ಕಾರವಾರ: ಬೇಲಿಯೇ ಎದ್ದು ಹೊಲ ಮೇಯ್ದಂತೆ ಅನ್ನೋ ಗಾದೆಯಿದೆ. ಅದರಂತೆ ಅರಣ್ಯ ಬೆಳೆಸಬೇಕು ಎಂದು ಘೋಷಣೆ ಮಾಡೋ ಅರಣ್ಯಾಧಿಕಾರಿಗಳೇ ಭಾರಿ ಪ್ರಮಾಣದಲ್ಲಿ ಅರಣ್ಯ ನಾಶ ಮಾಡಿರುವ ಆರೋಪ ಕೇಳಿಬಂದಿದೆ. ಉತ್ತರಕನ್ನಡ ಜಿಲ್ಲೆಯ ಜೋಯಿಡಾದಲ್ಲಿ ಹುಲ್ಲುಗಾವಲು ಪ್ರದೇಶ ನಿರ್ಮಾಣಕ್ಕೆಂದು ಸಾವಿರಾರು ಮರಗಳ ಬುಡಕ್ಕೆ ಅರಣ್ಯಾಧಿಕಾರಿಗಳೇ ಕೊಡಲಿಯಿಟ್ಟಿದ್ದಲ್ಲದೇ, ಎಕರೆಗಟ್ಟಲೇ ಪ್ರದೇಶವನ್ನು ಬೆಂಕಿ ಹಾಕಿ ಸುಟ್ಟಿದ್ದಾರೆ ಎನ್ನುವ ಮಾತುಗಳು ಕೇಳಿಬಂದಿವೆ.
ಅರಣ್ಯವನ್ನು ಉಳಿಸಬೇಕು, ಮರ ಗಿಡಗಳನ್ನು ಬೆಳೆಸಬೇಕು ಎನ್ನುವ ಧ್ಯೇಯದೊಂದಿಗೆ ಅರಣ್ಯ ಇಲಾಖೆ ಕಾರ್ಯನಿರ್ವಹಿಸುತ್ತದೆ. ಆದರೆ ಉತ್ತರಕನ್ನಡ ಜಿಲ್ಲೆಯ ಕಾಳಿ ಹುಲಿ ಸಂರಕ್ಷಿತ ಪ್ರದೇಶವಾದ ಜೋಯಿಡಾದ ಅಣಶಿ ವ್ಯಾಪ್ತಿಯಲ್ಲಿ ಅರಣ್ಯ ಇಲಾಖೆಯೇ ಸಾವಿರಾರು ಮರಗಳ ಮಾರಣಹೋಮ ನಡೆಸಿದೆ ಎನ್ನುವ ಆರೋಪ ಇದೀಗ ಸ್ಥಳೀಯರಿಂದ ವ್ಯಕ್ತವಾಗಿದೆ. ಅರಣ್ಯ ಭಾಗದಲ್ಲಿ ಹುಲ್ಲುಗಾವಲಿನ ಪ್ರದೇಶ ಬೆಳೆಸಬೇಕೆಂಬ ಉದ್ದೇಶದಿಂದ ಅರಣ್ಯದ ಮಧ್ಯಭಾಗದಲ್ಲಿ ಮರಗಳು ಹಾಗೂ ಬೆಳೆದ ಗಿಡಗಳನ್ನು ನಾಶ ಮಾಡಲಾಗಿದೆ. ಉಳಿದಂತೆ ರಸ್ತೆಯಿಂದ ಅಣತಿ ದೂರದಲ್ಲಿರುವ ಪ್ರದೇಶಗಳಲ್ಲೂ ಮರಗಳನ್ನು ಕಟ್ ಮಾಡಿ ಕೊಂಡೊಯ್ಯಲಾಗಿದೆಯಂತೆ.
ಮೌಲ್ಯಯುತ ಮರದ ದಿಮ್ಮಿಗಳು ನಾಪತ್ತೆ: ಇದಕ್ಕೆ ಪುಷ್ಟಿ ನೀಡುವಂತೆ ಗುಂಡಾಳಿ ಗ್ರಾಮದ ಬಳಿಯಿರುವ ಗಾಯತ್ರಿ ಗುಡ್ಡದಲ್ಲಿ ಮರಗಳನ್ನು ಕತ್ತರಿಸಿರುವುದು ಕಂಡುಬಂದಿದೆ. ಕಳೆದ ಡಿಸೆಂಬರ್ನಲ್ಲಿ ಈ ಕೃತ್ಯ ಎಸಗಲಾಗಿದ್ದು, ನೂರಾರು ಎಕರೆ ಪ್ರದೇಶದಲ್ಲಿರುವ ಮರ, ಗಿಡಗಳನ್ನು ಅರಣ್ಯ ಅಧಿಕಾರಿಗಳು ಸಂಪೂರ್ಣ ನಾಶ ಮಾಡಿದ್ದಾರೆ. ಸಾಕಷ್ಟು ಮರಗಳು ಇನ್ನೂ ಸ್ಥಳದಲ್ಲೇ ತುಂಡಾಗಿ ಬಿದ್ದಿದ್ದರೆ, ಉಳಿದ ಭಾರಿ ಗಾತ್ರದ, ಉತ್ತಮ ಹಾಗೂ ಮೌಲ್ಯಯುತ ಮರದ ದಿಮ್ಮಿಗಳು ನಾಪತ್ತೆಯಾಗಿವೆ. ಹುಲ್ಲುಗಾವಲು ಪ್ರದೇಶ ನಿರ್ಮಾಣದ ಯೋಜನೆಯಡಿ ಹಣ ನುಂಗುವ ಉದ್ದೇಶದಿಂದ ಅರಣ್ಯ ಇಲಾಖೆಯ ಅಧಿಕಾರಿಗಳು ಈ ಕೃತ್ಯ ಎಸಗಿದ್ದು, ಉತ್ತಮ ಮರದ ದಿಮ್ಮಿಗಳನ್ನು ಮಾರಾಟ ಮಾಡಿದ್ದಾರೆಂದು ಸ್ಥಳೀಯರು ಆರೋಪಿಸಿದ್ದು, ಈ ಬಗ್ಗೆ ಸೂಕ್ತ ತನಿಖೆಯಾಗಬೇಕೆಂದು ಒತ್ತಾಯಿಸಿದ್ದಾರೆ.
