ರಾಮನಗರ : ಬೊಂಬೆನಗರಿ ಚನ್ನಪಟ್ಟಣದಲ್ಲಿ ಸುಸಜ್ಜಿತ ಶಾಲಾ ಕಟ್ಟಡದ ನಿರ್ಮಾಣ ಅಭಿನಂದನೀಯ. ಡಾ.ವೆಂಕಟಪ್ಪ ಅವರ ಕೆಲಸ ಶ್ಲಾಘನೀಯ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ತಿಳಿಸಿದರು. ಇದೇ ವೇಳೆ ನೈಟ್ ಕರ್ಫ್ಯೂರ, ವಾರಾಂತ್ಯದ ಕರ್ಫ್ಯೂ ಹಾಗೂ ಕೋವಿಡ್ ಸಂದರ್ಭದಲ್ಲಿ ಶಾಲೆಗಳನ್ನು ನಡೆಸುವುದು ಬೇಡ ಎಂಬ ಬಗ್ಗೆ ಮಾತನಾಡಿದರು.
ಶಾಲಾ ಕಟ್ಟಡ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ನಂತರ ಪ್ರತಿಕ್ರಿಯಿಸಿದ ಹೆಚ್ಡಿಕೆ, ಕಣ್ವ ಫೌಂಡೇಶನ್ ಟ್ರಸ್ಟಿ ಡಾ.ವೆಂಕಟಪ್ಪ ತಮ್ಮ ಹುಟ್ಟೂರಿಗೆ ಸುಸಜ್ಜಿತ ಶಾಲಾ ಕಟ್ಟಡ ನಿರ್ಮಾಣ ಮಾಡಿ, ಹತ್ತಾರು ಹಳ್ಳಿಗಳಿಗೆ ಈ ಶಾಲೆ ಉಪಯುಕ್ತ ಆಗುವ ಉದ್ದೇಶದಿಂದ ಕೋಟ್ಯಂತರ ರೂ. ವೆಚ್ಚಮಾಡಿ ಶಾಲೆ ಕಟ್ಟುತ್ತಿದ್ದಾರೆ. ಮಕ್ಕಳ ಭವಿಷ್ಯದ ದೃಷ್ಟಿಯಿಂದ ಸುಸಜ್ಜಿತ ಶಾಲೆ ನಿರ್ಮಾಣ ಮಾಡುವ ಮೂಲಕ ಡಾ.ವೆಂಕಟಪ್ಪ ಹೃದಯ ವೈಶಾಲ್ಯತೆ ಮೆಚ್ಚುವಂತದಾಗಿದೆ ಎಂದು ಹೆಚ್ಡಿಕೆ ಹೇಳಿದರು.
ಮಕ್ಕಳಿಗೆ ಹರಡುತ್ತಿರುವ ಕೋವಿಡ್ ವಿಚಾರಕ್ಕೆ ಸಂಬಂಧಿಸಿದಂತೆ ಶಾಲೆಗಳಲ್ಲಿ ಕೋವಿಡ್ ವ್ಯಾಪಕವಾಗಿ ಹರಡುತ್ತಿದೆ. ಇದರಿಂದ ಶಾಲಾ ಕಾಲೇಜುಗಳನ್ನು ಮುಚ್ಚಬೇಕು. ಕನಿಷ್ಠ 15 ರಿಂದ 20 ದಿನಗಳ ಕಾಲ ಮುಚ್ಚಬೇಕು. ವಸತಿ ಶಾಲೆಗಳನ್ನು ಸಂಪೂರ್ಣವಾಗಿ ಬಂದ್ ಮಾಡಲಿ. ತಜ್ಞರು ಅಭಿಪ್ರಾಯಕ್ಕಿಂತ ವಾಸ್ತವಾಂಶ ಮುಖ್ಯವಾಗಿದೆ. ಸರ್ಕಾರ ವಾಸ್ತವಾಂಶದ ಆಧಾರದ ಮೇಲೆ ತೀರ್ಮಾನ ಮಾಡಲಿ ಎಂದರು.
