ತುಮಕೂರು : ನಗರದಲ್ಲಿ ಬೆರಳೆಣಿಕೆಯ ಉದ್ಯಾನವನಗಳಿದ್ದರು ಅವುಗಳು ಸರಿಯಾದ ರೀತಿಯಲ್ಲಿ ನಿರ್ವಹಣೆಯಾಗದೆ ಅನೇಕ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿವೆ. ಅವುಗಳಲ್ಲಿ ವೀರ ಸಾವರ್ಕರ್ ಉದ್ಯಾನವನವೂ ಒಂದು.
ಮಹಾನಗರ ಪಾಲಿಕೆಯ 15ನೇ ವಾರ್ಡ್ಗೆ ಸೇರುವ ಈ ಉದ್ಯಾನವನದಲ್ಲಿ ಪ್ರತಿದಿನ ಬೆಳಗ್ಗೆ ಹಾಗೂ ಸಂಜೆ ಹಿರಿಯರು, ಕಿರಿಯರು ಎನ್ನದೆ ಎಲ್ಲರೂ ಸಹ ವಾಕಿಂಗ್ ಮಾಡಲು ಬರುತ್ತಾರೆ. ಆರಂಭದಲ್ಲಿ ಚನ್ನಾಗಿದ್ದ ಉದ್ಯಾನವನ ಈಗ ಕುಡುಕರ ಸಾಮ್ರಾಜ್ಯವಾಗಿದೆ. ಇದರಿಂದಾಗಿ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ.
ಇನ್ನು ಪಾರ್ಕ್ನಲ್ಲಿ ವಿದ್ಯುತ್ ವ್ಯವಸ್ಥೆ ಹದಗೆಟ್ಟಿದ್ದು, ಹೆಸರಿಗಷ್ಟೇ ಲೈಟ್ ಅಳವಡಿಸಲಾಗಿದೆ. ಅವುಗಳನ್ನೂ ಕೆಲ ಕಿಡಿಗೇಡಿಗಳು ಕಿತ್ತು ಹಾಕಿದ್ದಾರೆ. ಸಂಜೆ ವೇಳೆ ಇಲ್ಲಿಗೆ ವಾಕಿಂಗ್ ಮಾಡಲು ಬರುವ ಸಾರ್ವಜನಿಕರು ಸರಿಯಾದ ಬೆಳಕಿನ ವ್ಯವಸ್ಥೆ ಇಲ್ಲದೆ ಪರದಾಡುವಂತಾಗಿದೆ. ಜೊತೆಗೆ ಕುಡುಕರ ಹಾವಳಿ. ಇದರಿಂದಾಗಿ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಇಲಾಖೆಯವರು ಗಮನಹರಿಸಿ ಸಮಸ್ಯೆ ಬಗೆಹರಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.