ತುಮಕೂರು: ಸ್ಕಾರ್ಪಿಯೋ ವಾಹನದಲ್ಲಿ ಹೋಗುತ್ತಿದ್ದ ಯುವಕ-ಯುವತಿ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿ, ಯುವಕನನ್ನು ಭೀಕರವಾಗಿ ಹತ್ಯೆ ಮಾಡಿದ್ದಾರೆ. ಕೊರಟಗೆರೆ ತಾಲೂಕಿನ ಜಿ. ನಾಗೇನಹಳ್ಳಿ ಬಳಿ ಈ ಘಟನೆ ನಡೆದಿದೆ.
ವಿುಡಿಗೇಶಿಯ ಬಿದರಕೆರೆ ಗ್ರಾಮದ ಶೀನಿವಾಸ್ (27) ತಲೆ ಸಂಪೂರ್ಣವಾಗಿ ಜಿಜ್ಜಿ ಹೋಗಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಇವರು ಮಧುಗಿರಿಯಿಂದ ಬೆಂಗಳೂರಿನತ್ತ ಸ್ಕಾರ್ಪಿಯೋ ವಾಹನದಲ್ಲಿ ತೆರಳುವಾಗ, ದುಷ್ಕರ್ಮಿಗಳು ಹಿಂಬಾಲಿಸಿ ದಾಳಿ ಮಾಡಿದ್ದಾರೆ. ಇದರಿಂದಾಗಿ ಸ್ಕಾರ್ಪಿಯೋ ವಾಹನ ಕೂಡ ಜಖಂಗೊಂಡಿದೆ. ಘಟನೆಯಿಂದ ಯುವತಿ ಬೆಚ್ಚಿಬಿದ್ದಿದ್ದು, ಕೊರಟಗೆರೆ ಪೊಲೀಸರ ವಶದಲ್ಲಿದ್ದಾಳೆ. ಪೊಲೀಸರು ಈ ಪ್ರಕರಣ ಕುರಿತಂತೆ ಇನ್ನಷ್ಟು ಮಾಹಿತಿ ಕಲೆ ಹಾಕುತ್ತಿದ್ದಾರೆ.
ಪೊಲೀಸ್ ಮೂಲಗಳ ಪ್ರಕಾರ ನಾಲ್ವರು ದುಷ್ಕರ್ಮಿಗಳು ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೆಂದು ಮಾಹಿತಿ ಲಭ್ಯವಾಗಿದೆ. ಕೊರಟಗೆರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸುತ್ತಿದ್ದಾರೆ.