ಮಂಡ್ಯ ಪಿಎಸ್ ಕಾಲೇಜಿನ 160 ಮಕ್ಕಳಿಗೆ ಪಾಸಿಟಿವ್ ಆಗಿದ್ದು, ತುಮಕೂರಿನಲ್ಲಿ 600 ಶಾಲಾ ಮಕ್ಕಳಿಗೆ ಕೋವಿಡ್ ಬಂದಿದೆ. ಒಂದೇ ಶಾಲೆಯ 600 ಮಕ್ಕಳಿಗೆ ಸೋಂಕು ತಗುಲಿದ್ದು, ತಜ್ಞರು ವರದಿಗಿಂತ ಸರ್ಕಾರದ ಜವಾಬ್ದಾರಿ ಹೆಚ್ಚಾಗಿದೆ. ಸರ್ಕಾರ ಜವಾಬ್ದಾರಿ ತೆಗೆದುಕೊಂಡು ಕೆಲಸ ಮಾಡಲಿ, ಮಕ್ಕಳು ಆರೋಗ್ಯ ದೃಷ್ಟಿಯಿಂದ ಕೆಲಸ ಮಾಡಬೇಕಿದೆ. ಮಕ್ಕಳು, ಪೋಷಕರು ಪ್ಯಾನಿಕ್ ಆಗಲು ಅವಕಾಶ ನೀಡಬಾರದು. ಸರ್ಕಾರ ಈ ನಿಟ್ಟಿನಲ್ಲಿ ಚಿಂತಸಲಿ ಎಂದು ಹೆಚ್ಡಿಕೆ ಸಲಹೆ ನೀಡಿದರು.
ಇದಲ್ಲದೇ ವೀಕೆಂಡ್ ಕರ್ಫ್ಯೂ ವಿಚಾರದಲ್ಲಿ ಗೊಂದಲವಿದೆ. ಬಿಜೆಪಿ ಪಕ್ಷದ ನಾಯಕರಲ್ಲೇ ಗೊಂದಲಗಳಿವೆ. ಮೊದಲು ಇದನ್ನು ಅವರು ಸರಿಪಡಿಸಿಕೊಳ್ಳಲಿ. ಕೂಲಿ ಕಾರ್ಮಿಕರು, ಸಣ್ಣಪುಟ್ಟ ವ್ಯಾಪಾರಸ್ಥರು ಕಷ್ಟದಲ್ಲಿದ್ದಾರೆ. ವೀಕೆಂಡ್ ಕರ್ಫ್ಯೂನಿಂದ ಅವರಿಗೆ ಜೀವನ ನಿರ್ವಹಣೆ ಕಷ್ಟವಾಗಿದೆ. ದಿನನಿತ್ಯದ ಆದಾಯದಲ್ಲಿ ಕುಟುಂಬ ನಿರ್ವಹಿಸಬೇಕಿದೆ. ಇಂತಹ ಕುಟುಂಬಗಳ ಬದುಕು ಕಟ್ಟಿ ಕೊಡಬೇಕು. ಬದುಕು ಕಟ್ಟಿಕೊಡುವ ಜವಾಬ್ದಾರಿ ಸರ್ಕಾರದ್ದಾಗಿದೆ. ಪ್ರತಿಪಕ್ಷದವರು ಸುಲಭವಾಗಿ ಹೇಳುತ್ತಾರೆ ಅಂತಾರೆ. ನಾವು ಸರ್ಕಾರ ನಡೆಸಿರೋರೆ ಕಷ್ಟ ನಷ್ಟ ಗೊತ್ತಿದೆ. ಪ್ರತಿಯೊಬ್ಬ ನಾಗರಿಕರ ಹಿತ ಕಾಪಾಡೋದು ಸರ್ಕಾರದ ಜವಾಬ್ದಾರಿಯಾಗಿದೆ ಎಂದರು.
ಸರ್ಕಾರದ ಮೊದಲ ಜವಾಬ್ದಾರಿ ಇದಾಗಿದ್ದು, ಜನರ ಬದುಕು ಕಲ್ಪಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸೋದು ಸರ್ಕಾರದ ಕರ್ತವ್ಯವಾಗಿದ್ದು, ಸರ್ಕಾರವನ್ನು ಇಕ್ಕಟ್ಟಿನಲ್ಲಿ ಸಿಲುಕಿಸುಲು ಹೇಳುತ್ತಿಲ್ಲ. ನಾಡಿನ ಜನರು ನೀಡುವ ಹಣವನ್ನೇ ಬಳಸಿ ಬಡ ವರ್ಗದ ಜನರ ನೆರವಿಗೆ ಸರ್ಕಾರ ಧಾವಿಸಲಿ ಎಂದು ಹೇಳಿದರು.
