ಶಿರಸಿ: ಯಲ್ಲಾಪುರ ವಿಧಾನಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರಚಂಡ ಬಹುಮತದಿಂದ ಗೆಲ್ಲುತ್ತಾರೆ ಎಂದು ಮಾಜಿ ಸಚಿವ ಆರ್.ವಿ.ದೇಶಪಾಂಡೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಯಲ್ಲಾಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮ್ಮಿಶ್ರ ಸರ್ಕಾರ ಇದ್ದ ಸಂದರ್ಭದಲ್ಲಿ ಹಾಗೂ ನಾನು ಶಾಸಕನಾಗಿದ್ದಾಗ ಕ್ಷೇತ್ರದಲ್ಲಿ ಆಗಿರುವ ಅಭಿವೃದ್ಧಿಯನ್ನು ಜನರು ಇಂದಿಗೂ ನೆನೆಯುತ್ತಾರೆ. ಆದ ಕಾರಣ ಅಭಿವೃದ್ಧಿ ಮತ್ತು ನಾವು ಇಟ್ಟುಕೊಂಡಿರುವ ಜನಸಂಪರ್ಕದ ಕಾರಣದಿಂದ ನಮ್ಮ ಗೆಲುವು ನಿಶ್ಚಿತ ಎಂದರು.
ಕಪ್ಪು ಚುಕ್ಕೆ:
ಚುನಾವಣೆಯಲ್ಲಿ ಅನರ್ಹ ಶಾಸಕರಿಗೆ ಸ್ಪರ್ಧಿಸಲು ಅವಕಾಶ ನೀಡಿದ್ದರೂ, ಅವರ ರಾಜಕೀಯ ಜೀವನದಲ್ಲಿ ಅನರ್ಹ ಎಂಬುದು ಕಪ್ಪು ಚುಕ್ಕೆಯಾಗಿದೆ ಎಂದು ದೇಶಪಾಂಡೆ ವಿಶ್ಲೇಷಿಸಿದರು.
ಬಿಜೆಪಿ ಸರ್ಕಾರ ಅತಿವೃಷ್ಟಿ, ಹಾನಿ ತಡೆಯಲು ವಿಫಲವಾಗಿದೆ. ಮೊದಲು ಯಡಿಯೂರಪ್ಪ ಮಾತ್ರ ಸರ್ಕಾರ ನಡೆಸಿದರು. ನಂತರ ಖಾತೆ ನೀಡುವಲ್ಲಿ ವಿಳಂಬವಾಯಿತು. ಅತಿವೃಷ್ಟಿಯಿಂದ ಹಾನಿಯಾದವರಿಗೆ ನ್ಯಾಯಬದ್ಧ ಪರಿಹಾರ ನೀಡಿಲ್ಲ. ಪರಿಹಾರ ಘೋಷಣೆ ಆಗಿದ್ದರೂ ಅದು ಸಮರ್ಪಕವಾಗಿ ಅನುಷ್ಠಾನ ಆಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.