ಶಿವಮೊಗ್ಗ : ಸೊರಬದ ಹಾಲಿ ಶಾಸಕ ಕುಮಾರ ಬಂಗಾರಪ್ಪನವರ ವಿರುದ್ಧ ಬಿಜೆಪಿ ಪಕ್ಷದವರೇ ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ. ಕುಮಾರ ಬಂಗಾರಪ್ಪನವರನ್ನು ಗೆಲ್ಲಿಸಿ ನಾವು ತಪ್ಪು ಮಾಡಿದ್ವಿ ಎಂದು ಬಿಜೆಪಿಯ ಹಿರಿಯ ಮುಖಂಡ ಪದ್ಮನಾಭ್ ಭಟ್ ಸೊರಬದಲ್ಲಿ ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ.
ಇಂದು ಸೊರಬದಲ್ಲಿ ಮೂಲ ಬಿಜೆಪಿಯವರು ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮ ದಿನಾಚರಣೆ ಅಂಗವಾಗಿ ನಮೋ ವೇದಿಕೆಯಿಂದ ಬೈಕ್ ರ್ಯಾಲಿ ನಡೆಸಿದ ಮೂಲ ಬಿಜೆಪಿಗರು ಗಿರಿಜಾ ಶಂಕರ ಸಭಾಭವನದಲ್ಲಿ ಪ್ರತ್ಯೇಕ ಕಾರ್ಯಕ್ರಮ ನಡೆಸಿದರು. ಇದಕ್ಕೂ ಮುನ್ನ ಶಾಸಕ ಕುಮಾರ್ ಬಂಗಾರಪ್ಪ ಮೋದಿ ಅವರ ಹುಟ್ಟುಹಬ್ಬವನ್ನು ಪಕ್ಷದ ವೇದಿಕೆಯಲ್ಲಿ ಆಚರಿಸಿದರು.
ಮತ್ತೊಂದು ಕಡೆ ಮೂಲ ಬಿಜೆಪಿಗರು ಪ್ರತ್ಯೇಕ ವೇದಿಕೆ ಕಾರ್ಯಕ್ರಮ ನಡೆಸಿದರು. ಈ ವೇಳೆ ಮಾತನಾಡಿದ ತಾಲೂಕಿನ ಹಿರಿಯ ಬಿಜೆಪಿ ಮುಖಂಡ ಪದ್ಮನಾಭ್ ಭಟ್, ಶಾಸಕರ ವಿರುದ್ಧ ಹರಿಹಾಯ್ದರು. ಕುಮಾರ್ ಬಂಗಾರಪ್ಪ ತಮ್ಮ ಹೆತ್ತವರಾದ ಬಂಗಾರಪ್ಪ ಹಾಗೂ ಶಕುಂತಲ ಬಂಗಾರಪ್ಪನವರನ್ನು ಮಧ್ಯರಾತ್ರಿ ಮನೆಯಿಂದ ಹೊರ ಹಾಕಿದ್ದರು. ಹೀಗೆ ಹೆತ್ತವರನ್ನು ಮನೆಯಿಂದ ಹೊರ ಹಾಕಿದವರು ಕಾರ್ಯಕರ್ತರನ್ನು ಹೇಗೆ ನೋಡಿ ಕೊಳ್ಳುತ್ತಾರೆ ಎಂದು ಕಿಡಿಕಾರಿದರು.
ನಮ್ಮ ಹಿರಿಯರು ಟಿಕೆಟ್ ಕೊಟ್ಟರು ನಾವು ಗೆಲ್ಲಿಸಿದ್ವಿ. ಅದಕ್ಕೆ ಶಾಸಕರು ನಮಗೆ ಈ ರೀತಿ ಮಾಡುತ್ತಿದ್ದಾರೆ ಎಂದು ತೀವ್ರ ಆಕ್ರೋಶ ಹೊರ ಹಾಕಿದರು. ಕಾರ್ಯಕ್ರಮದಲ್ಲಿ ಬಿಜೆಪಿಯ ಹಲವು ಮುಖಂಡರು ಹಾಜರಿದ್ದರು.
ಇದನ್ನೂ ಓದಿ : ಪ್ರಧಾನಿ ಜನ್ಮದಿನ ಹಿನ್ನೆಲೆ: ರಕ್ತದಾನ ಮಾಡಿ ಶುಭಾಶಯ ಕೋರಿದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