ತುಮಕೂರು : ಜಿಲ್ಲೆಯ ಬಿದರೆಗುಡಿ ಕಾವಲ್ನ ಐಸಿಎಆರ್ ಪ್ರಾಯೋಜಿತ ಕೃಷಿ ವಿಜ್ಞಾನ ಕೇಂದ್ರಕ್ಕೆ ದಿಢೀರ್ ಭೇಟಿ ನೀಡಿದ ಕೃಷಿ ಸಚಿವ ಬಿಸಿ ಪಾಟೀಲ್ ದಾಖಲೆಗಳ ಪರಿಶೀಲನೆ ನಡೆಸಿದರು.
ತಿಪಟೂರಿನಿಂದ ಅರಸೀಕೆರೆ ತಾಲೂಕು ದೊಡ್ಡಮೇಟಿಯ ಕುರ್ಕೆಗೆ ಹೋಗುವ ಮಾರ್ಗ ಮಧ್ಯೆ ಕೃಷಿ ವಿಜ್ಞಾನ ಕೇಂದ್ರಕ್ಕೆ ಭೇಟಿ ನೀಡಿ ಕಚೇರಿಯ ದಾಖಲೆಗಳು, ಸಿಬ್ಬಂದಿ ಹಾಜರಾತಿ ಪುಸ್ತಕ ಪರಿಶೀಲಿಸಿದರು.
ಈ ವೇಳೆ, ಕೃಷಿ ಕೇಂದ್ರದ ಮುಖ್ಯಸ್ಥ ಗೋವಿಂದೇಗೌಡರ ಗೈರು ಹಾಜರಿ ಬಗ್ಗೆ ಸಚಿವರು ಪ್ರಶ್ನಿಸಿದಾಗ ಗೋವಿಂದೇಗೌಡರು ಬೆಂಗಳೂರಿಗೆ ತೆರಳಿರುವುದಾಗಿ ಕಚೇರಿ ಸಿಬ್ಬಂದಿ ಮಾಹಿತಿ ನೀಡಿದರು. ಈ ವೇಳೆ, ಬೆಂಗಳೂರು ಕೃಷಿ ವಿವಿ ಕುಲಪತಿಗೆ ದೂರವಾಣಿ ಕರೆ ಮಾಡಿದ ಸಚಿವರು, ಗೋವಿಂದೇಗೌಡರ ಹಾಜರಾತಿ ಕುರಿತು ಮಾಹಿತಿ ಪಡೆದುಕೊಂಡರು. ಅಲ್ಲದೇ ಕಚೇರಿ ಸಿಬ್ಬಂದಿ ಗೈರು ಹಾಜರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಕಠಿಣ ಕ್ರಮ ತೆಗೆದುಕೊಳ್ಳುವ ಎಚ್ಚರಿಕೆ ನೀಡಿದರು.