ಶಿವಮೊಗ್ಗ: ಕಾರ್ ಬಾಡಿಗೆ ಬಿಡುಗಡೆ ಮಾಡಲು ಲಂಚ ಪಡೆಯುತ್ತಿದ್ದ ಕೃಷಿ ವಿವಿಯ ಹಣಕಾಸು ವಿಭಾಗದ ಅಧಿಕಾರಿಯೊಬ್ಬರು ಎಸಿಬಿ ಬಲೆಗೆ ಬಿದ್ದಿದ್ದಾರೆ. ಶಿವಮೊಗ್ಗದ ಹೊರ ವಲಯದಲ್ಲಿನ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕ ವಿಶ್ವವಿದ್ಯಾನಿಲಯದ ಹಣಕಾಸು ವಿಭಾಗದ ಅಧಿಕಾರಿ ಗಣೇಶಪ್ಪ 5 ಸಾವಿರ ರೂ ಲಂಚ ಪಡೆಯುವಾಗ ಎಸಿಬಿ ಬಲೆಗೆ ಬಿದ್ದಿದ್ದಾರೆ.
ಕೃಷಿ ವಿವಿಗೆ ನವೀನ್ ಎಂಬುವರು ತಮ್ಮ ಕಾರನ್ನು ಗುತ್ತಿಗೆ ಆಧಾರದ ಮೇಲೆ ಓಡಿಸುತ್ತಿದ್ದಾರೆ. ಇವರಿಗೆ ವಿಶ್ವವಿದ್ಯಾನಿಲಯದಿಂದ ಬಾಡಿಗೆ ರೂಪದಲ್ಲಿ 1 ಲಕ್ಷ ರೂ ಹಣ ಬರಬೇಕಿತ್ತು. ಈ ಹಣ ಮಂಜೂರು ಮಾಡಲು ಹಣಕಾಸು ವಿಭಾಗದ ಗಣೇಶಪ್ಪ ನವೀನ್ ಅವರಿಂದ 5 ಸಾವಿರ ರೂ ಲಂಚದ ಬೇಡಿಕೆ ಇಟ್ಟಿದ್ದರು. ಈ ಹಣವನ್ನು ಇಂದು ತಮ್ಮ ಕಚೇರಿಯಲ್ಲಿ ಪಡೆಯುವಾಗ ಎಸಿಬಿ ದಾಳಿಗೆ ಒಳಗಾಗಿದ್ದಾರೆ.
ಎಸಿಬಿ ಡಿವೈಎಸ್ಪಿ ಲೋಕೇಶ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ದಾಳಿ ವೇಳೆ ಇನ್ಸ್ಪೆಕ್ಟರ್ಗಳಾದ ವಸಂತ, ಇಮ್ರಾನ್ ಖಾನ್ ಸೇರಿದಂತೆ ಸಿಬ್ಬಂದಿಗಳಿದ್ದರು.
ಇದನ್ನೂ ಓದಿ : ಜಿಎಸ್ಟಿ ಕಟ್ಟದ ಅಂಗಡಿ ಮಾಲೀಕನ ಬಳಿ ಲಂಚಕ್ಕೆ ಬೇಡಿಕೆ: ಇಬ್ಬರು ಭ್ರಷ್ಟ ಅಧಿಕಾರಿಗಳು ಎಸಿಬಿ ಬಲೆಗೆ