ತುಮಕೂರು: ಬರ ಪರಿಸ್ಥಿತಿ ವೇಳೆ ಸಮಗ್ರ ಕೃಷಿ ಪದ್ದತಿ ಮೂಲಕ ಸ್ವಸಹಾಯ ಗುಂಪಿನ ಮಹಿಳಾ ಸದಸ್ಯರಿಗೆ ಆರ್ಥಿಕ ನೆರವು ನೀಡುವ ಮಹತ್ವದ ಯೋಜನೆಯೊಂದಕ್ಕೆ ತುಮಕೂರು ಜಿಲ್ಲೆಯಿಂದ ಚಾಲನೆ ದೊರೆಯುತ್ತಿದೆ.
ಜಿಲ್ಲೆಯಲ್ಲಿ ಈ ಯೋಜನೆಗೆ ಬರುವ 10 ದಿನಗಳೊಳಗೆ ಚಾಲನೆ ದೊರೆಯಲಿದೆ. ಸ್ವಸಹಾಯ ಗುಂಪಿನಲ್ಲಿ ಸದಸ್ಯತ್ವ ಪಡೆದ ರೈತ ಮಹಿಳೆಯರು ಈ ಸೌಲಭ್ಯ ಪಡೆದುಕೊಳ್ಳಲಿದ್ದಾರೆ. ವರ್ಷದ 365 ದಿನಗಳ ಕಾಲ ಅಳವಡಿಸಿಕೊಳ್ಳಬಹುದಾದ ಈ ಸಮಗ್ರ ಕೃಷಿ ಪದ್ಧತಿಯಿಂದ ರೈತರ ಆದಾಯ ದ್ವಿಗುಣವಾಗಲಿದೆ. ಸಮಗ್ರ ಕೃಷಿ ಪದ್ಧತಿಯಡಿ ಕೃಷಿಯೊಂದಿಗೆ ಕೃಷಿಗೆ ಸಂಬಂಧಿಸಿದ ತೋಟಗಾರಿಕೆ, ಪಶುಸಂಗೋಪನೆ, ಹೈನುಗಾರಿಕೆ, ಕುರಿ/ಕೋಳಿ ಸಾಕಾಣಿಕೆ, ಮೀನು ಕೃಷಿ, ಜೇನು ಕೃಷಿ, ರೇಷ್ಮೆ, ಅರಣ್ಯೀಕರಣ, ಮತ್ತಿತರ ಚಟುವಟಿಕೆಗಳನ್ನು ಕೈಗೊಳ್ಳಬಹುದಾಗಿದೆ.
ರೈತ ಮಹಿಳೆಯರು 1 ಎಕರೆ ಜಮೀನು ಹೊಂದಿದ್ದರೂ ಸಹ ಯೋಜನೆಯ ಫಲಾನುಭವಿಯಾಗಬಹುದು. ಮಣ್ಣಿನ ಆರೋಗ್ಯ, ಮಳೆ ನೀರಿನ ಸಂಗ್ರಹಣೆ, ನೀರಿನ ಸದ್ಬಳಕೆ ಹಾಗೂ ಮರುಬಳಕೆ, ಕೃಷಿ ತ್ಯಾಜ್ಯದ ವಸ್ತುಗಳ ಸಂಗ್ರಹಣೆ/ಸದ್ಬಳಕೆ, ಪ್ರತಿ ಕೃಷಿ ಚಟುವಟಿಕೆ ಬಗ್ಗೆ ಲೆಕ್ಕ-ಪತ್ರ ನಿರ್ವಹಣೆ, ಚಟುವಟಿಕೆಯಿಂದಾದ ಲಾಭ-ನಷ್ಟದ ವರದಿ ತಯಾರಿಕೆ ಬಗ್ಗೆ ತರಬೇತಿ ನೀಡಲಾಗುವುದು.
ಸಮಗ್ರ ಕೃಷಿ ಪದ್ಧತಿ ಅಳವಡಿಕೆಗೆ ಸಂಬಂಧಿಸಿದಂತೆ ಕೃಷಿ ತಜ್ಞರು ಮಾದರಿಯನ್ನು ತಯಾರಿಸಿದ್ದು, ಇದರಲ್ಲಿ ಕಡಿಮೆ/ಅಧಿಕ ನೀರಿನ ಲಭ್ಯತೆಯಿದ್ದಲ್ಲಿ ಯಾವ ಬೆಳೆ ಬೆಳೆಯಬೇಕು? ಬಹು ವಾರ್ಷಿಕ ಬೆಳೆ, ಮಿಶ್ರ ಬೆಳೆ ಪದ್ಧತಿಯಿಂದಾಗುವ ಲಾಭದ ಬಗ್ಗೆ ಮಾಹಿತಿ ನೀಡಲಾಗಿದೆ.
ಈ ಯೋಜನೆಗೆ ಸರ್ಕಾರದ ಯೋಜನಾನುದಾನವನ್ನು ಉಪಯೋಗಿಸಿಕೊಳ್ಳಲಾಗುವುದು. ನಬಾರ್ಡ್, ಬ್ಯಾಂಕ್, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ(ಸಂಜೀವಿನಿ), ಮತ್ತಿತರ ಹಣಕಾಸು ಸಂಸ್ಥೆಗಳ ಮೂಲಗಳಿಂದ ನೀಡಲಾಗುವ ಅನುದಾನವನ್ನು ಬಳಸಿಕೊಳ್ಳಲಾಗುವುದು.
ಜಿಲ್ಲೆಯ ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಳ್ಳಲಿಚ್ಛಿಸುವ ಸ್ವಸಹಾಯ ಗುಂಪಿನ ರೈತ ಮಹಿಳೆಯರಿಗೆ 75000 ರೂ.ಗಳ ಆರ್ಥಿಕ ನೆರವು ನೀಡಲು ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ ನಿರ್ಧರಿಸಿದೆ. ಆರ್ಥಿಕ ನೆರವನ್ನು ಸದುಪಯೋಗಪಡಿಸಿಕೊಂಡು ಕೃಷಿ ಹಾಗೂ ಕೃಷಿಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಆರ್ಥಿಕವಾಗಿ ಸಶಕ್ತರಾಗಲು ರೈತ ಮಹಿಳೆಯರಿಗೆ ಉತ್ತೇಜನ ನೀಡಲಾಗುವುದು ಅಲ್ಲದೆ ಅವರು ಉತ್ಪಾದಿಸಿದ ಉತ್ಪನ್ನಗಳಿಗೆ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಿಕೊಡಲಾಗುವುದು.