ಶಿವಮೊಗ್ಗ: ಮಧ್ಯಕರ್ನಾಟಕ ದಾವಣಗೆರೆಗೆ ಸಚಿವ ಸ್ಥಾನದ ಅವಶ್ಯಕತೆ ಇದೆ. ಮುಂದಿನ ದಿನಗಳಲ್ಲಿ ಮಂತ್ರಿ ಸ್ಥಾನ ಸಿಗಬಹುದು ಎಂಬ ನಿರೀಕ್ಷೆಯಿದೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದ್ದಾರೆ.
ಜಿಲ್ಲೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸದ್ಯ ನಮ್ಮ ಜಿಲ್ಲೆಯ ಉಸ್ತುವಾರಿ ಸಚಿವರಾದ ಈಶ್ವರಪ್ಪನವರು ಜಿಲ್ಲೆಯ ಅಭಿವೃದ್ದಿಗೆ ಶ್ರಮಿಸುತ್ತಿದ್ದಾರೆ. ನಿಮ್ಮ ಜಿಲ್ಲೆಯವರೇ ಉಸ್ತುವಾರಿ ವಹಸಿಕೊಳ್ಳಿ ಎಂದು ಹೇಳುತ್ತಿರುತ್ತಾರೆ. ನಾನು ಎಂದೂ ನನಗೆ ಸಚಿವ ಸ್ಥಾನ ನೀಡಿ ಎಂದು ಕೇಳಿಲ್ಲ. ಜಿಲ್ಲೆಯ ಎಲ್ಲಾ ಶಾಸಕರು ಸಹ ಸಚಿವರಾಗುವ ಅರ್ಹತೆಯನ್ನು ಹೊಂದಿದ್ದಾರೆ. ಇದರಿಂದ ದಾವಣಗೆರೆ ಜಿಲ್ಲೆಯ ಯಾರಿಗೆ ಸಚಿವ ಸ್ಥಾನ ನೀಡಿದರೂ ಸಹ ಸ್ವಾಗತಾರ್ಹ ಎಂದರು.
ನನ್ನ ಮಾತೃ ಜಿಲ್ಲೆ ಶಿವಮೊಗ್ಗದ ಜೊತೆ ಇಂದಿಗೂ ಸಂಬಂಧ ಮುಂದುವರೆದಿದೆ. ನಾನು ಆಡಳಿತಾತ್ಮಕವಾಗಿ ಮಾತ್ರ ದಾವಣಗೆರೆ ಜಿಲ್ಲೆಯಲ್ಲಿದ್ದೇನೆ. ಆದರೆ ಮಾನಸಿಕವಾಗಿ ಈಗಲೂ ಶಿವಮೊಗ್ಗ ಜಿಲ್ಲೆಯವನೇ ಎಂದರು.