ಶಿವಮೊಗ್ಗ: ರಾಷ್ಟ್ರಕೂಟರ ಕಾಲದ ಅಪರೂಪದ ಎಮ್ಮೆ ಶಿಲ್ಪದ ತುರುಗೋಳು ವೀರಗಲ್ಲು ತಾಲೂಕಿನ ಗುಡ್ಡದ ಹರಕೆರೆ ಗ್ರಾಮದ ಬಳಿ ಪತ್ತೆಯಾಗಿದೆ.
ಕ್ರಿ.ಶ. 963 ರ 10 ನೇ ಶತಮಾನದ ಕನ್ನರದೇವನ ಕಾಲದ್ದು ಎನ್ನಲಾದ ವೀರಗಲ್ಲು ಇದಾಗಿದೆ. ಅಪರೂಪದ ಈ ವೀರಗಲ್ಲನ್ನು ಶಿವಮೊಗ್ಗ ಪುರಾತತ್ವ ಸಂಗ್ರಹಾಲಯ ಮತ್ತು ಪಾರಂಪರಿಕ ಇಲಾಖೆಯ ನಿರ್ದೇಶಕ ಶೇಜೇಶ್ವರ್ ಅವರು ಕ್ಷೇತ್ರ ಕಾರ್ಯ ಕೈಗೊಂಡಾಗ ಇದು ಪತ್ತೆಯಾಗಿದೆ.
ವೀರಗಲ್ಲಿನ ವಿಶೇಷತೆ: ಇದು 262 ಸೆಂ.ಮೀ. ಉದ್ದ ಹಾಗೂ 95 ಸೆಂ.ಮೀ ಅಗಲವಾಗಿದೆ. ಇದರಲ್ಲಿ ನಾಲ್ಕು ಸಾಲುಗಳಿದ್ದು, ವೀರಗಲ್ಲು ಸ್ಥಾಪನೆಯ ಬಗ್ಗೆ ವಿವರಿಸಲಾಗಿದೆ.
ಕೆಳಗಿನ ಪಟ್ಟಿಕೆ: ವೀರನಾದ ಅರಿಗೆರೆಯ ನಾಡಗಾವುಂಡನ ತಮ್ಮ 'ಬೆಟ್ಟುಗ'ನ ಹಿಂದೆ ಐದು ಎಮ್ಮೆಗಳ ಶಿಲ್ಪಗಳಿದ್ದು, ಈ ವೀರನು ಬಿಲ್ಲು ಬಾಣಗಳನ್ನು ಹಿಡಿದು ಆರು ಜನ ಶತ್ರುಗಳ ವಿರುದ್ಧ ಹೋರಾಡುತ್ತಿರುವುದು ಕಂಡು ಬರುತ್ತದೆ.


ಇದನ್ನೂ ಓದಿ: ಕೇಂದ್ರ ಸಚಿವರ ಎದುರೇ ಕೈ ಶಾಸಕ - ಪಾಲಿಕೆ ಮಾಜಿ ಸದಸ್ಯನ ಮಧ್ಯೆ ಮಾತಿನ ಚಕಮಕಿ
ಎಮ್ಮೆಯ ಶಿಲ್ಪಗಳಿರುವ ವೀರಗಲ್ಲುಗಳು ಕರ್ನಾಟಕದಲ್ಲಿ ಅತಿ ವಿರಳ. ಹೆಚ್ಚಿನ ತುರುಗೋಳಿನಲ್ಲಿ ಹಸುಗಳನ್ನೇ ಚಿತ್ರಿಸಿದ್ದಾರೆ. ಆದರೆ, ಈ ರೀತಿ ದೊರೆತಿರುವ ವೀರಗಲ್ಲು ಬಹುಶಃ ರಾಜ್ಯದಲ್ಲಿಯೇ ಪ್ರಥಮ ಎನ್ನಬಹುದು ಎಂಬ ಅಭಿಪ್ರಾಯವನ್ನು ಶೇಜೇಶ್ವರ್ ವ್ಯಕ್ತಪಡಿಸಿದ್ದಾರೆ. ಇವರಿಗೆ ಶಿಲ್ಪವನ್ನು ಗುರುತಿಸಲು ಡಾ. ಜಗದೀಶ್, ಡಾ.ಶೇಷಶಾಸ್ತ್ರಿ, ಡಾ.ಪರಶಿವಮೂರ್ತಿ, ರಮೇಶ್ ಹಿರೇಜಂಬೂರ್,ಮುರುಳಿಕೃಷ್ಣ, ಬಾಬಣ್ಣ ಸಹಕರಿಸಿದ್ದಾರೆ.