ತುಮಕೂರು: ಕಲ್ಪತರು ನಾಡು ತುಮಕೂರು ಜಿಲ್ಲೆ ಬಹುತೇಕ ಬಯಲುಸೀಮೆ ಪ್ರದೇಶವನ್ನು ಒಳಗೊಂಡಿದೆ. ಇತ್ತೀಚಿನ ದಿನಗಳಲ್ಲಿ ಹವಾಮಾನ ವೈಪರೀತ್ಯದಿಂದ ರೈತರು ತಮ್ಮ ಸಾಂಪ್ರದಾಯಿಕ ಬೆಳೆಗಳನ್ನು ಬಿಟ್ಟು ಪರ್ಯಾಯ ಬೆಳೆಗಳತ್ತ ಆಸಕ್ತಿ ತಳೆದಿದ್ದಾರೆ. ಇದಕ್ಕೊಂದು ಉತ್ತಮ ಉದಾಹರಣೆ ಎಂದರೆ ರೈತರು ಮೆಕ್ಕೆಜೋಳ ಬೆಳೆಯುವ ಬದಲು ನೆಲೆಗಡಲೆ ಬೆಳೆಯುವತ್ತ ಆಸಕ್ತಿ ತೋರುತ್ತಿರುವುದು.
ಜಿಲ್ಲೆಯ ಕೊರಟಗೆರೆ ಮತ್ತು ಮಧುಗಿರಿ ತಾಲೂಕಿನ ಬಹುಭಾಗದಲ್ಲಿ ನಿರಂತರವಾಗಿ ಮೆಕ್ಕೆಜೋಳ ಬೆಳೆಯಲಾಗುತ್ತಿತ್ತು. ಕಳೆದ ವರ್ಷ 32 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ ಬೆಳೆಯ ಗುರಿ ಹೊಂದಲಾಗಿತ್ತು.ಆದರೆ, ಕೇವಲ 16,000 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆ ಮಾಡಲಾಗಿತ್ತು. ನಿರೀಕ್ಷೆಯಂತೆ ಮಳೆಯಾಗದ ಹಿನ್ನೆಲೆಯಲ್ಲಿ ಇಳುವರಿ ಕೂಡಾ ಗಣನೀಯ ಪ್ರಮಾಣದಲ್ಲಿ ಕುಸಿತವಾಗಿತ್ತು. ಇದರೊಂದಿಗೆ ಕನಿಷ್ಠ ಮೂರು ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಸೈನಿಕ ಹುಳು ಕಾಟದಿಂದ ಮೆಕ್ಕೆಜೋಳ ರೈತರ ಕೈಗೆ ಸಿಗದಂತಂತಾಗಿ ಅಪಾರ ಪ್ರಮಾಣದ ನಷ್ಟ ಉಂಟಾಗಿತ್ತು.
ಹೀಗಾಗಿ ಈ ಭಾಗದಲ್ಲಿ ಎಂದೂ ಕೂಡ ನೆಲಗಡಲೆಯನ್ನು ಬೆಳೆಯದ ರೈತರು ಈ ವರ್ಷ ಬಿತ್ತನೆ ಬೀಜಕ್ಕಾಗಿ ಕೃಷಿ ಇಲಾಖೆಯತ್ತ ಮುಗಿಬೀಳುತ್ತಿದ್ದಾರೆ. ಅಲ್ಲದೇ ಮೆಕ್ಕೆಜೋಳ ಪಡೆಯುವಂತೆ ರೈತರಲ್ಲಿ ಅರಿವು ಮೂಡಿಸಿದರೂ ಸಂಪೂರ್ಣ ನಿರಾಕರಿಸುತ್ತಿದ್ದಾರೆ. ಕಳೆದ ವರ್ಷ ಕೇವಲ 16 ಸಾವಿರ ಹೆಕ್ಟೇರ್ನಲ್ಲಿ ಬೆಳೆಯಲಾಗಿದ್ದ ಮೆಕ್ಕೆಜೋಳದ ಪ್ರಮಾಣ ಗಣನೀಯ ಪ್ರಮಾಣದಲ್ಲಿ ಕುಸಿಯುವ ಸಾಧ್ಯತೆ ಇದೆ.
ದಶಕದಿಂದ ಸಂಪ್ರದಾಯದ ಬೆಳೆಯಾಗಿ ಅಳವಡಿಸಿಕೊಂಡಿದ್ದ ಮೆಕ್ಕೆಜೋಳ ತಿರಸ್ಕರಿಸಿ ನೆಲಗಡಲೆ ಬೆಳೆಯಲು ಮುಂದಾಗಿರುವುದು ಒಂದು ರೀತಿ ಎಣ್ಣೆಕಾಳು ಬೆಳೆಗಳು ಉತ್ತಮ ಪ್ರಮಾಣದಲ್ಲಿ ಮಾರುಕಟ್ಟೆಗೆ ಲಗ್ಗೆ ಇಡಲಿದೆ. ಇದರಿಂದ ರೈತರೂ ಕೂಡ ಉತ್ತಮ ಬೆಲೆ ಸಿಗಲಿದೆ ಎಂಬ ಆಶಾ ಭಾವನೆ ಹೊಂದಿದ್ದಾರೆ. ಆದರೆ ರೈತರು ವರುಣನ ಆಟಾಟೋಪದಿಂದ ತಪ್ಪಿಸಿಕೊಳ್ಳಲು ಆರ್ಥಿಕವಾಗಿ ಸದೃಢರಾಗಲು ಬೆಳೆ ಪದ್ಧತಿಯನ್ನೇ ಬದಲಾಯಿಸಿರುವುದು ನಿಜಕ್ಕೂ ಅಚ್ಚರಿ ತಂದಿದೆ.