ತುಮಕೂರು:ರಾಜ್ಯಕ್ಕೆ ಹೇಮಾವತಿ ಮತ್ತು ಕೃಷ್ಣಾ ನದಿ ನೀರು ಹಂಚಿಕೆಯಲ್ಲಿ ಬಹುದೊಡ್ಡ ಕೊಡುಗೆ ನೀಡಿರುವುದರಲ್ಲಿ ಮಾಜಿ ಪ್ರಧಾನಿ ದೇವೇಗೌಡರ ಪಾತ್ರ ಸಾಕಷ್ಟಿದೆ ಎಂದು ಪಟ್ಟನಾಯಕನಹಳ್ಳಿ ಶ್ರೀ ಮಠದ ನಂಜಾವಧೂತ ಸ್ವಾಮೀಜಿ ಅಭಿಪ್ರಾಯಪಟ್ಟಿದ್ದಾರೆ.
ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಹೇಮಾವತಿ ನದಿ ನೀರಿನ ಕುರಿತು ಮಾಜಿ ಪ್ರಧಾನಿ ದೇವೇಗೌಡರ ಹೋರಾಟ ಒಂದು ರೀತಿ ನಿರ್ವಿವಾದವಾಗಿದೆ. ಹೀಗಾಗಿ ಪದೇ ಪದೆ ನೀರಾವರಿ ಕುರಿತು ಹೇಳಿಕೆ ನೀಡುವುದು ಸರಿಯಲ್ಲ ಎಂದಿದ್ದಾರೆ. ಹಾಸನ ಜಿಲ್ಲೆಯ ಅರಸೀಕೆರೆ ಚನ್ನರಾಯಪಟ್ಟಣ ಮತ್ತು ಹೊಳೆನರಸೀಪುರ ಅರಕಲಗೂಡಿನ ಬಹು ಭಾಗಕ್ಕೆ ಇಂದು ಪೂರಕವಾದ ನೀರು ಲಭ್ಯವಾಗಿಲ್ಲ. ಹೇಮಾವತಿ ಜಲಾಶಯದಿಂದ ಹಾಸನ ಜಿಲ್ಲೆಗೆ ಕೇವಲ 8 ಟಿಎಂಸಿ ನೀರನ್ನು ಉಪಯೋಗಿಸಲಾಗುತ್ತಿದೆ. ಆದರೆ, ತುಮಕೂರು ಜಿಲ್ಲೆಗೆ 24 ಟಿಎಂಸಿ ನೀರನ್ನು ಜಲಾಶಯದಿಂದ ಚಾನಲ್ಗಳ ಮೂಲಕ ಹರಿಸಲಾಗುತ್ತಿದೆ ಎಂದು ಸ್ವಾಮೀಜಿ ಸಮರ್ಥನೆ ನೀಡಿದ್ದಾರೆ.
ಗೊರೂರಿನಲ್ಲಿ ಹೇಮಾವತಿ ಜಲಾಶಯ ಹೊಂದಿರುವ ಅರಕಲಗೂಡು ತಾಲೂಕಿನ ಬಹುತೇಕ ಭಾಗಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲು ಸಾಧ್ಯವಾಗುತ್ತಿಲ್ಲ. ಆದ್ರೆ ಶಿರಾ, ಕೋರಟಗೆರೆ, ಮಧುಗಿರಿ ತಾಲೂಕಿಗೆ ಹೇಮಾವತಿ ನದಿ ನೀರು ಹರಿಸಲಾಗುತ್ತಿದೆ. ಹೇಮಾವತಿ ಜಲಾಶಯ ಹೊಂದಿರುವಂತಹ ಹಾಸನ ಜಿಲ್ಲೆ ಜನರ ವಿರೋಧದ ಮಧ್ಯೆಯೂ ಕೂಡ ತುಮಕೂರು ಜಿಲ್ಲೆಯ ಜನರಿಗೆ ನೀರು ಹರಿಸಿರುವುದು ದೇವೇಗೌಡರ ಬಹುದೊಡ್ಡ ಕೊಡುಗೆಯಾಗಿದೆ. ಇದನ್ನು ನಾವು ಎಂದಿಗೂ ಮರೆಯುವಂತಿಲ್ಲ ಎಂದು ಗೌಡರ ಸಾಧನೆಯನ್ನು ಸ್ವಾಮೀಜಿಗಳು ಸ್ಮರಿಸಿಕೊಂಡಿದ್ದಾರೆ.