2000ಕ್ಕೂ ಅಧಿಕ ಗಿಡಮರ ನಾಶ: ಕಾಳಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಯಾವುದೇ ಕಾರಣಕ್ಕೂ ಬೆಂಕಿ ಹಾಕಬಾರದು ಎಂಬ ನಿಯಮವಿದೆ. ಆದರೆ, ಹುಲ್ಲುಗಾವಲು ಪ್ರದೇಶ ನಿರ್ಮಾಣ ಮಾಡುವ ಉದ್ದೇಶದಿಂದ ಗುಂಡಾಳಿಯ ಗಾಯತ್ರಿ ಗುಡ್ಡದಲ್ಲಿ ಎಕರೆಗಟ್ಟಲೆ ಪ್ರದೇಶಕ್ಕೆ ಬೆಂಕಿ ಹಾಕಲಾಗಿದೆ. ಗುಂಡಾಳಿಯ ಗಾಯತ್ರಿ ಗುಡ್ಡ, ಕುಂಬಾರವಾಡ ವಲಯದ ನುಜ್ಜಿ ಹೊಳೆ ನರ್ಸರಿ, ದೂಧ್ಮಾಳ, ಸೀಸೈ, ಪಣಸೋಲಿ, ಸುಳಾವಳಿ ಸೇರಿ ಹಲವೆಡೆ ಸಹ ಭಾರಿ ಪ್ರಮಾಣದಲ್ಲಿ ಅರಣ್ಯ ನಾಶ ಮಾಡಲಾಗಿದ್ದು, ಸುಮಾರು 2000ಕ್ಕೂ ಅಧಿಕ ಗಿಡಮರಗಳನ್ನು ಕತ್ತರಿಸಲಾಗಿದೆ.
ಜಿಲ್ಲಾಧಿಕಾರಿಯಿಂದ ಸೂಕ್ತ ಕ್ರಮದ ಭರವಸೆ: ಇದು ಅರಣ್ಯದಲ್ಲಿ ಹುಲ್ಲುಗಾವಲು ಪ್ರದೇಶವನ್ನು ಹೆಚ್ಚಿಸುವ ಉದ್ದೇಶದಿಂದ ಮಾಡಲಾಗಿದೆ ಎನ್ನಲಾಗಿದ್ದು, ಇದಕ್ಕಾಗಿ ಬೆಳೆದುನಿಂತ ಮರಗಳನ್ನು ಕಡಿದು ಹಾಕಿರುವುದು ಎಷ್ಟು ಸರಿ ಅನ್ನೋದು ಸ್ಥಳೀಯರ ಪ್ರಶ್ನೆಯಾಗಿದೆ. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಅವರನ್ನು ಕೇಳಿದರೆ, ಕಾಳಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಮರಗಳನ್ನು ಕಡಿದುಹಾಕಿರುವುದು ಸರಿಯಾದ ಕ್ರಮವಲ್ಲ. ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಒಟ್ಟಾರೆ ಅರಣ್ಯವನ್ನು ರಕ್ಷಿಸಬೇಕಾದ ಇಲಾಖೆಯ ಅಧಿಕಾರಿಗಳೇ ಮರಗಿಡಗಳನ್ನು ಕಡಿದುಹಾಕಿ ನಿಯಮಗಳನ್ನು ಗಾಳಿಗೆ ತೂರಿದ್ದು, ಈ ಬಗ್ಗೆ ಜನಪ್ರತಿನಿಧಿಗಳು, ಜಿಲ್ಲಾಡಳಿತ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಾಗಿದೆ. ಇಲ್ಲವಾದಲ್ಲಿ ಕಾಯುವ ಕೈಗಳಿಂದಲೇ ಅರಣ್ಯಕ್ಕೆ ಸಂಚಕಾರ ಎದುರಾಗುವುದರಲ್ಲಿ ಯಾವುದೇ ಅನುಮಾನಗಳಿಲ್ಲ.
ಇದನ್ನೂ ಓದಿ: ತುಮಕೂರು: ಜಾಹೀರಾತು ಸಂಸ್ಥೆಗಳ ಪೈಪೋಟಿಗೆ ಮರಗಳು ಬಲಿ?