ತುಮಕೂರು: 2ಎ ಪ್ರವರ್ಗದಲ್ಲಿ ಸೇರಲು ಸರ್ಕಾರದ ಮೇಲೆ ಒತ್ತಡ ತರುವಂತಹ ಕೆಲಸಕ್ಕೆ ಪಂಚಮಸಾಲಿ ಜನಾಂಗದವರು ಮುಂದಾಗಬಾರದು ಎಂದು ಹಿಂದುಳಿದ ವರ್ಗಗಳ ಮಾಜಿ ಅಧ್ಯಕ್ಷ ಸಿ.ಎಸ್.ದ್ವಾರಕಾನಾಥ್ ಆಗ್ರಹಿಸಿದ್ದಾರೆ.
ನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಕುಲಶಾಸ್ತ್ರೀಯ ಅಧ್ಯಯನದ ಪ್ರಕಾರ ವೈಜ್ಞಾನಿಕವಾಗಿ ಮೀಸಲಾತಿಯನ್ನು ವರ್ಗೀಕರಿಸಲಾಗಿದೆ. ಮೀಸಲಾತಿಗಾಗಿ 2ಎ ಪ್ರವರ್ಗಕ್ಕೆ ಪಂಚಮಸಾಲಿಗಳು ಬರಲು ಸಾಧ್ಯವಿಲ್ಲ. 2ಎ ಪ್ರವರ್ಗದಲ್ಲಿ ಕುಶಲಕರ್ಮಿಗಳು ಸಮುದಾಯಗಳು ಸೇರ್ಪಡೆಯಾಗಿವೆ ಎಂದರು.
ಮಡಿವಾಳ, ತಿಗಳರು, ದೇವಾಂಗ ಸಮುದಾಯದವರು ಕುಲವೃತ್ತಿಗಳನ್ನು ಆಶ್ರಯಿಸಿದವರಾಗಿದ್ದಾರೆ. ಆದರೆ, ಪಂಚಮಸಾಲಿ ಜನಾಂಗದವರು ನಾವು ಕೃಷಿಕ ಸಮುದಾಯ ಎಂದು ಹೇಳುತ್ತಿದ್ದು, ಈಗಾಗಲೇ ಅವರುಗಳಿಗೆ 3ಎ ಮತ್ತು 3ಬಿನಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಈಗಾಗಲೇ ಅತಿ ಹಿಂದುಳಿದ, ಮಧ್ಯಮ ಹಿಂದುಳಿದ ವರ್ಗದವರು ಎಂದು ವರ್ಗೀಕರಿಸಲಾಗಿದೆ. ಇನ್ನು 2ಎನಲ್ಲಿ ಸಮರ್ಪಕವಾಗಿ ಸೌಲಭ್ಯಗಳು ಅಲ್ಲಿರುವಂತಹ ಜಾತಿಗಳಿಗೆ ಸಿಗುತ್ತಿಲ್ಲ. ಇಂತಹ ಗೊಂದಲಗಳ ನಡುವೆ ಪಂಚಮಸಾಲಿ ಜನಾಂಗದವರು 2ಎ ನಲ್ಲಿ ಬರಬಾರದು ಎಂದರು.