ಉಡುಪಿ: ಬ್ಲೂ ಫ್ಲ್ಯಾಗ್ ಮಾನ್ಯತೆ ಪಡೆದಿರುವ ಪಡುಬಿದ್ರಿ ಬೀಚ್ನ ಅಭಿವೃದ್ಧಿಗಾಗಿ ಮತ್ತು ಪ್ರವಾಸೋದ್ಯಮವನ್ನು ಉತ್ತೇಜಿಸುವ ದೃಷ್ಟಿಯಿಂದ ಖಾಸಗಿಯವರಿಗೆ ಅವಕಾಶ ನೀಡಲಿದ್ದೇವೆ ಎಂದು ಪ್ರವಾಸೋದ್ಯಮ ಸಚಿವ ಸಿ.ಪಿ. ಯೋಗೇಶ್ವರ್ ಹೇಳಿದರು.
ಉಡುಪಿ ಪಡುಬಿದ್ರಿಯ ಬ್ಲೂ ಫ್ಲ್ಯಾಗ್ ಬೀಚ್ ಪ್ರದೇಶಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ಪ್ರವಾಸಿಗರಿಗೆ ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುತ್ತೇವೆ. ಕರ್ನಾಟಕ ಕರಾವಳಿಯಲ್ಲಿ ಪ್ರವಾಸೋದ್ಯಮ ಕಾರಿಡಾರ್ ಸ್ಥಾಪಿಸುವ ಬಯಕೆಯಿದೆ. ಸಿಆರ್ಝೆಡ್ ನಿಯಮಗಳ ಸಡಿಲಿಕೆಯೂ ಆಗಲಿದೆ. ರಾಜ್ಯದಲ್ಲಿ ಪ್ರವಾಸೋದ್ಯಮವು ಕೇರಳ, ಗೋವಾಗಳಂತೆ ಅಭಿವೃದ್ಧಿಯಾಗಿಲ್ಲ. ಕೈಗಾರಿಕಾ ಸ್ಥಾನಮಾನದೊಂದಿಗೆ ಇದನ್ನು ನಾವು ಬೆಳೆಸಬೇಕಿದೆ ಎಂದರು.
ಪ್ರವಾಸೋದ್ಯಮ ನೀತಿಯಡಿ ಸಬ್ಸಿಡಿ ನೀಡಲಿದ್ದೇವೆ. ಹೆಲಿ ಟೂರಿಸಂಗೂ ಪ್ರಾಮುಖ್ಯತೆ ದೊರೆಯಲಿದೆ. ಸ್ಥಳೀಯರಿಗೆ ಉದ್ಯೋಗವಕಾಶ ನೀಡುವ ಉದ್ದೇಶದಿಂದ ಮುಖ್ಯಮಂತ್ರಿಗಳ ಬಳಿಯೂ ಈ ಕುರಿತಾಗಿ ಚರ್ಚಿಸುವುದಾಗಿ ಹೇಳಿದರು.