ಜಾಹಿರಾತು : ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ಇದಲ್ಲದೆ ರಾಮನಗರದಲ್ಲಿ ಕೋವಿಡ್ ಪಾಸಿಟಿವಿಟಿ ರೇಟ್ ಹೆಚ್ಚಿದೆ. ಪಾದಯಾತ್ರೆಯಿಂದ ಹೆಚ್ಚಾಗಿದೆಯೋ ಬೇರೆ ಯಾವುದೇ ಕಾರಣದಿಂದ ಹೆಚ್ಚಾಯ್ತೋ ಚರ್ಚೆ ಮಾಡಲ್ಲ. ಜಿಲ್ಲೆಯ ಅಧಿಕಾರಿಗಳು ಉತ್ತಮ ಕೆಲಸ ಮಾಡುತ್ತಿದ್ದಾರೆ. ಅವರ ಕೆಲಸವನ್ನು ಗುರುತಿಸಿ ಪ್ರೋತ್ಸಾಹ ನೀಡಬೇಕಿದೆ. ಆದರೆ ಕೆಲ ಮಾಧ್ಯಮಗಳು ಬೇರೆ ರೀತಿಯಲ್ಲಿ ವ್ಯಾಖ್ಯಾನ ಮಾಡುತ್ತಿವೆ. ಕೋವಿಡ್ ವಿಚಾರವಾಗಿ ಜಿಲ್ಲೆಯಲ್ಲಿ ಉತ್ತಮ ಕಾರ್ಯವಾಗಿದ್ದು, ಅಧಿಕಾರಿಗಳು ಉತ್ತಮ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದರು.
ಇನ್ನು ಚನ್ನಪಟ್ಟಣದ ಅಭಿವೃದ್ಧಿ ವಿಚಾರವಾಗಿ ಮಾತನಾಡಿದ ಅವರು, ಇಲ್ಲಿಯವರೆಗೆ ಕೆರೆ ತುಂಬಿಸುವ ಕೆಲಸ ಆಯಿತು. ಈಗ ಸೇತುವೆ ಬೇಕು ಎಂಬ ಸಮಸ್ಯೆ ಶುರುವಾಗಿದೆ. ನಾನು ಸಿಎಂ ಆಗಿದ್ದಾಗ ಹಲವು ಅಭಿವೃದ್ಧಿ ಮಾಡಿದ್ದೇನೆ. ಚನ್ನಪಟ್ಟಣದ ಅಭಿವೃದ್ಧಿ ಕೆಲಸವನ್ನು ಮಾಡಿದ್ದೇನೆ. ನಾನು ಮೂರುವರೆ ವರ್ಷದಲ್ಲಿ ಏನು ಮಾಡಿದ್ದೇನೆ. 25 ವರ್ಷದಿಂದ ಬೇರೆಯವರು ಏನು ಮಾಡಿದ್ದಾರೆ ಎನ್ನುವುದನ್ನ ನೋಡಿ. ಮೂರುವರೆ ವರ್ಷದಲ್ಲಿ ಹಲವು ಕಾಮಗಾರಿಗಳಿಗೆ ಚಾಲನೆ ನೀಡಿದ್ದೇನೆ. ಕ್ಷೇತ್ರದ ಜನರಿಗೆ ನನ್ನ ಅಭಿವೃದ್ಧಿ ಕಾರ್ಯ ತಿಳಿದಿದ್ದು, ಚಿಲ್ಲರೆ ರಾಜಕಾರಣ ಮಾಡೋದನ್ನ ಬಿಡಿ. ಜನರನ್ನ ತಪ್ಪು ದಾರಿಗೆಳೆಯಬೇಡಿ, ಇಷ್ಟೆಲ್ಲಾ ಕೆಲಸಗಳು ವ್ಯರ್ಥವಾಗುತ್ತದೆ ಎಂದು ವಿರೋಧಿ ನಾಯಕರಿಗೆ ಮಾಜಿ ಸಿಎಂ ಹೆಚ್ಡಿಕೆ ಟಾಂಗ್ ನೀಡಿದರು.