ತುಮಕೂರು : ತುಮಕೂರು, ರಾಮನಗರ, ಹಾಸನ, ಬೆಂಗಳೂರು ಜಿಲ್ಲೆಯಲ್ಲಿ ಬೆಡ್ ಸಿಗದ ಬಡ ಕೊರೊನಾ ಸೋಂಕಿತರಿಗೆ ಜೀವದಾನ ನೀಡುವ ತಿಪಟೂರಿನ ಖಾಸಗಿ ಆಸ್ಪತ್ರೆಯೊಂದನ್ನು ಜನ ಹುಡುಕಿಕೊಂಡು ಬರುತ್ತಿದ್ದಾರೆ.
ತಿಪಟೂರು ನಗರದಲ್ಲಿರುವ ‘ಕುಮಾರ್ ಆಸ್ಪತ್ರೆ’ಯಲ್ಲಿ ಕೊರೊನಾ ಸೋಂಕಿತರಿಗೆ ವೈದ್ಯಕೀಯ ಸೇವೆ, ಆಕ್ಸಿಜನ್, ಔಷಧಿಗಳು, ಊಟ, ವಸತಿ ಎಲ್ಲವೂ ಉಚಿತವಾಗಿದೆ.
ವೈದ್ಯಕೀಯ ಸೇವೆ ಸಲ್ಲಿಸುತ್ತಿರುವ ಡಾ.ಶ್ರೀಧರ್ ಬಡ ಕೊರೊನಾ ಸೋಂಕಿತರಿಗೆ ದೇವರಂತೆ ಬಿಂಬಿತರಾಗಿದ್ದಾರೆ. ಡಾ.ಶ್ರೀಧರ್ ತಮ್ಮ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತರಿಗೆ ಪ್ರತ್ಯೇಕವಾಗಿ ಚಿಕಿತ್ಸೆ ನೀಡಲು 76 ಬೆಡ್ಗಳ ವ್ಯವಸ್ಥೆ ಮಾಡಿದ್ದಾರೆ.
ಇಲ್ಲಿ ದಾಖಲಾಗುವ ರೋಗಿಗಳಿಗೆ ಮತ್ತು ಅವರ ಜೊತೆ ಬರುವ ಸಂಬಂಧಿಕರಿಗೂ ಊಟ ಮತ್ತು ಉಪಹಾರದ ವ್ಯವಸ್ಥೆ ಮಾಡಿದ್ದಾರೆ. ನರ್ಸಿಂಗ್ ಸೇವೆ, ಆಕ್ಸಿಜನ್ಗೆ ಯಾವುದೇ ರೀತಿಯ ಶುಲ್ಕ ವಿಧಿಸುವುದಿಲ್ಲ. ಕೆಲವು ಔಷಧಿಗಳನ್ನು ಉಚಿತವಾಗಿ ನೀಡುತ್ತಿದ್ದಾರೆ. ಆಸ್ಪತ್ರೆಯಲ್ಲಿ 46 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.
ಬೆಂಗಳೂರು ಸೇರಿದಂತೆ ಜಿಲ್ಲೆಯ ತುರುವೇಕೆರೆ, ಚಿಕ್ಕನಾಯಕನಹಳ್ಳಿ, ಅರಸೀಕೆರೆ ತಾಲೂಕಿನಿಂದಲೂ ಹೆಚ್ಚು ಮಂದಿ ಕೊರೊನಾ ಸೋಂಕಿತರು ಚಿಕಿತ್ಸೆಗಾಗಿ ಬರುತ್ತಿದ್ದಾರೆ. ಮುಖ್ಯವಾಗಿ ಆಕ್ಸಿಜನ್ ಕೊರತೆ ಬರಲಿದೆ ಎಂಬ ವಿಷಯ ಅರಿತಿದ್ದ ಡಾ. ಶ್ರೀಧರ್, 60 ಸಿಲಿಂಡರ್ಗಳನ್ನು ಮೀಸಲಾಗಿರಿಸಿಕೊಂಡಿದ್ದರು.
ಇದೀಗ ಅವುಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಇಲ್ಲಿ ದಾಖಲಾಗಿರುವ ಸೋಂಕಿತರ ಬಳಿ ತೆರಳಿ ಚಿಕಿತ್ಸೆ ನೀಡುವ ಡಾ.ಶ್ರೀಧರ್ ಅವರು, ರೋಗಿಗಳು ಭಯಭೀತರಾಗದಂತೆ ಅವರಲ್ಲಿ ಆತ್ಮಸ್ಥೈರ್ಯ ತುಂಬಲು ಮುಖಕ್ಕೆ ಮಾಸ್ಕ್ ಹೊರತುಪಡಿಸಿ ಮತ್ತಾವುದೇ ಪಿಪಿಇ ಕಿಟ್ ಧರಿಸುವುದಿಲ್ಲ.
ಕೊರೊನಾ ಸೋಂಕಿತರಿಗೆ ಚಿಕಿತ್ಸೆ ಮುಖ್ಯವಾಗಿರುತ್ತದೆ. ಅಲ್ಲದೆ ಎಲ್ಲಾ ರೋಗಿಗಳಿಗೂ ಆಸ್ಪತ್ರೆಗೆ ಸೇರುವ ಅಗತ್ಯವಿರುವುದಿಲ್ಲ. ಮೊದಲ ವಾರದ ರೋಗಿಗಳನ್ನು ಹೋಂ ಐಸೋಲೇಷನ್ಗೆ ಕಳುಸಿದ್ದೇವೆ.
ಎರಡನೇ ವಾರ ಮುಂದುವರೆದ ರೋಗಿಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅಮೂಲ್ಯವಾದ ಜೀವಗಳಿಂದಲೇ ನಾವು ಬದುಕಲು ಸಾಧ್ಯ. ಹಾಗಾಗಿ, ಮುಂದಿನ 15 ದಿನಗಳ ಕಾಲ ಕೊರೊನಾವನ್ನು ಗೆಲ್ಲಬೇಕಿದೆ. ದುಡಿಯಲು ಸಾಕಷ್ಟು ಮಾರ್ಗಗಳಿವೆ.
ಈ ಸಂದರ್ಭ ದುಡಿಯುವುದಕ್ಕಲ್ಲ. ಪ್ರಸ್ತುತ ಮನುಷ್ಯರ ಜೀವ ಮುಖ್ಯವಾಗುತ್ತದೆ. ಶೇ.80ರಷ್ಟು ಮಂದಿ ವೈದ್ಯರು ಚಿಕಿತ್ಸೆ ನೀಡುವುದೇ ಅವರಿಗೆ ಮುಖ್ಯವಾಗಿರುತ್ತದೆ. ಇದು ಹಣ ಮಾಡುವ ಸಮಯವಲ್ಲ.
ತುಮಕೂರು ಜಿಲ್ಲೆಯು ರಾಜ್ಯದಲ್ಲಿಯೇ ಎರಡನೇ ಅತಿ ಹೆಚ್ಚು ಸೋಂಕಿತರು ಇರುವ ಜಿಲ್ಲೆಯಾಗಿದೆ. ಚಿಕಿತ್ಸೆಗೆ ಮೊದಲ ಆದ್ಯತೆ ನೀಡಬೇಕಿದೆ ಎಂದು ಡಾ. ಶ್ರೀಧರ್ ತಿಳಿಸಿದ್ದಾರೆ.