ಶಿರಸಿ: ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಅಜ್ಜೀಬಳದಲ್ಲಿ ಇತ್ತೀಚೆಗೆ 15ನೇ ಶತಮಾನಕ್ಕೆ ಸೇರಿದ ಶಿಲಾ ಶಾಸನವೊಂದು ಪತ್ತೆ ಹಚ್ಚಲಾಗಿದೆ.
ಕಮಲಾ ನೆಹರು ಮಹಿಳಾ ಕಾಲೇಜಿನ ಇತಿಹಾಸ ಪ್ರಾಧ್ಯಾಪಕ ಡಾ.ಬಾಲಕೃಷ್ಣ ಹೆಗಡೆ ಈ ಶಾಸನವನ್ನು ಪತ್ತೆ ಮಾಡಿದ್ದಾರೆ. ಶಾಸನವು ಹದಿನಾರು ಸಾಲುಗಳನ್ನು ಹೊಂದಿದ್ದು, ಇದು ಕನ್ನಡ ಲಿಪಿ ಭಾಷೆಯಲ್ಲಿದೆ. ಇದರ ಕಾಲ ಸುಮಾರು 15ನೇ ಶತಮಾನದ್ದಿರಬಹುದೆಂದು ಅಂದಾಜಿಸಲಾಗಿದೆ.
ಶಾಸನ ಕಲ್ಲಿನ ಶಿರೋ ಭಾಗ ತುಂಡಾಗಿದೆ. ಶಾಸನದ ಬಹು ಭಾಗ ತೃಟಿತಗೊಂಡಿದ್ದು ಓದಲು ಕಷ್ಟವಾಗಿದೆ. ಈ ಶಾಸನವು ನಾಲ್ಕು ಅಡಿ ಎತ್ತರ, ಎರಡೂವರೆ ಅಡಿ ಅಗಲ ಇದ್ದು, ನಾಲ್ಕು ಪಟ್ಟಿಕೆಗಳನ್ನು ಹೊಂದಿದೆ. ಇವುಗಳಲ್ಲಿ ಯುದ್ಧದ ಚಿತ್ರಗಳು, ಓರ್ವ ವೀರ ಮತ್ತು ಅವನ ಮಡದಿಯ ಚಿತ್ರ, ಸ್ತ್ರೀಯರು ಅವರನ್ನು ಸ್ವರ್ಗಕ್ಕೆ ಕೊಂಡೊಯ್ಯುತ್ತಿರುವ ಚಿತ್ರಗಳನ್ನು ಕೆತ್ತಲಾಗಿದೆ. ಮೇಲಿನ ಮೊದಲ ಪಟ್ಟಿಕೆಯ ಬಲ ಭಾಗದಲ್ಲಿ ವೀರನೋರ್ವ ಕುಳಿತಿರುವ ಚಿತ್ರ, ಎಡ ಭಾಗದಲ್ಲಿ ನಂದಿ ಚಿತ್ರ ಮಧ್ಯದಲ್ಲಿ ಶಿವಲಿಂಗದ ಚಿತ್ರಗಳನ್ನು ಕೆತ್ತಲಾಗಿದೆ.
ಕೆಳಗಿನ ಪಟ್ಟಿಕೆ ನೆಲದಲ್ಲಿ ಹೂತು ಹೋಗಿದೆ. ‘ಕರೂರು’, ‘ಶಂಕರ’ ಎಂಬಿತ್ಯಾದಿ ಪದಗಳು ಶಾಸನದಲ್ಲಿ ಗೋಚರಿಸುತ್ತಿದ್ದು, ಅಜ್ಜೀಬಳಿಗೆ ಅನತಿ ದೂರದಲ್ಲಿರುವ ಕರೂರು ಗ್ರಾಮವನ್ನೇ ಇಲ್ಲಿ ಉಲ್ಲೇಖ ಮಾಡಿರಬೇಕು ಎನ್ನಲಾಗ್ತಿದೆ. ಹಾಗೆಯೇ ಇತ್ತೀಚೆಗೆ ಜೀರ್ಣೋದ್ಧಾರವಾಗಿರುವ ಶ್ರೀ ಶಂಕರನಾರಾಯಣ ದೇವಸ್ಥಾನವನ್ನೇ ಈ ಹಿಂದೆ ಶಂಕರ ಎಂದು ಕರೆಯುತ್ತಿರಬಹುದು ಎಂಬುದು ಈ ಶಾಸನದಿಂದ ತಿಳಿದುಬರುತ್ತದೆ.