ತುಮಕೂರು: ಪ್ರಧಾನಮಂತ್ರಿ ಮೋದಿ ಅವರು ನಾನು ಭ್ರಷ್ಟಾಚಾರ ಮಾಡುವುದಿಲ್ಲ, ಭ್ರಷ್ಟಾಚಾರ ಮಾಡಲು ಬಿಡುವುದಿಲ್ಲ ಎಂದರು, ಆದರೆ ಮೊದಲು ತಾನು ಭಾರತದ ಪ್ರಧಾನಿ ಎಂಬುದನ್ನು ಮೋದಿ ಅರಿಯಬೇಕಿದೆ ಎಂದು ಸಮಾಜ ಪರಿವರ್ತನಾ ಸಮುದಾಯದ ಸಂಸ್ಥಾಪಕ ಅಧ್ಯಕ್ಷ ಎಸ್.ಆರ್ ಹಿರೇಮಠ ಹೇಳಿದರು.
ಈ ಬಗ್ಗೆ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆಯಲ್ಲಿ ಎಂತಹ ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ? ಅವರ ಹಿನ್ನೆಲೆಯೇನು? ಅಧಿಕಾರ ದುರುಪಯೋಗ, ಪಕ್ಷಪಾತದಿಂದ ಅನೇಕ ಅಧಿಕಾರದಲ್ಲಿರುವ ಬಹಳಷ್ಟು ರಾಜಕಾರಣಿಗಳು ಜೈಲಿನಲ್ಲಿರಬೇಕು, ಆದರೆ ಸಾರ್ವಜನಿಕರ ಮಧ್ಯೆ ಇರುವುದು ಬೇಸರದ ಸಂಗತಿಯಾಗಿದೆ ಎಂದರು.
ಇಂದಿನ ರಾಜಕೀಯ ತುಂಬಾ ಹದಗೆಟ್ಟಿರುವುದು ಎಲ್ಲರಿಗೂ ತಿಳಿದಿರುವ ವಿಷಯ, ಸಂವಿಧಾನದ ಆಶಯಗಳನ್ನು ಗಾಳಿಗೆ ತೂರಿದ್ದಾರೆ. ಪ್ರಾಮಾಣಿಕರು ಸಮಾಜ ಸೇವಕರು ಮಾತ್ರ ಸಾರ್ವಜನಿಕ ಜೀವನದಲ್ಲಿ ಇರಬೇಕು, ಚುನಾವಣೆ ಎಂಬುದು ಜನರಲ್ಲಿ ತಿಳುವಳಿಕೆ ಮೂಡಿಸಲು ಇರುವ ಅವಕಾಶ ಅದನ್ನು ಪ್ರತಿಯೊಬ್ಬರೂ ಸರಿಯಾಗಿ ಬಳಸಿಕೊಳ್ಳಬೇಕು ಎಂದು ಹೇಳಿದರು.
ಕೇಂದ್ರ ಚುನಾವಣಾ ಆಯೋಗ ಹಣವಿರುವವರಿಗೆ ಬೆಂಬಲ ನೀಡುವ ಮೂಲಕ ತಪ್ಪುಗಳನ್ನು ಮಾಡುತ್ತಿದ್ದು, ಜೂನ್ ನಂತರ ಯಾವುದೇ ಸರ್ಕಾರ ಬಂದರೂ ಪ್ರಯೋಜನವಾಗುವುದಿಲ್ಲ, ಹಾಗಾಗಿ ನಾವೆಲ್ಲರೂ ಜಾಗೃತರಾಗಿ ಮತದಾನ ಮಾಡಬೇಕಾಗಿದೆ. ಭಾರತದಲ್ಲಿ ತುರ್ತು ಪರಿಸ್ಥಿತಿಯಲ್ಲಿ ಇದ್ದಂತಹ ಸನ್ನಿವೇಶಕ್ಕಿಂತ ಇಂದು ನಾಲ್ಕು ಪಟ್ಟು ಗಂಭೀರ ಪರಿಸ್ಥಿತಿಗಳು ಎದುರಾಗಿವೆ. ಪ್ರಧಾನಿ ಮೋದಿ ಹೇಳಿದ್ದ ಯಾವ ಯೋಜನೆಗಳೂ ಸಾರ್ವಜನಿಕರಿಗೆ ತಲುಪಿಲ್ಲ, ಒಟ್ಟಾರೆ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಎಲ್ಲಾ ಪಕ್ಷದವರು ಹಾಳು ಮಾಡಿದ್ದಾರೆ ಎಂದು ದೂರಿದರು.
ರಾಜಕೀಯವು ಶುದ್ಧ ಮಾಡಲಾಗದಷ್ಟು ಭ್ರಷ್ಟಾಚಾರದ ಕೂಪದಲ್ಲಿ ಮುಳುಗಿವೆ, ಪ್ರಜಾಪ್ರಭುತ್ವ ನೀಡಿರುವ ಹಕ್ಕನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವ ಕೆಲ ರಾಜಕಾರಣಿಗಳು ತಮ್ಮ ಮಕ್ಕಳನ್ನು, ಮೊಮ್ಮಕ್ಕಳನ್ನು ಚುನಾವಣೆಗೆ ನಿಲ್ಲಿಸುವ ಮೂಲಕ ದೃತರಾಷ್ಟ್ರನ ಕಥೆಯಂತೆಯಾಗಿದ್ದು, ಈಗಲಾದರೂ ಹಿರಿಯರಾಗಿ ಜವಾಬ್ದಾರಿಯುತ ಕಾರ್ಯನಿರ್ವಹಿಸಬೇಕಿದೆ ಎಂದು ದೇವೇಗೌಡರ ಕುಟುಂಬದ ಬಗ್ಗೆ ಟೀಕಿಸಿದರು.