಿನ್ನೆಲೆಯಲ್ಲಿ ಪ್ರತಿ ವರ್ಷದಂತೆ ಕಾರವಾರದ ಉಳಗಾ ಶಿವಾಜಿ ಪ್ರೌಢಶಾಲೆಯಲ್ಲಿ ಪರೀಕ್ಷೆ ನಡೆಸಲಾಗುತ್ತಿತ್ತು. ಅದರಂತೆ ಪ್ರಸಕ್ತ ಸಾಲಿನಲ್ಲಿಯೂ ಗೋವಾದ ಎರಡು ಪ್ರೌಢಶಾಲೆಯ 47 ವಿದ್ಯಾರ್ಥಿಗಳಿಗೆ ಉಳಗಾ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ನಡೆಸಲು ಸಿದ್ದತೆ ನಡೆಸಲಾಗಿತ್ತು. ಆದರೆ ಗೋವಾದಲ್ಲಿ ದಿನೇ ದಿನೆ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕಾರವಾರ ಉಳಗಾದ ಸುತ್ತಮುತ್ತಲಿನ ಪಾಲಕರು ಆತಂಕ ವ್ಯಕ್ತಪಡಿಸಿದ್ದರು.
ಗೋವಾದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗಿದ್ದು, ಅಲ್ಲಿಂದ ವಿದ್ಯಾರ್ಥಿಗಳು ಬಂದರೆ, ನಮ್ಮ ಮಕ್ಕಳಿಗೂ ಆತಂಕ ಇರುವುದಾಗಿ ಪಾಲಕರು ತಿಳಿಸಿದ್ದರು. ಅಲ್ಲದೆ ಈ ಬಗ್ಗೆ ಜಿಲ್ಲಾಡಳಿತ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಮೂಲಕ ಸರ್ಕಾರರಕ್ಕೂ ಮನವಿ ಸಲ್ಲಿಸಿದ್ದರು.
ಈ ಬಗ್ಗೆ ಜಿಲ್ಲೆಯ ಅಧಿಕಾರಿಗಳಿಂದ ಮಾಹಿತಿ ಪಡೆದ ಸರ್ಕಾರ, ಗೋವಾ ಸರ್ಕಾರದೊಂದಿಗೆ ಮಾತುಕತೆ ನಡೆಸಿದೆ. 47 ವಿದ್ಯಾರ್ಥಿಗಳಿಗೂ ಗೋವಾದಲ್ಲಿಯೇ ಪರೀಕ್ಷೆ ನಡೆಸಲು ಅಲ್ಲಿನ ಸರ್ಕಾರ ಕೂಡ ಒಪ್ಪಿದ್ದು, ಯಾವ ಪರೀಕ್ಷಾ ಕೇಂದ್ರ ಎಲ್ಲಿ ನಡೆಯಲಿದೆ ಎಂಬುದನ್ನು ಇನ್ನಷ್ಟೆ ಸ್ಪಷ್ಟವಾಗಬೇಕಿದೆ ಎಂದು ಕಾರವಾರ ಡಿಡಿಪಿಐ ಹರೀಶ ಗಾಂವಕರ್ ತಿಳಿಸಿದ್ದಾರೆ.